ಬಿಎಸ್ಎಸ್ಕೆ ಸ್ಥಿತಿಗೆ ಎಲ್ಲ ಜನಪ್ರತಿನಿಧಿಗಳು ಹೊಣೆ
Team Udayavani, Jan 29, 2018, 1:54 PM IST
ಹುಮನಾಬಾದ: ಬಿಎಸ್ಎಸ್ಕೆ ನನ್ನ ಕ್ಷೇತ್ರದಲ್ಲಿದೆ. ಆದರೆ ಕಾರ್ಖಾನೆಯ ಷೇರುಗಳು ಜಿಲ್ಲೆಯ ಎಲ್ಲಾ ಭಾಗದ ರೈತರದ್ದೂ ಇದ್ದೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು. ಚೀನಕೇರಾ ಹಾಗೂ ಸೆಡೋಳ ಗ್ರಾಮದಲ್ಲಿ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಕಾರಣ ಅದರ ಸ್ಥಿತಿಗೆ ಜಿಲ್ಲೆಯ ಸಂಸದರು ಸೇರಿದಂತೆ ಎಲ್ಲಾ ಶಾಸಕರೂ ಹೊಣೆ ಎಂದರು.
ಗ್ರಾಮಸ್ಥರು ಪ್ರತಿಕ್ರಿಯಿಸಿ, ಬಿಎಸ್ಎಸ್ಕೆ ಪುನಃ ಆರಂಭಗೊಳ್ಳಬೇಕಾದರೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು
ಸೇರಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಯಾವ ಮೂಲದಿಂದ ಕಾರ್ಖಾನೆ ಪ್ರಾರಂಭಿಸಿ ಉತ್ತಮವಾಗಿ ಕಾರ್ಯ
ನಿರ್ವಹಿಸಲು ಸಾಧ್ಯ ಎಂಬುದನ್ನು ಎಲ್ಲರೂ ಆಲೋಚಿಸಿ ಮುಂದಿನ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಹೆಚ್ಚಿದೆ
ಎಂದರು.
ಈ ವೇಳೆ ರೈತರೊಬ್ಬರು ಕಬ್ಬು ಬೆಳೆಗಾಗರ ಸಮಸ್ಯೆಗಳು ಹೇಳಿಕೊಂಡು, ಗ್ರಾಮದ ರೈತರ ಹೊಲದಲ್ಲಿ ಕಬ್ಬು ಒಣಗುತ್ತಿದೆ. ಈ ಕುರಿತು ನಸ್ಸಿಮೋದ್ದಿನ್ ಪಟೇಲ್ ಅವರನ್ನು ಸಂಪರ್ಕಿಸಿ ಕಬ್ಬು ಕಟ್ಟಾವಿಗೆ ಮನವಿ ಮಾಡಿದರೆ ಅವರು ಸ್ಪಂದಿಸಿಲ್ಲ. ಚೀನಕೇರಾ ಗ್ರಾಮದವರು ಕಾಂಗ್ರೆಸ್ಗೆ ಮತ ಹಾಕುತ್ತಿರಿ ಎಂದು ಹೇಳಿದ್ದಾರೆ ಎಂದು ಶಾಸಕರಿಗೆ ದೂರಿದರು.
ಇದಕ್ಕೆ ಉತ್ತರಿಸಿದ ಶಾಸಕರು, ಸಹಕಾರ ಕ್ಷೇತ್ರದಡಿ ಕಾರ್ಯ ನಿರ್ವಹಿಸುವ ಸಕ್ಕರೆ ಕಾರ್ಖಾನೆಗಳು ರೈತರ ಸ್ವತ್ತು ಹೊರತು ಅದು ಮಾಲೀಕರ ಸ್ವತ್ತು ಅಲ್ಲ. ಯಾವ ರೈತರು ಯಾವ ಕಾರ್ಖಾನೆಗಳ ಷೇರು ಹೊಂದಿದ್ದಾರೆ ಅವರ ಕಬ್ಬು ಕಟಾವು ಮಾಡುವುದು ಆ ಕಾರ್ಖಾನೆಗಳ ಆದ್ಯ ಕರ್ತವ್ಯ. ಕಬ್ಬು ಸಾಗಿಸುವುದಕ್ಕೂ ಮತ ಹಾಕುವುದಕ್ಕೂ ಏನು ಸಂಬಂಧ.
ಯಾವ ರೈತರು ಯಾವ ಕಾರ್ಖಾನೆಗಳ ಷೇರು ಹೊಂದಿದ್ದಿರಿ ಅವರನ್ನು ಹಿಡಿದು ಕೇಳುವ ಶಕ್ತಿ ನಿಮ್ಮಲ್ಲಿ ಬರಬೇಕು. ರೈತರು ಷೇರು ಹಣ ಹಾಕದ್ದಿರೆ ಆ ಕಾರ್ಖಾನೆಗಳು ನಡೆಯುತ್ತಿದ್ದವೇ ಎಂದು ಪ್ರಶ್ನಿಸಿದರು. ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಜಿಲ್ಲಾ ಉಸ್ತುವಾರಿಗಳ ಗಮನಕ್ಕೆ ತರಲಾಗಿದೆ. ಬೇರೆ ತಾಲೂಕಿನ ಕಾರ್ಖಾನೆಗಳು ಕೂಡ ಇಲ್ಲಿನ ರೈತರಿಗೆ ಸ್ಪಂದಿಸುತ್ತಿಲ್ಲ ಎಂಬ ವಿಷಯಕೂಡ ವಿವರಿಸಿದ್ದೇನೆ ಎಂದರು.
ಹಣ ಹಣ: ಗ್ರಾಮದ ವಿವಿಧ ಯೋಜನೆಗಳ ಫಲಾನುಭವಿಗಳು ಹಣ ನೀಡಿದರೆ ಮಾತ್ರ ಅವುಗಳ ಲಾಭ ದೊರೆಯುವಂತಾಗುತ್ತಿದೆ. ಮನೆ ಹಂಚಿಕೆಯಲ್ಲಿ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಜಿಪಿಎಸ್ ಮಾಡಲು ಕೂಡ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ದನಗಳ ಕೊಟ್ಟಿಗೆ ನಿರ್ಮಾಣಕ್ಕೆ ಪಿಡಿಒ ಸೇರಿ ಇತರರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಹಣ ನೀಡದಿದ್ದರೆ ಯಾವ ಕಾರ್ಯವೂ ಆಗುತ್ತಿಲ್ಲ ಎಂದು ಗ್ರಾಮದ ಲಕ್ಷ್ಮಣ ಶಾಸಕರ ಗಮನಕ್ಕೆ ತಂದರು.
ದಯಾನಂದ ರೆಡ್ಡಿ ಮಾತನಾಡಿ, ನ್ಯಾಯಬೆಲೆ ಅಂಗಡಿಯಲ್ಲಿ ಬಯೋಮೇಟ್ರಿಕ್ ಅಳವಡಿಸಿದ್ದು, ಹೆಬ್ಬೆಟ್ಟು ಗುರುತಿಗಾಗಿ 10 ರೂ. ಪಡೆಯಲಾಗುತ್ತಿದೆ. ಅಲ್ಲದೇ ವಿವಿಧ ಪಿಂಚಣಿ ವಿತರಣೆಗೆ ಪೋಸ್ಟ್ಮನ್ ಹಣಕ್ಕೆ ಬೇಡಿಕೆ ಇಡುತ್ತಿದ್ದು, ಹಣ ನೀಡುವುದಿಲ್ಲ ಎಂದಿದಕ್ಕೆ ಕಳೆದ ನಾಲ್ಕು ತಿಂಗಳಿಂದ ಪಿಂಚಣಿ ಹಣ ವಿತರಣೆ ಮಾಡಿಲ್ಲ ಎಂದು ದೂರಿದರು.
ಇದಕ್ಕೆ ಉತ್ತರಿಸಿದ ಶಾಸಕರು, ಮನೆ ಹಂಚಿಕೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಗ್ರಾಪಂ ಸದಸ್ಯರೆ ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸುತ್ತೇನೆ. ಯಾರೇ ತಪ್ಪಿಸ್ಥರು ಇದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ತಿಳಿಸುವುದಾಗಿ ಭರವಸೆ ನೀಡಿದರು. ಜಿಪಂ ಸದಸ್ಯ ಲಕ್ಷ್ಮಣರಾವ್ ಬುಳ್ಳಾ, ತಹಶೀಲ್ದಾರ ದೇವೆಂದ್ರಪ್ಪ ಪಾಣಿ, ತಾಪಂ ಇಒ ಡಾ| ಗೋವಿಂದ, ಗ್ರಾಪಂ ಅಧ್ಯಕ್ಷ ಪಾಂಡುರಂಗ ಪಿರಾಜಿ, ಮಲ್ಲಿಕಾರ್ಜುನ ಮಹೇಂದ್ರಕರ್, ಪಿಡಿಒ ಸೋಮಶೇಖರ, ರಾಜೇಂದ್ರ ದಾಂಡೆಕರ್, ಸಂಜೀವರೆಡ್ಡಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.