ಭತ್ತದ ಬೆಲೆ ಕುಸಿತ: ಸಂಕಷ್ಟದಲ್ಲಿ ಅನ್ನದಾತ
Team Udayavani, May 15, 2018, 4:02 PM IST
ಕಂಪ್ಲಿ: ಪಟ್ಟಣ ಸೇರಿದಂತೆ ಕಂಪ್ಲಿ ಹೋಬಳಿಯ ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಭತ್ತವನ್ನು ರೈತರು ಕಟಾವು ಮಾಡುತ್ತಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಪಾತಾಳಕ್ಕಿಳಿದಿದ್ದು, ಭತ್ತವನ್ನು ಕೊಳ್ಳಲು
ಖರೀದಿದಾರರು ಬರುತ್ತಿಲ್ಲ. ಇನ್ನು ಕೊಳ್ಳುವವರು ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಇದರಿಂದ ರೈತರು ಚಿಂತೆಗೀಡಾಗಿದ್ದಾರೆ.
ಹೋಬಳಿ ವ್ಯಾಪ್ತಿಯ ರಾಮಸಾಗರ, ನಂ.10 ಮುದ್ದಾಪುರ, ಕಣವಿ ತಿಮ್ಮಲಾಪುರ, ಸಣಾಪುರ, ಇಟಗಿ, ಬೆಳಗೋಡುಹಾಳು, ದೇವಸಮುದ್ರ, ಹಂಪಾದೇವನಹಳ್ಳಿ, ಎಮ್ಮಿಗನೂರು ಹಾಗೂ ದರೋಜಿ ಗ್ರಾಮಗಳಲ್ಲಿ ತುಂಗಭದ್ರಾ ನದಿ ದಂಡೆಯ ಪಂಪ್ಸೆಟ್ ಆಧಾರಿತ, ತುಂಗಭದ್ರಾ ಬಲದಂಡೆ ಕಾಲುವೆಗಳು, ವಿಜಯನಗರ ಕಾಲುವೆಗಳು ಮತ್ತು ಕೆರೆ ಆಧಾರಿತ ಸಾವಿರಾರು ಎಕರೆ ಪ್ರದೇಶಗಳಲ್ಲಿ ಬೆಳೆದ ಭತ್ತವನ್ನು ರೈತರು ಈಗಾಗಲೇ ಮಾರಾಟ ಮಾಡಿದ್ದಾರೆ. ಕೆಲ ರೈತರು ಕಟಾವು ಮಾಡುವಲ್ಲಿ ನಿರತರಾಗಿದ್ದರೆ, ಇನ್ನು ಕೆಲ ರೈತರ ಭತ್ತದ ಬೆಳೆ ಕಟಾವಿಗೆ ಬಂದಿಲ್ಲ. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ವ್ಯಾಪ್ತಿಯಲ್ಲಿ ಬೆಳೆದ ಭತ್ತವನ್ನು ರೈತರು ಕಟಾವು ಮಾಡಿ ರಾಶಿ ಹಾಕಿಕೊಂಡು ಭತ್ತದ ಖರೀದಿದಾರರಿಗಾಗಿ ಎದುರು ನೋಡುತ್ತಿದ್ದಾರೆ.
ಬೆಲೆ ಕುಸಿತ: ಕಳೆದ ಕೆಲ ದಿನಗಳಿಂದ ಇಲ್ಲಿನ ಮಾರುಕಟ್ಟೆಯಲ್ಲಿ ಗುಣಮಟ್ಟದ ಗಂಗಾ, ಕಾವೇರಿ ಭತ್ತ 950 ರಿಂದ 1020 ರೂ. (75 ಕೆ.ಜಿ.) ಬೆಲೆ ಇದೆ. ಇಲ್ಲಿನ ಎಲ್.ಎಲ್. ಕಾಲುವೆಗೆ ಕೊನೆ ದಿನಗಳಲ್ಲಿ ನೀರನ್ನು ಸ್ಥಗಿತಗೊಳಿಸಲಾಯಿತು. ಬೆಳೆಗೆ ಸಮರ್ಪಕ ನೀರಿಲ್ಲದೆ, ಕಾಳು ಅಷ್ಟಾಗಿ ಬೆಳೆಯಲಿಲ್ಲ. ಇದೀಗ ಕಟಾವು ಮಾಡಿ ರಾಶಿ ಹಾಕಲಾಗಿದೆ. ಕಾಳು ಸ್ವಲ್ಪ ನುಚ್ಚಾಗುವುದರಿಂದ ಇದನ್ನು 75 ಕೆ.ಜಿ. ಚೀಲಕ್ಕೆ 900 ರೂ.ಗಳಿಗೆ ಕೇಳುತ್ತಿದ್ದಾರೆ. ಆದರೂ ಯಾರು ಖರೀದಿಸುತ್ತಿಲ್ಲ. ನೆರೆಯ ಆಂಧ್ರಪ್ರದೇಶದಲ್ಲಿ ಬೆಳೆದ ಭತ್ತವನ್ನು ರೈತರು ಇಲ್ಲಿಗೆ ತಂದು ಮಾರಾಟ ಮಾಡುತ್ತಿರುವುದು ಸೇರಿದಂತೆ ಇತರೆ ಕಾರಣಗಳಿಂದ ಬೆಲೆ ಕುಸಿತವಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ಕಂಪ್ಲಿಗೆ ನೆರೆಯ ರಾಜ್ಯದಿಂದ ಪ್ರತಿದಿನ ಹಲವಾರು ಲಾರಿಗಳಲ್ಲಿ ಭತ್ತದ ಲೋಡ್ಗಳು ಬರುವುದರಿಂದ ಇಲ್ಲಿನ ಭತ್ತವನ್ನು ಕೇಳುವವರು ಇಲ್ಲದಂತಾಗಿದೆ.
ಖರ್ಚು-ವೆಚ್ಚ: ಭತ್ತ ಬೆಳೆಯಲು ಒಂದು ಎಕರೆಗೆ ಸುಮಾರು 30ರಿಂದ 35 ಸಾವಿರ ರೂ. ವೆಚ್ಚ ಮಾಡಲಾಗಿದೆ. ಕಾಲುವೆಯಲ್ಲಿ ನೀರಿಲ್ಲದೆ ಇಳುವರಿ ಕುಂಠಿತವಾಗಿದೆ. ಏ.23ರಂದು ಮಳೆ ಜೊತೆಗೆ ಬೀಸಿದ ಬಿರುಗಾಳಿಯ ಹೊಡೆತಕ್ಕೆ ಭತ್ತ ನೆಲಕ್ಕೆ ಬಿದ್ದಿದೆ. ಇದನ್ನು ಕಟಾವು ಮಾಡಲು ಯಂತ್ರಕ್ಕೆ ಎಕರೆಗೆ 5,000 ರೂ. ಬಾಡಿಗೆ ತೆರಬೇಕಾಗಿದೆ.
ಈಗಿನ ಬೆಲೆಗೆ ಭತ್ತ ಮಾರಾಟ ಮಾಡಿದರೆ ನಮಗೆ ಲಾಭ ಹೋಗಲಿ ಮಾಡಿದ ಖರ್ಚು ಬರುವುದು ಕಷ್ಟವಾಗಿದೆ ಎಂದು ರೈತರಾದ ಜಿ.ಸಂಗಪ್ಪ, ರಾಗಿ ಭದ್ರಯ್ಯಸ್ವಾಮಿ, ರತ್ನಗಿರಿ ಕೊಲ್ಲಿಪರ, ಹನುಮಂತರಾಯ್ಡು, ಬಿಂಗಿ ವಿರುಪಣ್ಣ,
ಜಿ.ಲಿಂಗನಗೌಡ, ಕಡೆಮನಿ ಪಂಪಾಪತಿ ಸೇರಿದಂತೆ ಅನೇಕರು ಅಳಲು ತೋಡಿಕೊಳ್ಳುತ್ತಾರೆ.
ಜಿ.ಚಂದ್ರಶೇಖರಗೌಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ