ಗಾಂಧಿ ತತ್ವ ಪುನರುತ್ಥಾನಕ್ಕೆ ಸಂಕಲ್ಪ ಯಾತ್ರೆ ಆಯೋಜನೆ
ಗಾಂಧೀಜಿ ಹೆಸರು ಹೇಳಿ ರಾಜಕೀಯ ಮಾಡುವವರಿಂದಲೇ ತತ್ವಗಳ ನಾಶ: ಸಚಿವ ಸಿ.ಟಿ. ರವಿ
Team Udayavani, Nov 17, 2019, 1:16 PM IST
ಬೀದರ: ಮಹಾತ್ಮ ಗಾಂ ಧೀಜಿ ಅವರ ದೇಹವನ್ನು ನಾಥೋರಾಮ್ ಗೋಡ್ಸೆ ಕೊಂದಿದ್ದರೆ, ಅವರ ತತ್ವಗಳನ್ನು ಕೊಂದವರು ಗಾಂಧಿಧೀಜಿ ಹೆಸರು ಹೇಳಿಕೊಂಡು ರಾಜಕೀಯ ಮಾಡುವ ವಾರಸುದಾರರು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಕಿಡಿಕಾರಿದರು.
ನಗರದ ಚೆನ್ನಮ್ಮ ವೃತ್ತದಲ್ಲಿ ಶನಿವಾರ ಗಾಂಧಿ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗಾಂಧೀಜಿ ವಾರಸುದಾರರು ಅವರ ಸಿದ್ಧಾಂತ, ವಿಚಾರಧಾರಗಳಿಗೆ ತದ್ವಿರುದ್ಧವಾಗಿ ನಡೆದುಕೊಂಡು ಬಂದಿದ್ದಾರೆ. ಗಾಂಧಿ ದೇಹವನ್ನು ಬದುಕಿಸಿ ತರುವ ಶಕ್ತಿ ನಮಗಿಲ್ಲ. ಆದರೆ, ಅವರ ತತ್ವಗಳ ಪುನರುತ್ಥಾನ ಆಗಬೇಕಿದೆ. ಅದಕ್ಕಾಗಿ ಈ ದೇಶದೆಲ್ಲೆಡೆ ಈ ಸಂಕಲ್ಪ ಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಗಾಂಧಿ ಟೋಪಿ ಸ್ವಾಭಿಮಾನದ ಸಂಕೇತ, ಅವರ ಸರಳ ಬದುಕಿನ ದ್ಯೋತಕ. ನಾವು ಗಾಂಧಿ ಟೋಪಿ ಹಾಕಿಕೊಂಡು ಉಳಿದ ಜನರಿಗೆ ಟೋಪಿ ಹಾಕುವುದಲ್ಲ. ಆದರೆ, ಗಾಂಧೀಜಿ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವವರು ಉಳಿದವರಿಗೆ ಟೋಪಿ ಹಾಕುವ ಕೆಲಸ ಮಾಡಿದರು. ನಾವು
ಹಾಗೆ ಮಾಡುವುದು ಬೇಡ ಎಂದರು.
ಕಾಂಗ್ರೆಸ್ ಹೋರಾಟಗಾರರ ವೇದಿಕೆ ಹೊರತು ರಾಜಕೀಯ ವೇದಿಕೆ ಅಲ್ಲ. ಹಾಗಾಗಿ ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ಅನ್ನ ವಿಸರ್ಜನೆ ಮಾಡಿ ನಿಮಗೆ ಬೇಕಾದ ವೇದಿಕೆಯನ್ನು ಕಟ್ಟಿಕೊಳ್ಳಿ ಎಂದು ಗಾಂಧೀಜಿ ಹೇಳಿದ್ದರು. ರಾಜಕೀಯದಲ್ಲಿ ವಂಶ ಪರಂಪರೆ ಪ್ರಜಾಪ್ರಭುತ್ವ ಆಶಯದ ವಿರುದ್ಧ ಎಂದು ಅವರು ನಂಬಿದ್ದರು. ಆದರೆ, ಅವರ ವಾರಸುದಾರರು ಗಾಂಧಿ ವಿಚಾರಧಾರೆಯಂತೆ ನಡೆದುಕೊಳ್ಳದಿರುವುದು ದುರ್ದೈವದ ಸಂಗತಿ ಎಂದು ಹೇಳಿದರು. ಗಾಂಧೀಜಿ ಅವರ ವ್ಯಕ್ತಿತ್ವದ ಬಗ್ಗೆ ಸಣ್ಣತನದ ಆಲೋಚನೆ ನಾನು ಮಾಡಿಲ್ಲ. ಆದರೆ, ಅವರ ಕೆಲವು ನಿಲುವುಗಳ ಬಗ್ಗೆ ನನ್ನಲ್ಲಿ ಸಂಶಯ ಇದೆ. ಒಬ್ಬ ವ್ಯಕ್ತಿಯಾಗಿ ಶತ್ರವನ್ನು ಮಿತ್ರನನ್ನಾಗಿ ನೋಡುವುದು ತಪ್ಪಲ್ಲ. ಆದರೆ, ರಾಷ್ಟ್ರದ ವಿಷಯದಲ್ಲಿ ಶತ್ರು ದೇಶವನ್ನು ಶತ್ರುವನ್ನಾಗಿ ಕಾಣಬೇಕಾಗುತ್ತದೆ. ಶತ್ರು ರಾಷ್ಟ್ರ ತನ್ನ ಬುದ್ಧಿ ಮುಂದುವರಿಸಿದರೆ ದೇಶಕ್ಕೆ ಹಾನಿಯಾಗುತ್ತದೆ. ಇಂಥ ಕೆಲವು ವಿಷಯಗಳಲ್ಲಿ ಪ್ರಶ್ನಾರ್ಥಕ ಚಿಹ್ನೆ ಇದೆ ಎಂದು ಸಚಿವ ಹೇಳಿದರು.
ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪುರೆ, ಬಿಜೆಪಿ ಜಿಲ್ಲಾಧ್ಯಕ್ಷ ಡಾ|ಶೈಲೇಂದ್ರ ಬೆಲ್ದಾಳೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಯಾತ್ರೆಯ ಸಂಚಾಲಕ ಬಾಬು ವಾಲಿ, ಪ್ರಮುಖರಾದ ಗುರುನಾಥ ಕೊಳ್ಳೂರ, ಎನ್.ಆರ್. ವರ್ಮಾ, ಬಾಬುರಾವ ಮದಕಟ್ಟಿ, ಈಶ್ವರಸಿಂಗ್ ಠಾಕೂರ್, ಬಸವರಾಜ ಪವಾರ ಮತ್ತಿತರರು ಇದ್ದರು.