112 ತುರ್ತು ಸ್ಪಂದನ; ಸಚಿವರಿಂದ ಜಾಗೃತಿ
Team Udayavani, Oct 30, 2021, 10:44 AM IST
ಬೀದರ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಶುಕ್ರವಾರ ತಾಲೂಕಿನ ಬಗದಲ್ ಗ್ರಾಮದಲ್ಲಿ ಪೊಲೀಸ್ ಇಲಾಖೆಯ 112 ತುರ್ತು ಸ್ಪಂದನ ಸಹಾಯವಾಣಿ ಕುರಿತು ಜಾಗೃತಿ ಮೂಡಿಸಿದರು.
100 (ಪೊಲೀಸ್), 101 (ಅಗ್ನಿಶಾಮಕ ಮತ್ತು ರಕ್ಷಣೆ) ಹಾಗೂ ಇತರೆ ತುರ್ತು ಸಂಖ್ಯೆಗಳನ್ನು 112 ಸಂಖ್ಯೆಗೆ ಏಕೀಕೃತಗೊಳಿಸಿ, ಯಾವುದೇ ರೀತಿಯ ತುರ್ತು ಸಂದರ್ಭದಲ್ಲಿ “112′ ಸಂಖ್ಯೆಯೊಂದನ್ನೇ ಬಳಸುವ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದರು.
ಅಗ್ನಿ ಅನಾಹುತ, ವಿಪತ್ತು ಸಂದರ್ಭ, ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಜಗಳ, ಅಕ್ರಮ ಮದ್ಯ ಮಾರಾಟ, ಜೂಜಾಟ, ಡ್ರಗ್ಸ್ ಮಾರಾಟ, ಮಹಿಳೆ ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಹಿರಿಯ ನಾಗರಿಕರ ರಕ್ಷಣೆ ಮುಂತಾದ ಸಂದರ್ಭಗಳಲ್ಲಿ ಸಾರ್ವಜನಿಕರು “112′ ಸಂಖ್ಯೆ ಕರೆ ಮಾಡಿದರೆ ತುರ್ತಾಗಿ ಸ್ಪಂದಿಸಿ ನೆರವಿಗೆ ಧಾವಿಸಲಾಗುತ್ತದೆ. ಸಾರ್ವಜನಿಕರು ಯೋಜನೆಯ ಲಾಭ ಪಡೆಯಬೇಕು ಎಂದು ಮನವಿ ಮಾಡಿದರು.
ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪಾ ಕಂಟೆ, ಪಿಎಸ್ಐ ಸಂಗೀತಾ, ಮುಖಂಡರಾದ ನಾಗೇಶ ರೆಡ್ಡಿ, ರಾಜರೆಡ್ಡಿ ಶಾಬಾದ, ಜಗನ್ನಾಥ ರೆಡ್ಡಿ, ಶಿವಕುಮಾರ ಪಾಂಚಾಳ ಇದ್ದರು.