ಬಯಲು ಸೀಮೆಯಲ್ಲಿ ಮಲೆನಾಡ ಬೆಳೆ!
ಬರಡು ಭೂಮಿಯಲ್ಲಿ ಶುಂಠಿ ಬೆಳೆದ ರೈತಸರ್ಕಾರಿ ಕೆಲಸದೊಂದಿಗೆ ನಿತ್ಯ ಕೃಷಿ ಮಾಡುವ ಗೋವಿಂದಪ್ಪ
Team Udayavani, Nov 27, 2019, 1:32 PM IST
ಶ್ರೀಶೈಲ ಕೆ. ಬಿರಾದಾರ
ಬಾಗಲಕೋಟೆ: ಮಲೆನಾಡ ಸಿರಿಯಲ್ಲಿ ಮಾತ್ರ ಬೆಳೆಯಬಹುದು ಎಂಬ ವಿರಳ ಬೆಳೆಯನ್ನು ಇಲ್ಲೊಬ್ಬ ಪ್ರಗತಿಪರ ರೈತ-ಅಧಿಕಾರಿ ಬಯಲು ಸೀಮೆಯಲ್ಲೂ ಬೆಳೆದು ಸ್ವತಃ ಕೃಷಿ ಇಲಾಖೆ ಅಧಿಕಾರಿಗಳ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೌದು, ಸರ್ಕಾರಿ ದಿನಗಳಂದು ರೈತರಿಗಾಗಿ ಕೆಲಸ. ರಜೆ ದಿನಗಳು ಹಾಗೂ ನಿತ್ಯ ಬೆಳಗ್ಗೆ-ಸಂಜೆ ಸ್ವತಃ ರೈತನಾಗಿ ದುಡಿಯುವ ಹಂಬಲ. ಮಲೆನಾಡ ಸಿರಿಯಲ್ಲಿ ಬೆಳೆಯುವ ಬೆಳೆಯನ್ನು ಬಯಲು ಸೀಮೆಯಲ್ಲಿ ಬೆಳೆದು ಕೈತುಂಬ ಸಂಪಾದನೆ ಮಾಡುತ್ತಿದ್ದಾರೆ. ಜತೆಗೆ ಸುತ್ತಮುತ್ತಲ ರೈತರಿಗೆ ಆ ಬೆಳೆ ಬೆಳೆಯುವ ಪದ್ಧತಿಯೂ ಹೇಳಿಕೊಡುತ್ತಿದ್ದಾರೆ.
ರೈತನಾದ ಅಧಿಕಾರಿ: ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದ ಗೋವಿಂದಪ್ಪ ಹುಲ್ಪಪ್ಪ ಹುಲ್ಲನವರ ಹಿರೇಮುಚ್ಚಳಗುಡ್ಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿ ಕೂಡ. ಪಿಕೆಪಿಎಸ್ನಲ್ಲಿ ರೈತರ ಸಮಸ್ಯೆ, ಬೆಳೆಯ ಕುರಿತು ನಿತ್ಯ ಕೇಳುತ್ತಿದ್ದ ಇವರು, ತಾವೂ ಕೃಷಿ ಮಾಡಬೇಕು. ಅದು ಇತರರಿಗೆ ಮಾದರಿಯಾಗಬೇಕೆಂಬ ಸಂಕಲ್ಪದೊಂದಿಗೆ ಆರಂಭಿಸಿದ ಕೃಷಿ ಅವರ ಕೈ ಹಿಡಿದಿದೆ. ಅಧಿಕಾರಿಯಾಗಿದ್ದ ಇವರು, ಈಗ ರೈತರೂ ಆಗಿದ್ದಾರೆ. ತಮ್ಮ ಪೂರ್ವಜರು, ಕೆಂದೂರ ಗ್ರಾಮದಲ್ಲಿ ಹೊಂದಿರುವ 5 ಎಕರೆ 12 ಗುಂಟೆ ಭೂಮಿಯಲ್ಲಿ ಮೊದಲು ಮಲೆನಾಡ ಬೆಳೆ ಎಂದೇ ಕರೆಸಿಕೊಳ್ಳುವ ಶುಂಠಿ (ಅಲ್ಲಾ) ಬೆಳೆಯುತ್ತಿದ್ದಾರೆ. ಮೊದಲಿಗೆ 1 ಎಕರೆಯಲ್ಲಿ ಮಾತ್ರ ಶುಂಠಿ ಬೆಳೆದಿದ್ದ ಗೋವಿಂದಪ್ಪ, ಅದಕ್ಕಾಗಿ ಸುಮಾರು 80 ಸಾವಿರ ಖರ್ಚು ಮಾಡಿದ್ದರು.
ಆರಂಭದಲ್ಲಿ ಗೋವಿಂದಪ್ಪ ಏನೇನೋ ಬೆಳಿತಾನ. ಮಳಿ ಹೆಚ್ಚ ಇರುವ ಭೂಮ್ಯಾಗ್ ಅದನ್ನ ಬೆಳಿತಾರ. ನಮ್ಮಂತ ಹೊಲ್ದಾಗ ಅದೇನ್ ಬೆಳಿತೈತಿ ಎಂದು ಕುಹುಕವಾಡಿದ್ದರು. ಸ್ವತಃ ಕೃಷಿ ಇಲಾಖೆಗೆ ಹೋಗಿ, ಶುಂಠಿ ಬೆಳೆ ಪದ್ಧತಿ ಕುರಿತು ಕೇಳಿದಾಗಲೂ, ನಮ್ಮ ಭಾಗದಲ್ಲಿ ಶುಂಠಿ ಬೆಳೆಯಲು ಆಗಲ್ಲ ಎಂದು ಹೇಳಿದ್ದರಂತೆ. ಆದರೂ, ಒಂದು ಪ್ರಯೋಗ ಮಾಡೋಣ ಎಂದು ಶುಂಠಿ ಬೆಳೆದ ರೈತ ಗೋವಿಂದಪ್ಪ, ಈಗ ಸುಮಾರು 8-10 ಹಳ್ಳಿಯ ರೈತರಿಗೆ ಪ್ರೇರಣೆಯಾಗಿದ್ದಾರೆ.
ಶುಂಠಿಗೆ ಬಹು ಬೇಡಿಕೆ: ಹಸಿ ಶುಂಠಿ ಹಾಗೂ ಶುಂಠಿ ಎರಡು ತೆರನಾಗಿ ಶುಂಠಿ ಉತ್ಪಾದನೆ ಮಾಡಬಹುದು. ಗೋವಿಂದಪ್ಪ ಅವರು ಹಸಿ ಶುಂಠಿಯನ್ನೇ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಬಹು ಬೇಡಿಕೆ ಕೂಡ ಇದೆ. ಒಂದು ಕೆ.ಜಿ. ಕನಿಷ್ಠ 80ರಿಂದ 120 ರೂ. ವರೆಗೆ ಮಾರಾಟವಾಗುತ್ತದೆ. ಅಲ್ಲದೇ ನಿರ್ವಹಣೆ ಬಹು ಕಡಿಮೆ. ಒಮ್ಮೆ ನಾಟಿ ಮಾಡಿದರೆ 9 ತಿಂಗಳವರೆಗೆ ವೆಚ್ಚದಾಯಕವಲ್ಲದ ಬೆಳೆಯೂ ಆಗಿದೆ. ಒಂದು ಎಕರೆ ಶುಂಠಿ ಬಿತ್ತನೆ ಮಾಡಲು ಕನಿಷ್ಠ 6 ಕ್ವಿಂಟಲ್ ಬೀಜ ಬೇಕಾಗುತ್ತದೆ. ಅದಕ್ಕೆ ಸುಮಾರು 30 ಸಾವಿರ ಖರ್ಚಾಗುತ್ತದೆ. ಉಳುಮೆ, ಹನಿ ನೀರಾವರಿ ಅಳವಡಿಕೆ, ತಿಪ್ಪೆ ಗೊಬ್ಬರ ಎಲ್ಲವೂ ಸೇರಿ ಒಂದು ಎಕರೆಗೆ 80 ಸಾವಿರ ಖರ್ಚು ಬರುತ್ತದೆ. ಆದರೆ, 9 ತಿಂಗಳ ಬಳಿಕ 4.60 ಲಕ್ಷದಿಂದ 5 ಲಕ್ಷ ವರೆಗೆ ಆದಾಯ ಬರುತ್ತದೆ ಎಂಬುದು ಗೋವಿಂದಪ್ಪ ಅವರ ಅನುಭವ.
6 ಎಕರೆ ಶುಂಠಿ: ಗೋವಿಂದಪ್ಪ ಒಂದು ಎಕರೆ ಶುಂಠಿ ಬೆಳೆದು ಅದರ ಲಾಭ ಕಂಡ ಬಳಿಕ ಈಗ ಬರೋಬ್ಬರಿ ಆರು ಎಕರೆ ಶುಂಠಿ ಬೆಳೆಯುತ್ತಿದ್ದಾರೆ. ತಮ್ಮ ಸ್ವಂತ 5 ಎಕರೆ 12 ಗುಂಟೆ ಭೂಮಿಯ ಜತೆಗೆ ಲಾವಣಿಗೆ 5 ಎಕರೆ ಹೊಲ ಮಾಡಿದ್ದಾರೆ. ಆರು ಎಕರೆ ಶುಂಠಿ ಬೆಳೆಯ ಜತೆಗೆ ಮೆಣಸಿನಕಾಯಿ, ಬಾಳೆ, ತೊಗರಿ, ಉಳ್ಳಾಗಡ್ಡಿ, ವಿವಿಧ ತರಕಾರಿ ಹೀಗೆ ಮಿಶ್ರ ಬೆಳೆಯೂ ಬೆಳೆಯುತ್ತಿದ್ದಾರೆ. ಇವರ ಶುಂಠಿ ಕೃಷಿ ನೋಡಿ, ಬಾದಾಮಿ ತಾಲೂಕಿನ ಕಬ್ಬಲಗೇರಿ, ಗೋನಾಳ, ಕುಟಕನೇರಿ, ಕೆಂದೂರ, ಕಟಗೇರಿ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳ ರೈತರು, ಇವರ ಹೊಲಕ್ಕೆ ಬಂದು ಕೃಷಿ ಪದ್ಧತಿ ನೋಡಿ, ಶುಂಠಿ ಬೀಜವನ್ನೂ ತೆಗೆದುಕೊಂಡು ಹೋಗಿದ್ದಾರೆ.
ಅತ್ಯಂತ ಕಡಿಮೆ ನಿರ್ವಹಣೆ, ಕಡಿಮೆ ನೀರು ಹಾಗೂ ತಿಪ್ಪೆ ಗೊಬ್ಬರದ ಮೂಲಕ ಶುಂಠಿ ಬೆಳೆದು, ಬಯಲು ಸೀಮೆಯಲ್ಲೇ ಮಲೆನಾಡ ಬೆಳೆ ಬೆಳೆಯಬಹುದು ಎಂಬುದನ್ನು ತೋರಿಸಿದ್ದಾರೆ.
ಶ್ರಮಪಟ್ಟು ದುಡಿಯಬೇಕು ಈಗಿನ ರೈತರು ಶ್ರಮಪಟ್ಟು ದುಡಿದರೆ ಯಾವ ಬೆಳೆಯೂ ಕೈಕೊಡಲ್ಲ. ತಮ್ಮ ಬ್ಯಾಂಕ್ ಖಾತೆಗೆ ಬಂದ 100 ರೂ. ಚೆಕ್ ಮಾಡಲು ಹೋಗಿ, 200 ರೂ. ಖರ್ಚು ಮಾಡುವ ಪದ್ಧತಿ ರೈತರಲ್ಲಿದೆ. ಇದು ಬದಲಾಗಿ, ನಿತ್ಯ ಹೊಲದಲ್ಲಿ ಶ್ರಮಪಟ್ಟು ದುಡಿದರೆ ಕೈ ತುಂಬ ಸಂಪಾದನೆ ಮಾಡಬಹುದು. ಪಾರಂಪರಿಕ ಕೃಷಿ ಬಿಟ್ಟು, ಮಿಶ್ರ ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು. ನಮ್ಮ ಸ್ವಂತ 5 ಎಕರೆ ಹಾಗೂ ಲಾವಣಿ ಮಾಡಿದ 5 ಎಕರೆ ಸೇರಿ ಒಟ್ಟು 10 ಎಕರೆಯಲ್ಲಿ 6 ಎಕರೆ ಶುಂಠಿ, 2 ಎಕರೆ ಮೆಕ್ಕೆಜೋಳ, 20 ಗುಂಟೆಯಲ್ಲಿ 250 ಮಾಗಣಿ ಗಿಡ, 50 ಪೇರಲ, 100 ತೆಂಗು, ತರಕಾರಿ, ತೊಗರಿ, ಈರುಳ್ಳಿ ಬೆಳೆದಿದ್ದೇನೆ. ಒಂದು ಎಕರೆ ಶುಂಠಿಯಿಂದ 4.80 ಲಕ್ಷ ಪಡೆದಿದ್ದು, ಅದರಲ್ಲಿ ಹಾಕಿದ್ದ ಮೆಣಸಿನಕಾಯಿಂದ 70 ಸಾವಿರ ಪಡೆದಿದ್ದೇನೆ. ಶುಂಠಿ ಹಾಗೂ ಮಿಶ್ರ ಬೆಳೆ, ನನ್ನ ಕೈ ಹಿಡಿದಿದೆ. ನಾನು ನಿತ್ಯ ಪಿಕೆಪಿಎಸ್ಗೆ ಹೋಗುವ ಮುಂಚೆ, ಕೆಲಸ ಮುಗಿಸಿ ಬಂದ ಬಳಿಕ ಹೊಲದಲ್ಲಿ ದುಡಿಯುತ್ತೇನೆ. ಇಬ್ಬರು ಕೂಲಿಕಾರರು ನಿತ್ಯ ಹೊಲಕ್ಕೆ ಬರುತ್ತಾರೆ. ನನ್ನ ವೃತ್ತಿಯ ಜತೆಗೆ ಕೃಷಿಯಲ್ಲಿ ನೆಮ್ಮದಿಯಾಗಿದ್ದೇನೆ ಎಂದು ರೈತ ಗೋವಿಂದಪ್ಪ ಹುಲ್ಲನ್ನವರ ಹೇಳಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು