ಬಿಜೆಪಿ-ಕಾಂಗ್ರೆಸ್ಗೆ ಬಹುಮತ ಕಷ್ಟ
•ಗೆಲುವು ತಂದುಕೊಡುವುದೇ ಸಚಿವ ಪಾಟೀಲ ತಂತ್ರಗಾರಿಕೆ?•ಕಮಲ-ಮೈತ್ರಿಯಲ್ಲಿದೆ ಹೆಚ್ಚಿನ ವಿಶ್ವಾಸ
Team Udayavani, May 2, 2019, 12:04 PM IST
ಬೀದರ: ಈ ಸಲದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಹಾಗೂ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಮಧ್ಯೆ ಭಾರಿ ಫೈಟ್ ನಡೆದಿದ್ದು, ಹುಮನಾಬಾದ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಬಹುಮತ ಬರಲಿದೆ ಎಂಬ ಲೆಕ್ಕಾಚಾರ ಎಲ್ಲೆಡೆ ಶುರುವಾಗಿದೆ.
ಬೀದರ ಲೋಕಸಭೆ ಚುನಾವಣೆ ಸಾಮಾನ್ಯ ಕ್ಷೇತ್ರವಾಗಿ ಬದಲಾದ ನಂತರ ನಡೆದ ಎರಡು ಲೋಕಸಭೆ ಚುನಾವಣೆಯಲ್ಲಿ ಒಂದು ಬಾರಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೊಂದು ಬಾರಿ ಬಿಜೆಪಿಗೆ ಬಹುಮತ ನೀಡಿದ ಹುಮನಾಬಾದ ವಿಧಾನಸಭಾ ಕ್ಷೇತ್ರ ಈ ಬಾರಿ ಯಾವ ಪಕ್ಷಕ್ಕೆ ಮಣೆ ಹಾಕುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಪ್ರಧಾನಿ ಮೋದಿ ಅವರ ಜನಪರ ಯೋಜನೆಗಳು ಹಾಗೂ ದೇಶ ರಕ್ಷಣೆಗೆ ತೆಗೆದುಕೊಂಡ ನಿರ್ಣಯಗಳ ಹಿನ್ನೆಲೆಯಲ್ಲಿ ಜಾಣ ಮತದಾರರು ಬಿಜೆಪಿಗೆ ಬೆಂಬಲಿಸಿದ್ದಾರೆ. ಈ ಬಾರಿ ಮತ್ತೆ ಬಿಜೆಪಿಗೆ ಲೀಡ್ ಬರಲಿದೆ ಎಂದು ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ, ಕ್ಷೇತ್ರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ ಅವರ ಪ್ರಭಾವ ಹೆಚ್ಚಿರುವ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳು ಬರುವುದು ಖಚಿತ ಎಂದು ಕಾಂಗ್ರೆಸ್ ಕಾರ್ಯಕರ್ತರು ವಾದ ಮಂಡಿಸುತ್ತಿದ್ದಾರೆ. ವಾಸ್ತವದಲ್ಲಿ ಚುನಾವಣೆ ತೀವ್ರ ಹಣಾಹಣಿಯಿಂದ ನಡೆದಿರುವ ಪರಿಣಾಮ ಸ್ವಲ್ಪ ಅಂತರದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಪಕ್ಷ ಲೀಡ್ ಪಡೆಯಬಹುದು. ಆದರೆ ಭಾರಿ ಪ್ರಮಾಣದ ಲೀಡ್ ನಿರೀಕ್ಷಿಸುವುದು ಸಾಧ್ಯವಿಲ್ಲ ಎನ್ನುತ್ತಾರೆ ವಿಶ್ಲೇಷಕರು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ 60,059 ಮತಗಳು ಬಂದಿದ್ದವು. ಕಾಂಗ್ರೆಸ್ ಅಭ್ಯರ್ಥಿ ದಿ| ಎನ್. ಧರ್ಮಸಿಂಗ್ ಅವರಿಗೆ 47,188 ಮತಗಳು ಲಭಿಸಿದ್ದವು. ಜೆಡಿಎಸ್ನಿಂದ ಸ್ಪರ್ಧಿಸಿದ್ದ ಬಂಡೆಪ್ಪ ಖಾಶೆಂಪುರ ಅವರು 10,698 ಮತ ಪಡೆದುಕೊಂಡಿದ್ದರು. ಅಲ್ಲದೆ, 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದಿ| ಗುರುಪಾದಪ್ಪ ನಾಗಮಾರಪಳ್ಳಿ 37,009 ಹಾಗೂ ಕಾಂಗ್ರೆಸ್ ಅಭ್ಯರ್ಥಿ ದಿ| ಎನ್.ಧರ್ಮಸಿಂಗ್ 49,540 ಮತ ಪಡೆದುಕೊಂಡಿದ್ದರು. ಹುಮನಾಬಾದ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಬೆಲೆ ನೀಡುವ ಮತದಾರರು ಇದ್ದಾರೆ. ಈ ಕ್ಷೇತ್ರದ ಮೇಲೆ ಇಲ್ಲಿನ ಪಾಟೀಲ ಪರಿವಾರ ಹಿಡಿತ ಸಾಧಿಸಿದೆ. ಈ ಹಿಂದೆ ದಿ| ಬಸವರಾಜ ಪಾಟೀಲ ಇದೇ ಕ್ಷೇತ್ರದಿಂದ ಶಾಸಕರಾಗಿ ಸಚಿವರಾಗಿದ್ದರು. ಇದೀಗ ಅವರ ಪುತ್ರ ರಾಜಶೇಖರ ಪಾಟೀಲ ನಾಲ್ಕು ಬಾರಿ ಶಾಸಕರಾಗಿ, ಮೈತ್ರಿ ಸರ್ಕಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರಾಗಿದ್ದಾರೆ. ಲೋಕ ಸಮರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮಿಸಿದ ಪಾಟೀಲ, ಈ ಬಾರಿ ಹೆಚ್ಚಿನ ಲೀಡ್ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದರು ಕೂಡ ಜೆಡಿಎಸ್ ಪಕ್ಷದವರಿಗೆ ಕಾಂಗ್ರೆಸ್ ಪಕ್ಷದವರು ಮಹತ್ವ ನೀಡಿಲ್ಲ ಎಂಬ ಆರೋಪಗಳು ಈ ಕ್ಷೇತ್ರದಲ್ಲಿ ಕೇಳಿಬಂದಿದ್ದು, ಜೆಡಿಎಸ್ ಕಾರ್ಯಕರ್ತರು ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದು ಮಾತುಗಳು ಕೇಳಿ ಬಂದಿವೆ. ಆದರೆ, ಜೆಡಿಎಸ್ ಮುಖಂಡರು ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ, ಈ ಕ್ಷೇತ್ರದಲ್ಲಿ ಬಿಎಸ್ಪಿ ಅಭ್ಯರ್ಥಿ ಬುಖಾರಿ ಕೂಡ ಸ್ವಲ್ಪ ಪ್ರಮಾಣದ ಮತ ಪಡೆಯುವ ಸಾಧ್ಯತೆ ಇದ್ದು, ಅದು ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪಮಟ್ಟಿಗೆ ನಷ್ಟ ಉಂಟು ಮಾಡಬಹುದಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಹಿಂದಿನ ಮುಖ್ಯಮಂತ್ರಿ ಸಿದ್ದರ್ರಾಮಯ್ಯ ನೇತೃತ್ವದಲ್ಲಿ ರೈತರು ಸೇರಿದಂತೆ ಎಲ್ಲ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ನೀಡಿದ ಯೋಜನೆ, ರಾಜ್ಯದ ಹಾಲಿ ಮೈತ್ರಿ ಸರ್ಕಾರದ ಸಾಧನೆಗಳು ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರೀರಕ್ಷೆಯಾಗಿವೆ. ಕೇಂದ್ರದ ಬಿಜೆಪಿ ಸರ್ಕಾರ ಕಳೆದ 5ವರ್ಷದಲ್ಲಿ ಕೇವಲ ಮಾತಿನ ಮಹಲು ಕಟ್ಟಿ ಮಾಡಿದ ಮೋಸದಿಂದ ಬೇಸತ್ತಿರುವ ಮತದಾರರು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಈಶ್ವರ ಖಂಡ್ರೆ ಅವರನ್ನು ಕನಿಷ್ಠ 1 ಲಕ್ಷ ಮತದಿಂದ ಗೆಲ್ಲಿಸುತ್ತಾರೆ. ಹುಮನಾಬಾದ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಲೀಡ್ ಸಾಧಿಸಲಿದೆ.
•ಅಪ್ಸರಮಿಯ್ನಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ರಾಜ್ಯದ ರೈತರು ಒಳಗೊಂಡಂತೆ ಎಲ್ಲ ವರ್ಗದವರ ಆರ್ಥಿಕ ಸಬಲೀಕರಣಕ್ಕೆ ಪೂರಕ ಯೋಜನೆ ರೂಪಿಸಿದ್ದನ್ನು ಮೆಚ್ಚಿ ಮತ್ತು ಕೇಂದ್ರದ ಎನ್ಡಿಎ ಸರ್ಕಾರ ನೀಡಿದ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾರಣ ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಬರಲಿವೆ. ಸರಳ ಸಜ್ಜನಿಕೆ ವ್ಯಕ್ತಿಯಾಗಿರುವ ಈಶ್ವರ ಖಂಡ್ರೆ ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲ್ಲಲಿದ್ದಾರೆ.
•ಮಹೇಶ ಅಗಡಿ, ಜೆಡಿಎಸ್ ತಾಲೂಕು ಅಧ್ಯಕ್ಷ
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯದ ಜತೆ ಸಂಸದ ಭಗವಂತ ಖೂಬಾ ಅವರು ಹೆಚ್ಚಿನ ರೈಲ್ವೆ ಸೌಲಭ್ಯ ಕಲ್ಪಿಸಿರುವುದು, ಫಸಲ ಬಿಮಾ ಯೋಜನೆ ಅಡಿ ಜಿಲ್ಲೆಯ ರೈತರಿಗೆ ಅತ್ಯಂತ ಹೆಚ್ಚಿನ ಲಾಭ ತಂದುಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಕೇಂದ್ರದ ಬಹುತೇಕ ಯೋಜನೆಗಳು ಅರ್ಹ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೆಚ್ಚಿನ ಲೀಡ್ ಪಡೆದು ಜಯಗಳಿಸುತ್ತದೆ. ಈ ಬಾರಿ ಸುಭಾಷ ಕಲ್ಲೂರ ಅವರು ತಮ್ಮ ಚುನಾವಣೆಗಿಂತಲೂ ಅತಿ ಹೆಚ್ಚು ಶ್ರಮವಹಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಲೀಡ್ ಬರಲಿದೆ.
•ವಿಶ್ವನಾಥ ಪಾಟೀಲ ಮಾಡ್ಗುಳ,
ಬಿಜೆಪಿ ತಾಲೂಕು ಅಧ್ಯಕ್ಷ
•ದುರ್ಯೋಧನ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್