ಪ್ರಕೃತಿ ವಿಕೋಪದಡಿ 5 ಲಕ್ಷ ರೂ. ಪರಿಹಾರಕ್ಕೆ ಪ್ರಯತ್ನ
Team Udayavani, Jul 12, 2022, 6:15 PM IST
ಭಾಲ್ಕಿ: ಹಳೇ ಪಟ್ಟಣದಲ್ಲಿ ಮಳೆಯಿಂದ ಮನೆಯೊಂದು ಕುಸಿತ ಕಂಡ ಹಿನ್ನೆಲೆಯಲ್ಲಿ ಶಾಸಕ ಈಶ್ವರ ಖಂಡ್ರೆ ಭೇಟಿ ನೀಡಿ ಪರಿಶೀಲಿಸಿದರು.
ಗೋದಾವರಿ ಉದಯಕುಮಾರ ದೇಶಮುಖೆ ಅವರ ಮನೆಗೆ ಭೇಟಿ ನೀಡಿದ ಅವರು, ಮಳೆಯಿಂದ ಮನೆಯ ಮೇಲ್ಛಾವಣಿ ಕುಸಿತ ಆಗಿದ್ದನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ನಿವಾಸಿ ಗೋದಾವರಿ ಅವರು ರಾತ್ರಿ ವೇಳೆ ಮನೆಯ ಮೇಲ್ಛಾವಣಿ ಕುಸಿದು ಗಾಯವಾಗಿದೆ. ನಾನು ಮಕ್ಕಳು ಉಳಿದಿದ್ದೆ ಪುಣ್ಯ ಎಂದು ಕಣ್ಣೀರಟ್ಟರು.
ಶಾಸಕರು ಮಹಿಳೆಗೆ ಧೈರ್ಯ ತುಂಬಿ ವೈಯಕ್ತಿಕವಾಗಿ 20 ಸಾವಿರ ರೂ. ಪರಿಹಾರ ನೀಡಿದಲ್ಲದೇ ಸ್ಥಳದಲ್ಲೇ ಪ್ರಕೃತಿ ವಿಕೋಪದಡಿ ಸರಕಾರದಿಂದ ತಹಶೀಲ್ದಾರ್ ಮೂಲಕ 10 ಸಾವಿರ ರೂ. ಚೆಕ್ ಕೊಡಿಸಿ, ಶೇ.75ಕ್ಕೂ ಹೆಚ್ಚು ಪ್ರತಿಶತ ಮನೆ ಕುಸಿದೆ. ಹೀಗಾಗಿ ರಾಜೀವ ಗಾಂಧಿ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಕೊಡಲಾಗುವುದು. ಅದು ಸಾಧ್ಯವಾಗದಿದ್ದರೇ ಸರಕಾರದ ಮೇಲೆ ಒತ್ತಡ ತಂದು 5 ಲಕ್ಷ ರೂ. ಪರಿಹಾರ ಕೊಡಿಸುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ತಹಶೀಲ್ದಾರ್ ಕೀರ್ತಿ ಚಾಲಕ್, ಮುಖ್ಯಾಧಿಕಾರಿ ಸ್ವಾಮಿದಾಸ್ ಸೇರಿದಂತೆ ಹಲವರು ಇದ್ದರು.