ಸೈದಾಪುರದಲ್ಲಿ ರೈಲು ನಿಲ್ಲಿಸಲು ಸಂಸದರಿಗೆ ಮನವಿ
Team Udayavani, Nov 21, 2021, 3:26 PM IST
ಸೈದಾಪುರ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಕೋವಿಡ್ನಿಂದಾಗಿ ಸ್ಥಗಿತಗೊಂಡ ರೈಲುಗಳ ನಿಲುಗಡೆ ಪುನಃ ನಿಲ್ಲಿಸುವಂತೆ ಕಲಬುರಗಿ ಸಂಸದ ಡಾ| ಉಮೇಶ ಜಾಧವ ಅವರಿಗೆ ಸೈದಾಪುರ ನಾಗರಿಕರು ಮನವಿ ಸಲ್ಲಿಸಿದರು.
ಯಾದಗಿರಿ ನಗರಕ್ಕೆ ಭೇಟಿ ನೀಡಿದ ಸಂಸದರಿಗೆ ಒತ್ತಾಯಿಸಿದ ನಾಗರಿಕರು, ಸುಮಾರು ದಶಕಗಳಿಂದ 02793 ರಾಯಲ್ ಸೀಮಾ ಎಕ್ಸ್ಪ್ರೆಸ್ ತಿರುಪತಿಯಿಂದ ನಿಜಾಮಾಬಾದ ಜಂಕ್ಷನ್ ಮತ್ತು 16583 ಯಶವಂತಪುರದಿಂದ ಲಾತೂರ್, 16571 ಯಶವಂತಪುರ ಜಂಕ್ಷನ್ದಿಂದ ಬೀದರವರೆಗೆ ಸಂಚರಿಸುವ ರೈಲುಗಳು ನಿಲ್ಲುತ್ತಿದ್ದವು. ಕೆಲವು ತಿಂಗಳಿಂದ ಇವು ನಿಲ್ಲುತ್ತಿಲ್ಲ. ಸುತ್ತಲಿನ 65 ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲ್ವೆ ನಿಲ್ದಾಣ ಇದಾಗಿದೆ. ಕಡೇಚೂರು ಹಾಗೂ ಬಾಡಿಯಾಲ ಕೈಗಾರಿಕಾ ಪ್ರದೇಶಗಳು ರೈಲು ನಿಲ್ದಾಣದ ಸಮೀಪದಲ್ಲಿವೆ. ಸಾಕಷ್ಟು ಸಂಖ್ಯೆಯಲ್ಲಿ ಬೆಂಗಳೂರು, ಚೆನ್ನೈ, ಮುಂಬೈ ಸೇರಿದಂತೆ ವಿವಿಧ ಪ್ರದೇಶಗಳಿಗೆ ಕೆಲಸ ಕಾರ್ಯಗಳಿಗಾಗಿ ಹೋಗುತ್ತಾರೆ. ಈ ಬಗ್ಗೆ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿ ರೈಲುಗಳ ನಿಲುಗಡೆಗೆ ಪ್ರಯತ್ನ ಮಾಡಬೇಕೆಂದು ಮನವಿ ಮಾಡಿದರು.
ಸೈದಾಪುರ ಗ್ರಾಪಂ ಸದಸ್ಯ ಅರ್ಜುನ ಚವ್ಹಾಣ, ರಾಜು ದೊರೆ, ಏಸುನಾಥ ಮೇಲಗಿರಿ, ರಾಕೇಶ ಕೋರೆ, ಶರಣಪ್ಪ, ಚಂದಪ್ಪ ಕಾವಲಿ, ಮಾಳಪ್ಪ ಬಾಲಛೇಡ, ಮೌಲಾಲಿ, ಮಾರೆಪ್ಪ, ಮರೆಪ್ಪ ಕಟ್ಟಿಮನಿ ರಾಂಪೂರ ಇತರರಿದ್ದರು.