ಮಾಗಿ ಉಳುಮೆಯತ್ತ ರೈತನ ಚಿತ್ತ
ಮುಂದಿನ ವರ್ಷದ ಕೃಷಿ ಚಟುವಟಿಕೆಗೆ ಈಗಿನಿಂದಲೇ ಹೊಲ ಸಜ್ಜುಗೊಳಿಸಲು ಯತ್ನ
Team Udayavani, Nov 22, 2019, 12:55 PM IST
ಎಚ್.ಬಿ. ನಿರಂಜನ ಮೂರ್ತಿ
ಭರಮಸಾಗರ: ಪ್ರಸಕ್ತ ವರ್ಷ ಬಿತ್ತನೆ ಮಾಡಿದ್ದ ಎರಡು ಬೆಳೆಗಳು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕೈಕೊಟ್ಟಿವೆ. ಹಾಗಾಗಿ ಇಲ್ಲೊಬ್ಬ ರೈತ ಜಮೀನಿನ ಮಾಗಿ ಉಳುಮೆ ಮಾಡುವ ಮೂಲಕ ಮುಂಬರುವ ವರ್ಷಕ್ಕೆ ಹೊಲವನ್ನು ಸಿದ್ಧಗೊಳಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.
ಸಮೀಪದ ವಿಜಾಪುರ ಗ್ರಾಮದ ಪರಮೇಶ್ವರಪ್ಪ ಎಂಬುವವರು ಹೆದ್ದಾರಿ ಸನಿಹದಲ್ಲೇ ಇರುವ ಸುಮಾರು ಮೂರು ಎಕರೆ ಜಮೀನಿನಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಬಿದ್ದ ಅಲ್ಪ ಮಳೆಗೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಳಿಕ ಮಳೆ ಕೊರತೆ ಎದುರಾಗಿ ಮೆಕ್ಕೆಜೋಳ ಫಸಲು ತೆನೆಗಟ್ಟದೆ ಅರ್ಧಕ್ಕೆ ಬೆಳೆದು ನಷ್ಟಕ್ಕೆ ತುತ್ತಾಗಿತ್ತು.
ಇದರಿಂದ ವಿಚಲಿತರಾಗದ ಪರಮೇಶ್ವರಪ್ಪ, ಎರಡನೇ ಬಾರಿ ನವಣೆ ಬೆಳೆ ಬಿತ್ತನೆ ಮಾಡಿದ್ದರು. ಆದರೆ ನವಣೆ ಬೆಳೆ ಅತಿಯಾದ ಮಳೆಯಿಂದಾಗಿ ಕಾಳುಗಟ್ಟುವ ಹಂತದಲ್ಲಿ ಮಳೆಗೆ ಸಿಲುಕಿ ಹುಲ್ಲು ನೆಲಕ್ಕೆ ಬಿದ್ದು ನಷ್ಟ ಉಂಟು ಮಾಡಿತ್ತು. ಇದರಿಂದ ಎರಡೆರಡು ಬೆಳೆಗಳನ್ನು ಬೆಳೆಯುವ ಸಾಹಸಕ್ಕೆ ಕೈಹಾಕಿದ ರೈತ ಸಾಲದ ಸುಳಿಗೆ ಸಿಲುಕಬೇಕಾಯಿತು. ವಿಜಾಪುರ, ಲಕ್ಷ್ಮೀಸಾಗರ, ಬೀರಾವರ, ತಿಮ್ಮಪ್ಪನಹಳ್ಳಿ, ಕೆ.ಬಳ್ಳೇಕಟ್ಟೆ ಸೇರಿದಂತೆ ಹಿರೇಗುಂಟನೂರು ಹೋಬಳಿಯ ಬಹುತೇಕ ನಷ್ಟದ ಹಾದಿ ತುಳಿದಿದ್ದಾರೆ.
ಎರಡನೇ ಬಾರಿ ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲು ಮುಂದಾಗಿರುವವರು ಒಂದಿಷ್ಟು ಫಸಲು ಪಡೆದಿದ್ದಾರೆ. ಆದರೆ ಮೆಕ್ಕೆಜೋಳದ ಬಳಿಕ ನವಣೆ ಬೆಳೆಯಲು ಹೋದ ಪರಮೇಶ್ವರಪ್ಪ ಮಾತ್ರ ನಷ್ಟ ಅನುಭವಿಸಿದ್ದಾರೆ.
ಮಳೆ ಆಗಿದೆ ಎಂಬುದು ಎಷ್ಟು ಸತ್ಯವೋ ಮಳೆ ಸುರಿದ ಹಲವು ಕಡೆ ಬೆಳೆ ನಷ್ಟಕ್ಕೆ ತುತ್ತಾಗಿರುವ ಪರಮೇಶ್ವರಪ್ಪ ಅವರಂತಹ ರೈತರು ಹಲವರಿದ್ದಾರೆ. ಆದರೆ ಇಂತಹ ರೈತರನ್ನು ಗುರುತಿಸಿ ಬೆಳೆ ನಷ್ಟ ಪರಿಹಾರ ಒದಗಿಸುವ ಅಥವಾ ವಿಮೆ ಹಣವನ್ನಾದರೂ ರೈತನಿಗೆ ಬರುವಂತೆ ಮಾಡಬೇಕಾಗಿದೆ. ಆದರೆ ವ್ಯವಸ್ಥೆಯ ನಿರ್ಲಕ್ಷ್ಯದಿಂದ ರೈತರು ಸಂಕಷ್ಟ ಎದುರಿಸಬೇಕಾಗಿದೆ.
ಇಷ್ಟೆಲ್ಲಾ ನಷ್ಟ ಹಾಗೂ ಮಳೆ ಹಿಂದೆ ಸರಿದಿರುವ ನಡುವೆ ಬೆಳೆ ನಷ್ಟವಾದ ಜಮೀನಿನಲ್ಲಿ ಮಾಗಿ ಉಳುಮೆ ಮಾಡುವ ಮೂಲಕ ಮುಂಬರುವ ವರ್ಷಕ್ಕೆ ಜಮೀನನ್ನು ಸಿದ್ಧಪಡಿಸಿಕೊಳ್ಳುವ ಮೂಲಕ ಪರಮೇಶ್ವರಪ್ಪನವರು ಇತರೆ ರೈತರಿಗೆ ಮಾದರಿಯಾಗಿದ್ದಾರೆ.
ಮಳೆ ಆಶ್ರಯದ ಭೂಮಿಯೊಂದಿಗೆ ಎರಡು ಎಕರೆ ಅಡಿಕೆ ತೋಟವಿದೆ. ತೋಟ ಉಳಿಸಿಕೊಳ್ಳಲು ಬೇಸಿಗೆಯಲ್ಲಿ ನೀರಿಗೆ ಭಗೀರಥ ಪ್ರಯತ್ನ ಮಾಡಿದ್ದೇವೆ. ಈ ನಡುವೆ ಮಳೆ ಆಶ್ರಯದ ಭೂಮಿಯಲ್ಲಿ ಒಮ್ಮೆ ಬೆಳೆ ಮಳೆ ಕೊರತೆಗೆ, ಮತ್ತೂಮ್ಮೆ ಹೆಚ್ಚು ಮಳೆಯಿಂದ ನಷ್ಟಕ್ಕೆ ಒಳಗಾಗಿದೆ. ಮಾಗಿ ಮಾಡಿದರೆ ಮುಂಬರುವ ವರ್ಷದ ಬೆಳೆಗೆ ಅನುಕೂಲವಾಗುತ್ತದೆ.
ಪರಮೇಶ್ವರಪ್ಪ,
ವಿಜಾಪುರ ಗ್ರಾಮದ ರೈತ