ಟಿ.ಬಿ.ಡ್ಯಾಂನಿಂದ ಹೆಚ್ಚುವರಿ ನೀರು ನದಿಗೆ : ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ
ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ
Team Udayavani, Jul 13, 2022, 7:01 PM IST
ಹೊಸಪೇಟೆ : ತುಂಗಭದ್ರಾ ಜಲಾಶಯದ ಒಳಹರಿವು ಕ್ಷಣ, ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಜಲಾಶಯದ 30 ಕ್ರಸ್ಟ್ ಗೇಟ್ಗಳ ಮೂಲಕ 110078 ಕ್ಯೂಸೆಕ್ಸ್ ನೀರನ್ನು ಬುಧವಾರ ನದಿಗೆ ಹರಿಸಲಾಯಿತು.
ಪ್ರಸ್ತುತ ಜಲಾಶಯಕ್ಕೆ ಸರಾಸರಿ 108803 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠಮಟ್ಟ 1633 ಅಡಿ ಇದ್ದರೆ, ಇಂದಿನ ಮಟ್ಟ 1631.51 ಅಡಿಯಿದೆ. 105 ಸಂಗ್ರಹ ಸಾಮಾರ್ಥ್ಯ ಹೊಂದಿರುವ ಜಲಾಶಯದಲ್ಲಿ 99.859 ಟಿಎಂಸಿ ಅಡಿಗಳು ಇದೆ. ಕಾಲುವೆ 4995 ಹಾಗೂ ನದಿಗೆ 110078 ಕ್ಯೂಸೆಕ್ ಸೇರಿ ಒಟ್ಟು 115248 ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿಪಾತ್ರದ ಗ್ರಾಮಗಳ ಜನ-ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ವಿಜಯನಗರ ಜಿಲ್ಲೆಯ ನದಿಪಾತ್ರದಲ್ಲಿರುವ 15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಪ್ರವಾಹ ತಗ್ಗುವವರಿಗೂ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ಮಾಹಿತಿ ಪಡೆಯಲಾಗುತ್ತಿದೆ. ಪ್ರವಾಹ ಸ್ಥಿತಿ ಎದುರಿಸಲು ಜಿಲ್ಲಾಡಳಿತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದ್ದಾರೆ.
ಟಿ.ಬಿ.ಡ್ಯಾಂಗೆ ಜನಸಾಗರ:
ತುಂಗಭದ್ರಾ ಜಲಾಶಯ ಭರ್ತಿಯಾಗಿ ಮೈದುಂಬಿಕೊಳ್ಳುತ್ತಿದಂತೇ, ಇತ್ತ ಟಿ.ಬಿ.ಡ್ಯಾಂ ವೀಕ್ಷಣೆಗೆ ಜನಸಾಗರವೇ ಹರಿದು ಬರುತ್ತಿದೆ. ಜಲಾಶಯದ ಗೇಟ್ಗಳಿಂದ ದುಮ್ಮಿಕ್ಕುವ ನೀರಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಮೊಬೈಲ್ ಕ್ಯಾಮೆರಾದ ಮೂಲಕ ಸೆಲ್ಪಿ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಿದ್ದಾರೆ.
ಇದನ್ನೂ ಓದಿ : ಕೊಡಗಿನಲ್ಲಿ ಆತಂಕ ಮೂಡಿಸಿದ ಗಾಳಿಯ ವೇಗ: ಧರೆಗುರುಳಿದ ಮರಗಳು
ಟಿ.ಬಿ.ಡ್ಯಾಂಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಹುಬ್ಬಳ್ಳಿ, ಧಾರವಾಡ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ನಾನಾ ಭಾಗಗಳಿಂದ ಪ್ರವಾಸಿಗರ ದಂಡು ಟಿ.ಬಿ.ಡ್ಯಾಂ ಕಡೆ ದಾವಿಸಿ ಬರುತ್ತಿದೆ.