ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಪ್ರಯತ್ನ
Team Udayavani, Jan 12, 2020, 4:44 PM IST
ಅಫಜಲಪುರ: ಮಳೆಗಾಲದಲ್ಲಿ ಮಳೆ ಬಂದು ಹರಿದು ಹೋಗುವ ನೀರನ್ನು ತಡೆದು ನಿಲ್ಲಿಸುವುದಕ್ಕಾಗಿ ಅಣೆಕಟ್ಟೆಗಳನ್ನು ನಿರ್ಮಾಣ ಮಾಡುವುದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಶಾಸಕ ಎಂ.ವೈ. ಪಾಟೀಲ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಸರ್ವೇ ನಂ. 97/2, 105ರಲ್ಲಿ ಲೋಕಲ್ ನಾಲಾಕ್ಕೆ
ಸಣ್ಣ ನೀರಾವರಿ ಇಲಾಖೆ ವತಿಯಿಂದ 65 ಲಕ್ಷ ವೆಚ್ಚದ ಅಣೆಕಟ್ಟು ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ನೀರಿನ ಕೊರತೆ ಬಹಳಷ್ಟು ಕಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ನೀರಿನ ಸ್ವಾವಲಂಬನೆಗಾಗಿ ನಾವು ಈಗಿನಿಂದಲೇ ಎಲ್ಲಾ ಪ್ರಯತ್ನಗಳನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ಅನೇಕ ನೀರಾವರಿ ಯೋಜನೆಗಳನ್ನು ತಾಲೂಕಿನಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.
ಈ ಅಣೆಕಟ್ಟು ನಿರ್ಮಾಣದಿಂದ 124 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.
ಅಲ್ಲದೇ ಇದರ ಸುತ್ತಮುತ್ತಲಿನಲ್ಲಿ ಇರುವ ಕೊಳವೆ ಬಾವಿ, ತೆರದ ಬಾವಿಗಳಿಗೆ ನೀರಿನ
ಅಭಾವ ಇಲ್ಲದಂತಾಗಲಿದೆ. ಅಂತರ್ಜಲ ಮಟ್ಟ ಹೆಚ್ಚಳವಾಗಿ ನೀರಿನ ಸೌಲಭ್ಯ ಎಲ್ಲರಿಗೂ ಸಿಗಲಿದೆ. ಸಣ್ಣ ನೀರಾವರಿ ಇಲಾಖೆಯಿಂದ 72 ಕೋಟಿ ವೆಚ್ಚದಲ್ಲಿ ಘೂಳನೂರ ಬಳಿ
ಬ್ರಿಜ್ ಕಂ ಬ್ಯಾರೇಜ್ ಕೂಡ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಳೇಂದ್ರ ಮಠದ ಪೀಠಾ ಧಿಪತಿ ಶ್ರೀ ಷ.ಬ್ರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಇಸ್ರೇಲ್ ಮಾದರಿಯ ಕೃಷಿ ನಮ್ಮಲ್ಲಿ ಬಂದಾಗ ಕೃಷಿಕರಿಗೆ ಅನುಕೂಲವಾಗಲಿದೆ ಎಂದರು. ತಾ.ಪಂ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಂ.ವೈ. ಪಾಟೀಲ ಶಾಸಕರಾದ ಬಳಿಕ ಇಲ್ಲಿಯವರೆಗೆ ಸಾವಿರಾರು ಕೋಟಿ ಕಾಮಗಾರಿ ತಾಲೂಕಿನಾದ್ಯಂತ ಕೈಗೊಂಡಿದ್ದಾರೆ. ಅದರಲ್ಲೂ ನೀರವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ರೈತರ ಕಲ್ಯಾಣ ಆಗುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಶಾಂತಪ್ಪ ಜಾಧವ ಮಾತನಾಡಿ, 65 ಲಕ್ಷ ವೆಚ್ಚದ ಈ ಕಾಮಗಾರಿಯಿಂದ ಈ ಭಾಗದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಕಾಮಗಾರಿಯನ್ನು ಗುಣಮಟ್ಟದಲ್ಲಿ ಮಾಡಿಸಲಾಗುವುದು ಎಂದರು.
ಜಿಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ, ಶರಣು ಕುಂಬಾರ, ಶಿವಾನಂದ ಗಾಡಿಸಾಹುಕಾರ, ಸಿದ್ದು ಶಿರಸಗಿ, ಚಂದು ಕರ್ಜಗಿ, ಬಸು ಅಂದೋಡಗಿ, ಮಹಾಂತಪ್ಪ ಬಬಲಾದ ಸೇರಿದಂತೆ ಅನೇಕರು ಇದ್ದರು.