ಶಿಶಿಕ್ಷು ತರಬೇತಿಯಿಂದ ಕೌಶಲ್ಯ ಅಭಿವೃದ್ಧಿ: ಕುಲಕರ್ಣಿ
Team Udayavani, Oct 23, 2019, 4:46 PM IST
ಬೀದರ: ಐಟಿಐ ಯುವಕರ ನಿರುದ್ಯೋಗ ಶಮನ ಮಾಡಬಲ್ಲದು. ಕೇವಲ ಐಟಿಐ ಪಾಸಾದರೆ ಸಾಲದು, ಕೈಗಾರಿಕೆಯ ಕೌಶಲ್ಯ ಅಭಿವೃದ್ಧಿ ಪಡೆಸಿಕೊಳ್ಳಲು ಶಿಶಿಕ್ಷು ತರಬೇತಿ ತುಂಬಾ ಪ್ರಸ್ತುತ ಎಂದು ಎನ್ಈಕೆಆರ್ಟಿ ವಿಭಾಗೀಯ ನಿಯಂತ್ರಣಾ ಧಿಕಾರಿ ಶಶಿಧರ ಕುಲಕರ್ಣಿ ಹೇಳಿದರು.
ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿಭಾಗೀಯ ಕಚೇರಿ ಕಲಬುರಗಿ ಹಾಗೂ ಜೆಎಸ್ಡಬ್ಲು ಸ್ಟೀಲ್ ಲೀ. ತೋರಣಗಲ್ ಸಹಯೋಗದಲ್ಲಿ ನಡೆದ ಶಿಶಿಕ್ಷು ಅಭಿಯಾನ, ಶಿಶಿಕ್ಷು ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಶಿಶಿಕ್ಷು ತರಬೇತಿ ಐ.ಟಿ.ಐ ತರಬೇತಿದಾರರ ಕೌಶಲ್ಯಕ್ಕೆ ಸ್ಪೂರ್ತಿ ನೀಡಬಲ್ಲದು. ಎನ್ಈಕೆಆರ್ಟಿಸಿಯಲ್ಲಿ ಈಗಾಗಲೇ ಶಿಶುಕ್ಷು ತರಬೇತಿ ಅಕ್ಷರಶಃ ಅನುಷ್ಠಾನಗೊಳಿಸಿದ್ದೇವೆ. ಮುಂದೆ ಕೋಪಾ ಪಾಸಾದ 20 ತರಬೇತಿದಾರರಿಗೆ ಶಿಶಿಕ್ಷು ತರಬೇತಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಯಾವ ಐಟಿಐನಲ್ಲಿ ಪ್ರಾಥಮಿಕ ಪ್ರಾಯೋಗಿಕ ಪಾಠ ಚೆನ್ನಾಗಿ ಕರಗತ ಮಾಡಿಕೊಂಡಿರುತ್ತಾರೊ ಅಂಥವರು ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸಬಲ್ಲರು. ಐಟಿಐ ಮಕ್ಕಳಿಗೆ ಉತ್ತೀರ್ಣರಾಗಲು ಪಾಠ ಮಾಡುವುದರ ಜೊತೆಗೆ ಪರಿಪೂರ್ಣ ಕೌಶಲ ಕಲಿಸಿ ಆಚೆ ಕಳುಹಿಸಿದರೆ ನಿರುದ್ಯೋಗದಿಂದ ಯಾವ ತರಬೇತಿದಾರನೂ ಬಳಲುವುದಿಲ್ಲ ಎಂದರು.
ಉದ್ಯೋಗ ಮತ್ತು ತರಬೇತಿ ಇಲಾಖೆಯ ಕಲಬುರಗಿ ವಿಭಾಗೀಯ ಸಹಾಯಕ ನಿರ್ದೇಶಕ ಶರಣಬಸಪ್ಪಾ ಸಡ್ಡು ಮಾತನಾಡಿ, ವ್ಯಕ್ತಿಯಲ್ಲಿ ಪರಿವರ್ತನೆ ಉಜ್ವಲ ಭವಿಷ್ಯಕ್ಕೆ ನಾಂದಿ. ನೀವು ಸಮಸ್ಯೆಗಳನ್ನು ಹೇಳುವುದಾದರೆ ಜೊತೆಗೆ ಪರಿಹಾರ ನಿಮ್ಮಲ್ಲೆ ಇರುತ್ತದೆ. ಉಪದೇಶ ದೊಡ್ಡದಲ್ಲ, ಅನುಷ್ಠಾನ ಮುಖ್ಯ. ಶಿಸ್ತು, ಕಲಿಕೆ, ಜಾಗರೂಕತೆ ಅಳವಡಿಸಿಕೊಳ್ಳಿ. ಶಿಶಿಕ್ಷು ತರಬೇತಿಗಾಗಿ ಈಗಾಗಲೆ ಸರ್ಕಾರ ಆನ್ ಲೈನ್ ಪೋರ್ಟಲ್ ಮಾಡಿದ್ದು. ನಿಮ್ಮ ಅಂಕಪಟ್ಟಿ ಹಸ್ತಾಂತರ ಮಾಡುವ ಮುನ್ನ ಪ್ರತಿ ಐಟಿಐನವರು ನೋಂದಣಿ (ಶಿಶಿಕ್ಷು) ಮಾಡಿದರೆ ತರಬೇತಿದಾರರಿಗೆ ಅನೂಕೂಲ ಎಂದರು.
ಜಿಂದಾಲ ಸ್ಟೀಲ್ ಕಾರ್ಖಾನೆಯ ಅ ಧಿಕಾರಿ ಅನೀಲಕುಮಾರ ಬಿ.ಸಿ. ಮಾತನಾಡಿ, ತರಬೇತಿದಾರರಿಗೆ ಶಿಶಿಕ್ಷು ತರಬೇತಿ ಅಗತ್ಯ ಎಂದು ಹೇಳಿದರು. ಕಾರ್ಖಾನೆಯ ವೀರುಪಾಕ್ಷ ಗೌಡಾ ಮಾತನಾಡಿ, ಇಂದು ನಡೆದ ಶಿಶಿಕ್ಷು ಮೇಳದಲ್ಲಿ ಒಟ್ಟು 98 ವಿವಿಧ ವೃತ್ತಿಯ ತರಬೇತಿದಾರರು ಪಾಲ್ಗೊಂಡಿದ್ದರು.
ಅದರಲ್ಲಿ ಜೋಡಣೆಗಾರದಿಂದ 16, ವಿದ್ಯುತಕರ್ಮಿಯಿಂದ 14, ವಿದ್ಯುನ್ಮಾನ ದುರಸ್ತಿಗಾರದಿಂದ 5, ಕೋಪಾದಿಂದ 3, ಬೆಸುಗೆಗಾರದಿಂದ 3, ಎಂಆರ್ಎಸಿದಿಂದ 2, ಎಂಎಂವಿದಿಂದ 1, ಹೀಗೆ ಒಟ್ಟು 44 ತರಬೇತಿದಾರರು ಆಯ್ಕೆಯಾಗಿದ್ದು, ಅಕ್ಟೋಬರ್ ತಿಂಗಳ ಮೊದಲನೇ ವಾರದಲ್ಲಿ ತರಬೇತಿಗೆ ಹಾಜರಾದತಕ್ಕದ್ದು ಎಂದು ಮಾಹಿತಿ ನೀಡಿದರು.
ಪ್ರಭಾರಿ ಪ್ರಾಚಾರ್ಯ ಶಿವಶಂಕರ ಟೋಕರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಐಟಿಐ ತರಬೇತಿದಾರರ ಕೌಶಲ್ಯ ಉಜ್ವಲಗೊಳಿಸುವುದಲ್ಲದೆ ಪಾಸಾದ ತಕ್ಷಣ ಅವರಿಗೆ ಜೀವನ ಭವಿಷ್ಯ ರೂಪಿಸಿಕೊಡಲು ಕ್ಯಾಂಪಸ್ ಮಾಡಲಾಗುತ್ತಿದೆ ಎಂದು ಹೇಳಿದರು.
ಸಾರಿಗೆ ಸಂಸ್ಥೆಯ ಚಂದ್ರಶೇಖರ, ಎಂ.ಜಿ. ದೊಡ್ಡಮನಿ, ಪ್ರಭುಸ್ವಾಮಿ ಮತ್ತು ಲೈಫ್ ಸೈನ್ಸ್ ಕೈಗಾರಿಕೆಯ ಸುಧೀಂದ್ರ ಸಹ ತರಬೇತಿ ಶಿಶಿಕ್ಷು ಬಗ್ಗೆ ಮಾಹಿತಿ ನೀಡಿದರು. ಐಟಿಐ ಪ್ರಾಚಾರ್ಯ ಲಕ್ಷ್ಮಿಕಾಂತ ಔರಾದ, ಪ್ರಶಾಂತ ಜಾಂತಿಕರ, ಸತ್ಯವಾನ ಗಾಯಕವಾಡ, ಸುಭಾಷ ಯಾವಳೆ, ರಾಜಣ್ಣ ಚಿಂಚೊಳಿಕರ ಇದ್ದರು. ಬಾಬು ರಾಜೋಳಕರ ಸ್ವಾಗತಿಸಿದರು. ಬಾಬು ಪ್ರಭಾಜಿ ನಿರೂಪಿಸಿದರು. ವಿನಾಯಕ ಗುರ್ಲಾ ವಂದಿಸಿದರು.