ಬಸವಕಲ್ಯಾಣದಲ್ಲಿ ರಂಗೇರಿದ ಚುನಾವಣಾ ಕಣ
ಚುನಾವಣೆಗೆ ಪೂರ್ವ ತಯಾರಿಗಳು ಈಗಾಗಲೇ ಶುರು ಮಾಡಲಾಗಿದೆ.
Team Udayavani, Mar 17, 2021, 6:29 PM IST
ಬೀದರ: ಪಂಚ ರಾಜ್ಯಗಳ ವಿಧಾನಸಭೆ ಸಮರದ ಜತೆಗೆ ಬಸವಕಲ್ಯಾಣ ಸೇರಿ ರಾಜ್ಯದ ವಿವಿಧ ಉಪ ಚುನಾವಣೆಗೂ ಕೇಂದ್ರ ಚುನಾವಣೆ ಆಯೋಗ ಮುಹೂರ್ತ ನಿಗದಿಗೊಳಿಸಿದೆ. ಇದರೊಂದಿಗೆ ಬಹು ನಿರೀಕ್ಷಿತ ಕಲ್ಯಾಣ ಕ್ಷೇತ್ರದಲ್ಲಿ ಉಪ ಕದನದ ಕಾವು ಏರಿಕೆಯಾಗಿದ್ದು, ರಾಜಕೀಯ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ. ಇನ್ನೊಂದೆಡೆ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ ಹೆಚ್ಚುವಂತೆ ಮಾಡಿದೆ.
ಫೆಬ್ರವರಿ ಅಂತ್ಯಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಿಸಿದ್ದ ಚುನಾವಣೆ ಆಯೋಗ ರಾಜ್ಯದ ವಿಧಾನಸಭೆ ಕ್ಷೇತ್ರಗಳಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸುವುದಾಗಿ ಪ್ರಕಟಿಸಿತ್ತು. ಅದರಂತೆ ಮಂಗಳವಾರ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣ ಕ್ಷೇತ್ರದ ಜತೆಗೆ ರಾಯಚೂರು ಜಿಲ್ಲೆಯ ಮಸ್ಕಿ ಮತ್ತು ಬೆಳಗಾವಿ ಲೋಕಸಭೆ ಚುನಾವಣೆಗೆ ಮುಹೂರ್ತ ನಿಗದಿ ಮಾಡಿದೆ. ಏ.17ಕ್ಕೆ ಚುನಾವಣೆ ನಡೆಯಲಿದ್ದು, ಮೇ 2ರಂದು ಪಂಚ ರಾಜ್ಯಗಳ ಜತೆಗೆ ರಾಜ್ಯದ ಉಪ ಚುನಾವಣೆ ಫಲಿತಾಂಶ ಹೊರಬೀಳಲಿದೆ.
ದಿ| ಬಿ. ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಶಾಸಕರಾಗಿದ್ದ ನಾರಾಯಣರಾವ್ ಅವರು ಮೃತಪಟ್ಟು (2020, ಸೆ.24) ಐದುವರೆ ತಿಂಗಳು ಕಳೆದರೂ ಆಯೋಗ ಚುನಾವಣೆಗೆ ದಿನಾಂಕ ಘೋಷಿಸದ ಕಾರಣ ಗೊಂದಲ ಸೃಷ್ಟಿಸಿತ್ತು. ಚುನಾವಣೆಗೆ ಬಿರುಸಿನ ತಯಾರಿ ಮಾಡಿಕೊಳ್ಳುತ್ತಿರುವ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸದೇ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದರು. ಈ ಬೆಳವಣಿಗೆಯಿಂದ ಕದನದ ಕುತೂಹಲ ಹೆಚ್ಚಿತ್ತಾದರೂ ಅಭ್ಯರ್ಥಿಗಳ ಹೆಸರು ಅಂತಿಮ ಆಗದಿರುವುದು ಗೊಂದಲ ಮೂಡಿಸಿತ್ತು. ಈಗ ಕೊನೆಗೂ ಉಪ ಸಮರ ಫಿಕ್ಸ್ ಅಗಿದ್ದು, ರಾಜಕೀಯ ಚಟುವಟಿಕೆ ರಂಗೇರಲಿದೆ.
ಬಸವಕಲ್ಯಾಣ ಉಪ ಚುನಾವಣೆಯನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪ್ರತಿಷ್ಠೆಯಾಗಿ ಪಡೆದಿವೆ. ಶಿರಾ ಮತ್ತು ಆರ್ಆರ್ ನಗರ ಉಪ ಚುನಾವಣೆಯಲ್ಲಿ ಜಯಭೇರಿಯಿಂದ ಹುಮಸ್ಸಿನಲ್ಲಿರುವ ಕೇಸರಿ ಪಡೆ ಕಲ್ಯಾಣದಲ್ಲೂ ಕಮಲ ಅರಳಿಸಲು ರಣತಂತ್ರ ರೂಪಿಸುತ್ತಿದ್ದರೆ, ಕಾಂಗ್ರೆಸ್ ಶತಾಯಗತಾಯ ಮತ್ತೂಮ್ಮೆ ಕ್ಷೇತ್ರವನ್ನು ಕೈ ವಶದಲ್ಲಿ ಇಟ್ಟಿಕೊಳ್ಳಲು ಸಜ್ಜಾಗುತ್ತಿದೆ. ಇನ್ನೂ ಜೆಡಿಎಸ್ ಉಪ ಕದನದ ಅಖಾಡಕ್ಕಿಳಿಯಲಿದೆ ಎಂದು ಪಕ್ಷ ಘೋಷಿಸಿರುವುದು ಕ್ಷೇತ್ರ ಜಿದ್ದಾಜಿದ್ದಿನ ಸ್ಪರ್ಧೆಗೆ ಸಾಕ್ಷಿಯಾಗಲಿದೆ.
ಆದರೆ, ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇನ್ನೂ ಘೋಷಣೆಯಾಗಿಲ್ಲ. ಆಡಳಿತಾರೂಢ ಬಿಜೆಪಿಯಿಂದ ಸಿಎಂ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಸ್ಪರ್ಧೆ ಕುರಿತ ಊಹಾಪೋಹಗಳಿಗೆ ತೆರೆ ಬೀಳುತ್ತಿದ್ದಂತೆ 15 ಜನ ಆಕಾಂಕ್ಷಿಗಳು ನಿಟ್ಟುಸಿರು ಬಿಟ್ಟಿದ್ದು, ಸ್ಥಳೀಯ ಅಭ್ಯರ್ಥಿಯನ್ನೇ
ಕಣಕ್ಕಿಳಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಪಕ್ಷದ ಚುನಾವಣಾ ಉಸ್ತುವಾರಿಗಳ ಸಮ್ಮುಖದಲ್ಲಿ ಆಕಾಂಕ್ಷಿಗಳೆಲ್ಲರೂ ಒಗ್ಗಟ್ಟು ಪ್ರದರ್ಶಿಸಿದ್ದಾರಲ್ಲದೇ ಯಾರೇ ಅಭ್ಯರ್ಥಿಗಳಾದರೂ ಸಂಘಟಿತರಾಗಿ ಗೆಲ್ಲಿಸುವುದಾಗಿ ಘೋಷಿಸಿದ್ದಾರೆ.
ಕೈ ವಶದಲ್ಲಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದೆ. ದಿ| ನಾರಾಯಣರಾವ್ ಪತ್ನಿ ಮಲ್ಲಮ್ಮ ಅಥವಾ ಮಾಜಿ ಸಿಎಂ ದಿ| ಧರಂಸಿಂಗ್ ಪುತ್ರ ಎಂಎಲ್ಸಿ ವಿಜಯಸಿಂಗ್ ಇವರಿಬ್ಬರಲ್ಲಿ ಪ್ರಬಲ ಪೈಪೋಟಿ ನಡೆಯುತ್ತಿದೆ. ಮೂಲಗಳ ಪ್ರಕಾರ ಮಲ್ಲಮ್ಮ ನಾರಾಯಣರಾವ್ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಆದರೆ, ಈ ಬಗ್ಗೆ ಕೈ ಪಾಳಯದ ನಾಯಕರು ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಇನ್ನೊಂದೆಡೆ ಜೆಡಿಎಸ್ನಿಂದ ಮಾಜಿ ಶಾಸಕ ಎಂ.ಜಿ ಮುಳೆ ಸ್ಪರ್ಧಾಳು ಆಗುವ ಸಾಧ್ಯತೆ ಇದೆ.
ಬಸವಕಲ್ಯಾಣ ಕ್ಷೇತ್ರದಲ್ಲಿ ಬಾರಿ ಕಮಲ ಅರಳುವುದು ಖಚಿತ. ಈಗಾಗಲೇ ಚುನಾವಣೆಗೆ ಪಕ್ಷ ಅಗತ್ಯ ತಯ್ನಾರಿ ಮಾಡಿಕೊಂಡಿದ್ದು, ಬೂತ್ ಮಟ್ಟದಲ್ಲಿ ಹೆಚ್ಚಿನ ಗಮನ ಹರಿಸಲಾಗಿದೆ. ಕೇಂದ್ರ ಮತ್ತು ರಾಜ್ಯದ ನಾಯಕರು ಸೇರಿ ಅರ್ಹ ಅಭ್ಯರ್ಥಿಯನ್ನು ಶೀಘ್ರದಲ್ಲಿ ಘೋಷಣೆ ಮಾಡಲಿದ್ದಾರೆ.
ಭಗವಂತ ಖೂಬಾ, ಸಂಸದ
ಬಸವಕಲ್ಯಾಣ ಉಪ ಚುನಾವಣೆ ದಿನ ಘೋಷಣೆ ಹಿನ್ನೆಲೆ ಎರಡು ದಿನದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿಯನ್ನು ಘೋಷಿಸಲಿದೆ. ಹಿಂದೆ ಕಾಂಗ್ರೆಸ್ ಶಾಸಕರ ಕ್ಷೇತ್ರ ಇದಾಗಿದ್ದರಿಂದ ಮತ್ತೂಮ್ಮೆ ಪಕ್ಷದ ಅಭ್ಯರ್ಥಿಯೇ ಗೆಲ್ಲುವುದು ಖಚಿತ. ಚುನಾವಣೆಗೆ ಪೂರ್ವ ತಯಾರಿಗಳು ಈಗಾಗಲೇ ಶುರು ಮಾಡಲಾಗಿದೆ.
ಈಶ್ವರ ಖಂಡ್ರೆ,ಕೆಪಿಸಿಸಿ ಕಾರ್ಯಾಧ್ಯಕ್ಷ
ಹಿಂದೆ ಬಸವಕಲ್ಯಾಣ ಜೆಡಿಎಸ್ ಭದ್ರಕೋಟೆಯಾಗಿತ್ತು. ಈಗಲೇ ಕ್ಷೇತ್ರದಲ್ಲಿ ಪಕ್ಷದ ಪರ ಅಲೆ ಇದೆ. ಹಾಗಾಗಿ ಉಪ ಚುನಾವಣೆಗೂ ಪಕ್ಷ ತನ್ನ ಅಭ್ಯರ್ಥಿ ನಿಲ್ಲಿಸಲಿದೆ. ಐದಾರು ಜನ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ವರಿಷ್ಠರು ಚರ್ಚಿಸಿ ಅರ್ಹ ವ್ಯಕ್ತಿಗೆ ಬಿ ಫಾರ್ಂ ನೀಡಲಿದೆ.
ಬಂಡೆಪ್ಪ ಖಾಶೆಂಪೂರ, ಜೆಡಿಎಸ್ ಶಾಸಕ
ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ