ಸಾಲಮನ್ನಾ ಅರ್ಜಿ ಸಲ್ಲಿಕೆಗೆ 15ರವರೆಗೆ ಅವಕಾಶ
Team Udayavani, Oct 2, 2018, 6:15 AM IST
ಬೀದರ: “ರೈತರ ಸಾಲಮನ್ನಾ ಕುರಿತು ಸಹಕಾರ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ರೈತರು ಸಾಲದ ವಿವರಣೆ ಅರ್ಜಿ ಸಲ್ಲಿಸಲು ಅ.15ರವರೆಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಸ್ಪಷ್ಟಪಡಿಸಿದ್ದಾರೆ.
ನಗರದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಕೃತ ಹಾಗೂ ಸಹಕಾರ ಬ್ಯಾಂಕ್ಗಳಿಗೆ ಒಂದೇ ಅರ್ಜಿ ನಮೂನೆ ಇದೆ. ಸಾಲ ಹೊಂದಿದ ರೈತರು ಕುಟುಂಬದ ವಿವರಣೆ, ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಸಂಖ್ಯೆ, ಪಡೆದ ಸಾಲದ ವಿವರ ಸೇರಿ ಇತರೆ ಮಾಹಿತಿಯುಳ್ಳ ಸ್ವಯಂ ದೃಢೀಕರಣ ನೀಡಬೇಕು. ಒಂದು ರೈತ ಕುಟುಂಬಕ್ಕೆ ಒಂದು ಲಕ್ಷ ರೂ. ಸಾಲ ಮನ್ನಾ ಮಾಡಲಾಗುತ್ತಿದ್ದು, ಗಂಡ, ಹೆಂಡತಿ ಹಾಗೂ ಅವಲಂಬಿತರ ಹೆಸರಲ್ಲಿನ ಒಂದು ಲಕ್ಷದವರೆಗಿನ ಸಾಲ ಮನ್ನಾ ಆಗಲಿದೆ ಎಂದರು.
ರಾಜ್ಯದಲ್ಲಿ 2.65 ಲಕ್ಷ ರೈತರು ಒಂದು ಲಕ್ಷಕ್ಕೂ ಅ ಧಿಕ ಸಾಲ ಪಡೆದಿದ್ದಾರೆ. 15 ಲಕ್ಷ ರೈತರು 50 ಸಾವಿರ ರೂ. ಸಾಲ ಪಡೆದಿದ್ದರೆ, 6 ಲಕ್ಷ ರೈತರು 25 ಸಾವಿರಕ್ಕಿಂತ ಕಡಿಮೆ ಸಾಲ ಹೊಂದಿದ್ದಾರೆ. ಕೆಲ ಭಾಗಗಳಲ್ಲಿನ ಡಿಸಿಸಿ ಬ್ಯಾಂಕ್ಗಳು ಅ.1ರಂದು ಅರ್ಜಿ ಸಲ್ಲಿಸಲು ಕೊನೇ ದಿನ ಎಂದು ಕರ ಪತ್ರ ಹಂಚಿರುವುದು ಬೆಳಕಿಗೆ ಬಂದಿದೆ. ಅವ ಧಿ ಮುಗಿದ ಬಳಿಕ ಬಂದ ರೈತರ ಅರ್ಜಿ ಪರಿಗಣಿಸುವುದಿಲ್ಲ ಎಂದು ಹೇಳಲಾಗಿದೆ. ಆದರೆ, ಇದು ತಪ್ಪು. ಬ್ಯಾಂಕ್ಗಳು ರೈತರ ಸಾಲ ಮನ್ನಾ ಮಾಡುತ್ತಿಲ್ಲ. ಸರ್ಕಾರ ರೈತರ ಸಾಲಮನ್ನಾ ಮಾಡುತ್ತಿದೆ. ರೈತರಿಂದ ಅರ್ಜಿಗಳನ್ನು ಪಡೆದು ಸರ್ಕಾರಕ್ಕೆ ವರದಿ ಸಲ್ಲಿಸಲು ಇದ್ದ ಅವ ಧಿ ವಿಸ್ತರಣೆ ಮಾಡಿದ್ದು, ರಾಜ್ಯದ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು ಎಂದರು.
ರೈತರಿಗೆ ತೊಂದರೆ ನೀಡಬೇಡಿ: ಬ್ಯಾಂಕ್ ಅ ಧಿಕಾರಿಗಳು ರೈತರಿಗೆ ವಿನಾಕಾರಣ ತೊಂದರೆ ನೀಡಬಾರದು. ಅರ್ಜಿ ತುಂಬಲು ರೈತರಿಗೆ ಸಮಸ್ಯೆ ಇದ್ದರೆ ಸ್ಥಳೀಯ ಪಿಕೆಪಿಎಸ್, ಬ್ಯಾಂಕ್ ಅಧಿ ಕಾರಿಗಳು ಸಹಕಾರ ನೀಡಬೇಕು. ರೈತರಿಗೆ ತೊಂದರೆ ನೀಡುವ ದೂರುಗಳು ಬಂದರೆ ಅಂತಹ ಅಧಿ ಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾಲಮನ್ನಾ ವಿಷಯದಲ್ಲಿ ಬ್ಯಾಂಕ್ ಅಧಿ ಕಾರಿಗಳು ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದೆಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ಕಮಠಾಣಾದಲ್ಲಿ ಮಾದರಿ ಶಾಲೆ: ದೆಹಲಿ ಸರ್ಕಾರ ಆರಂಭಿಸಿರುವ ಮಾದರಿ ಶಾಲೆಗಳನ್ನು ಇತ್ತೀಚೆಗೆ ಪರಿಶೀಲನೆ ಮಾಡಲಾಗಿದೆ. ನನ್ನ ಕ್ಷೇತ್ರದಲ್ಲಿ ಮೊದಲು ಪ್ರಾಯೋಗಿಕವಾಗಿ ಪ್ರಾರಂಭಿಸುವ ಆಲೋಚನೆ ಇದ್ದು, ಈಗಾಗಲೇ ಬೀದರ ತಾಲೂಕಿನ ಕಮಠಾಣಾ ಸರ್ಕಾರಿ ಶಾಲೆ ಗುರುತಿಸಲಾಗಿದೆ ಎಂದರು.
ಹೆಸರು ಖರೀದಿ ಶೀಘ್ರವೇ ಹೆಚ್ಚಳ
ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಕುರಿತು ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು. ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಹೆಸರು ಖರೀದಿ ಪ್ರಮಾಣ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು. ರಾಜ್ಯದ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು ರಾಜ್ಯದಲ್ಲಿ ಉತ್ಪಾದನೆ ಆಗುವ ಹೆಸರಿನ ಪ್ರಮಾಣದಲ್ಲಿ ಹೆಚ್ಚುವರಿ ಶೇ.25ರಷ್ಟು ಬೆಂಬಲ ಬೆಲೆಯಲ್ಲಿ ಖರೀದಿಗೆ ಆದೇಶ ನೀಡಲು ರಾಜ್ಯ ಸರ್ಕಾರಕ್ಕೆ ಅಧಿ ಕಾರ ಇದೆ. ರಾಜ್ಯದಿಂದ 93 ಸಾವಿರ ಮೆಟ್ರಿಕ್ ಟನ್ ಹೆಸರು ಉತ್ಪಾದನೆ ಎಂದು ಪ್ರಸ್ತಾವನೆ ಕಳುಹಿಸಲಾಗಿತ್ತು. ಅದರ ಆಧಾರದಲ್ಲಿ 23 ಸಾವಿರ ಮೆಟ್ರಿಕ್ ಟನ್ ಖರೀದಿಗೆ ಆದೇಶ ನೀಡಲಾಗಿದೆ. 38 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಖರೀದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಹೆಚ್ಚು ಪ್ರಮಾಣದ ಹೆಸರು ಇದ್ದರೆ ದೆಹಲಿಯಲ್ಲಿ ವಿಶೇಷ ಸಮಿತಿ ಇದ್ದು, ಅದರ ಮೊರೆ ಹೋಗಿ ಹೆಚ್ಚಿನ ಖರೀದಿಗೆ ಪ್ರಸ್ತಾವನೆ ಸಲ್ಲಿಸಲು ಅವಕಾಶವಿದೆ. ಸದ್ಯ ನಾಲ್ಕು ಕ್ವಿಂಟಲ್ ಖರೀದಿ ಮೊದಲನೇ ಹಂತ ಎಂದು ಪರಿಗಣಿಸಿ, ಇನ್ನುಳಿದ ಉತ್ಪಾದನೆಯನ್ನು ಕೂಡ ಖರೀದಿ ಮಾಡಲಾಗುವುದು ಎಂದರು.
ಸದ್ಯ ನೋಂದಣಿ ಆಗಿರುವ ರೈತರ ಸಂಖ್ಯೆಗೂ, ಉತ್ಪಾದನೆಯಾದ ಬೆಳೆಗೂ ಹೊಂದಾಣಿಕೆ ಆಗುತ್ತಿಲ್ಲ. ರಾಜ್ಯದ ಏಳು ಜಿಲ್ಲೆಗಳಲ್ಲಿ ಹೆಸರು ಉತ್ಪಾದನೆ ಇದ್ದು, ಅಲ್ಲಿನ ವಾಸ್ತವ ಸ್ಥಿತಿ ಅರಿತುಕೊಳ್ಳಲು ಜಿಲ್ಲಾ ಧಿಕಾರಿ, ಜಂಟಿ ಕೃಷಿ ಅ ಧಿಕಾರಿಗಳು ಸೇರಿ ಇತರೆ ಅ ಧಿಕಾರಿಗಳ ಸಮಿತಿ ರಚಿಸಿ ಆಯ್ದ ರೈತರ ಹೊಲಗಳಿಗೆ ತೆರಳಿ ಸಮೀಕ್ಷೆ ಮಾಡುವಂತೆ ತಿಳಿಸಲಾಗಿದೆ. ಅಲ್ಲದೆ, ರೈತರ ಪಹಣಿ ಪಡೆದುಕೊಂಡು ದಲ್ಲಾಳಿಗಳು ಅಕ್ರಮ ನಡೆಸಿದ ಪ್ರಕರಣಗಳು ಕಂಡುಬಂದರೆ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.