ವಿಜಯನಗರ ಜಿಲ್ಲೆ ಪ್ರಸ್ತಾಪ: ಸಚಿವ ಬಿ.ಶ್ರೀರಾಮುಲು ಅಪಸ್ವರ
Team Udayavani, Sep 20, 2019, 1:03 PM IST
ಬಳ್ಳಾರಿ: ಹೊಸಪೇಟೆಯನ್ನು ವಿಜಯನಗರ ಜಿಲ್ಲೆಯನ್ನಾಗಿ ಮಾಡಲು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಪಸ್ವರ ಎತ್ತಿದ್ದು, ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ನಗರ ಹೊರವಲಯದಲ್ಲಿನ ನಿವಾಸದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಬಗ್ಗೆ ಕೆಲವೊಂದು ವಿಷಯಗಳನ್ನು ಬಹಿರಂಗ ಪಡಿಸಲು ನಿರಾಕರಿಸಿದ ಸಚಿವ ರಾಮುಲು, ಈ ಬಗ್ಗೆ ಪರ ವಿರೋಧ ಚರ್ಚೆಯಾಗುತ್ತಿದೆ. ನಾನು ಸಹ ಕ್ಯಾಬಿನೇಟ್ ನಲ್ಲಿ ಈ ಕುರಿತು ಮಾತನಾಡುವೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಬಳಿ ಮಾತನಾಡುವ ಪ್ರಯತ್ನ ಮಾಡಿದ್ದೇನೆ. ಈ ಬಗ್ಗೆ ಹೆಚ್ಚಿನ ವಿಷಯ ಪ್ರಸ್ತಾಪ ಮಾಡಲು ಸಾಧ್ಯವಾಗಿಲ್ಲ. ನನ್ನ ವೈಯಕ್ತಿಕ ಅಭಿಪ್ರಾಯ ಒಟ್ಟಾಗಿರಬೇಕು ಎಂದರು.
ಇದೇ ವೇಳೆ ಬಳ್ಳಾರಿ ಜಿಲ್ಲೆಯಲ್ಲಿ ನಾವೆಲ್ಲರೂ ಒಂದಾಗಿರಬೇಕು ಎಂದ ರಾಮುಲು, ಬಳ್ಳಾರಿ ಅಖಂಡವಾಗಿ ಇದ್ದರೆ ಅಭಿವೃದ್ಧಿ ಸಾಧ್ಯವಾಗುತ್ತದೆ. ಈಗಾಗಲೇ ಹೊಸ ಜಿಲ್ಲೆಗಳಾಗಿರುವುದನ್ನು ನಾವು ನೋಡಿದ್ದೇವೆ. ಅಭಿವೃದ್ಧಿ ಕುಂಠಿತವಾಗುತ್ತದೆ. ಈಗ ಈ ಬಗ್ಗೆ ಹೆಚ್ಚು ಮಾತನಾಡಿ ಮುಖ್ಯಮಂತ್ರಿಗಳಿಗೆ ಮುಜುಗರ ಮಾಡಲು ಹೋಗಲ್ಲ. ಹಲವರು ಈ ಬಗ್ಗೆ ಅಧ್ಯಯನ ಮಾಡಲಿದ್ದಾರೆ ಎಂದು ಸ್ಪಷ್ಟಪಡಿಸಿದರು.