ಗುರುದ್ವಾರಕ್ಕೆ ಸಚಿವರ ಭೇಟಿ-ಕಮಿಟಿ ಸನ್ಮಾನ
Team Udayavani, Nov 17, 2019, 5:11 PM IST
ಬೀದರ: ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಅವರು ಶನಿವಾರ ನಗರದ ಸಿಖ್ಖರ ಪವಿತ್ರ ತಾಣ ಗುರುದ್ವಾರಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಶ್ರೀ ಗುರುದ್ವಾರ ನಾನಕ್ ಝಿರಾ ಸಾಹಿಬ್ ಪ್ರಬಂಧಕ್ ಕಮಿಟಿಯ ಪದಾಧಿಕಾರಿಗಳು ವಿಶೇಷ ಉಡುಗೆ ಹಾಗೂ ಪೇಟ ತೊಡಿಸಿ, ಖಡ್ಗ ನೀಡುವ ಮೂಲಕ ಸಚಿವರನ್ನು ಸ್ವಾಗತಿಸಿದರು. ಪ್ರತಿ ವರ್ಷ ಲಕ್ಷಾಂತರ ಯಾತ್ರಿಗಳು ಗುರುದ್ವಾರಕ್ಕೆ ಭೇಟಿ ನೀಡುತ್ತಾರೆ.
ಇವರಿಗೆ ಉಳಿದು ಕೊಳ್ಳಲು ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ ಒದಗಿಸಬೇಕು. ಬೀದರ ಗುರುದ್ವಾರ ದರ್ಶನಕ್ಕಾಗಿ ಪಂಜಾಬ್ ರಾಜ್ಯದಿಂದ ಸಾಕಷ್ಟು ಭಕ್ತರು ಆಗಮಿಸುತ್ತಾರೆ. ಅಲ್ಲಿಂದ ನೇರ ರೈಲ್ವೆ ಸಂಪರ್ಕ ಇಲ್ಲವಾದ್ದರಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತಿದೆ. ಹಾಗಾಗಿ ಬೀದರನಿಂದ ಪಂಜಾಬ್ ವರೆಗೆ ನೇರ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಕೋರಿದರು.
ತಮ್ಮ ಬೇಡಿಕೆಗಳನ್ನು ಪೂರೈಸುವುದಾಗಿ ಸಚಿವರು ಭರವಸೆ ನೀಡಿದರು. ಸಂಸದ ಭಗವಂತ ಖೂಬಾ, ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ಮುಖಂಡರಾದ ಶೈಲೇಂದ್ರ ಬೆಲ್ದಾಳೆ, ಗುರುನಾಥ ಕೊಳ್ಳೂರ್, ಸೂರ್ಯಕಾಂತ ನಾಗಮಾರಪಳ್ಳಿ, ಈಶ್ವರಸಿಂಗ್ ಠಾಕೂರ್, ಬಾಬು ಬಾಲಿ ಹಾಗೂ ಇತರರು ಇದ್ದರು. ಬಳಿಕ ಸಚಿವರು ಬಸವಗಿರಿಯ ಲಿಂಗಾಯತ ಮಹಾಮಠಕ್ಕೆ ಭೇಟಿ ನೀಡಿದರು.