ಆಳಂದ: 30ರ ವರೆಗೆ ಲಾಕ್ಡೌನ್ ಅನುಷ್ಠಾನಕ್ಕೆ ಪಣ
Team Udayavani, Apr 16, 2020, 2:54 PM IST
ಆಳಂದ: ಲಾಕ್ಡೌನ್ ವಿಸ್ತರಣೆ ಕಟ್ಟುನಿಟ್ಟಿನಿಂದ ಜಾರಿಗೊಳಿಸಲು ಕರೆದ ತುರ್ತು ಸಭೆಯಲ್ಲಿ ತಹಶೀಲ್ದಾರ್ ದಯಾನಂದ ಪಾಟೀಲ ಮಾತನಾಡಿದರು. ಸಿಪಿಐ ಶಿವಾನಂದ ಗಾಣಿಗೇರ, ಪುರಸಭೆ ಮುಖ್ಯಾ ಧಿಕಾರಿ ಬಾಬುರಾವ್ ವಿಭೂತೆ ಇದ್ದರು.
ಆಳಂದ: ಕೊರೊನಾ ವೈರಸ್ ಹರಡಂತೆ ಮುಂಜಾಗ್ರತಾ ಕ್ರಮವಾಗಿ ತಾಲೂಕಿನಲ್ಲಿ ಜಿಲ್ಲಾಡಳಿತ ನಿರ್ದೇಶನದ ಮೇರೆಗೆ ಸಿಆರ್ ಪಿಸಿ ಕಾಯ್ದೆ 1973 ಕಲಂ 144ರ ಅನ್ವಯ ನಿಷೇಧಾಜ್ಞೆಯನ್ನು ಏ.30ರ ವರೆಗೆ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ತಹಶೀಲ್ದಾರ್ ದಯಾನಂದ ಪಾಟೀಲ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.
ತಹಶೀಲ್ದಾರ್ ಕಚೇರಿಯಲ್ಲಿ ಕರೆದ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿ, ಸಾಕಷ್ಟು ಕ್ರಮ ಅನುಸರಿದರೂ ಸಹಿತ ತರಕಾರಿ, ದಿನಸಿ ಹಾಗೂ ಬ್ಯಾಂಕ್ ಕೆಲಸಕ್ಕೆ ಎಂದು ಜನರು ಬರುತ್ತಲೇ ಇದ್ದಾರೆ. ಇದೆಲ್ಲವನ್ನು ನಿಯಂತ್ರಿಸಲು ಶ್ರಮಿಸಬೇಕಾಗಿದೆ ಎಂದರು. ಬೆಳಗಿನ ಜಾವ ಎಪಿಎಂಸಿ ನಿವೇಶನದಲ್ಲಿ ತರಕಾರಿ ಹರಾಜು ಮತ್ತು ಮಾರಾಟದ ವೇಳೆ ಹೆಚ್ಚಿನ ರೀತಿಯಲ್ಲಿ ಜನರು ಸೇರುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿ ಆಗಕೂಡದು. ಬಸ್ ನಿಲ್ದಾಣದೊಳಗೆ ನಸುಕಿನ 4 ಗಂಟೆಗೆ ಸಾಮಾಜಿಕ ಅಂತರದೊಂದಿಗೆ ತರಕಾರಿ ಹರಾಜು ಕೈಗೊಂಡು ತಳ್ಳುವ ಗಾಡಿ ವ್ಯಾಪಾರಿಗಳಿಗೆ ನೀಡಿದರೆ, ಅವರು ಬಡಾವಣೆಗಳಿಗೆ ಸಾಗಿಸಿ ಮಾರಾಟ ಮಾಡಿಕೊಳ್ಳಲು ತಿಳಿಸಬೇಕು ಎಂದು ಭಾಗವಾನ್ ಅವರಿಗೆ ಹೇಳಿದರು.
ಲಾಕ್ಡೌನ್ ವಿಸ್ತರಿಸಿರುವುದರಿಂದ ಸಾರ್ವಜನಿಕರ ಅಗತ್ಯ ಸೇವೆಗಳಿಗೆ ಅನ್ವಯಿಸು ವುದಿಲ್ಲ. ಅಲ್ಲದೇ, ಸಾಮಾಜಿಕ, ಧಾರ್ಮಿಕ ಹಾಗೂ ವೈಯಕ್ತಿಕ ಕಾರ್ಯಕ್ರಮಗಳಿಗೆ ನಿರ್ಬಂಧವಿದೆ. ಗುಂಪು-ಗುಂಪಾಗಿ, ಅನಾವಶ್ಯಕವಾಗಿ ಸಂಚರಿಸುವಂತಿಲ್ಲ ಎಂದು ಸೂಚಿಸಿದರು. ಗ್ರೇಡ್-2 ತಹಶೀಲ್ದಾರ್ ಬಿ.ಜಿ. ಕುದರಿ, ಸಿಪಿಐ ಶಿವಾನಂದ ಗಾಣಿಗೇರ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ವಿಭೂತೆ, ಎಪಿಎಂಸಿ ಕಾರ್ಯದರ್ಶಿ ಮಹಾದೇವ ಪಾಟೀಲ, ಪಿಎಸ್ಐ ಬಾಪುಗೌಡ, ನಾಡ ತಹಶೀಲ್ದಾರ್ ಅರುಣಕುಮಾರ, ಶ್ರೀನಿವಾಸ ಕುಲಕರ್ಣಿ, ಅಬಕಾರಿ ಪಿಎಸ್ಐ ಶ್ರೀಶೈಲ ಅವುಜಿ ಹಾಗೂ ತರಕಾರಿ ಭಾಗವಾನ್, ಹಣ್ಣಿನ ವ್ಯಾಪಾರಿ ಮುಖಂಡ ಯುನೂಸ್ ಭಾಗವಾನ್ ಜಾವೇದ ಇದ್ದರು.