ಎಲ್ಲ ದುಷ್ಕರ್ಮಿಗಳನ್ನು ಬಂಧಿಸಿ
Team Udayavani, Feb 22, 2022, 2:39 PM IST
ಮಾನ್ವಿ: ಜಿಲ್ಲೆಯ ನಿಲೋಗಲ್ ಗ್ರಾಮದಲ್ಲಿ ಯೋಧನ ತಾಯಿಯನ್ನು ಹತ್ಯೆಗೈದ 17ಕ್ಕೂ ಹೆಚ್ಚು ಜನರಲ್ಲಿ ಕೇವಲ 6 ಜನರನ್ನು ಮಾತ್ರ ಬಂಧಿಸಲಾಗಿದೆ. ಆದ್ದರಿಂದ ಈ ಕೂಡಲೇ ಉಳಿದ ದುಷ್ಕರ್ಮಿಗಳನ್ನು ಬಂಧಿಸಿ ಯೋಧರ ಕುಟಂಬಗಳಿಗೆ ರಾಜ್ಯ ಗೃಹ ಇಲಾಖೆ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ದಲಿತ ಸೇನೆ ತಾಲೂಕು ಅಧ್ಯಕ್ಷ ರಮೇಶ ಕರೆಗುಡ್ಡ ಒತ್ತಾಯಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ದಲಿತ ಸೇನೆ ವತಿಯಿಂದ ಉಪ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಯೋಧನ ತಾಯಿಯನ್ನು ಹತ್ಯೆಗೈದ ಎಲ್ಲ ದುಷ್ಕರ್ಮಿಗಳನ್ನು ಬಂಧಿಸಬೇಕು. ಜತೆಗೆ ಅವರಿಗೆ ಉಗ್ರ ಶಿಕ್ಷೆ ನೀಡಬೇಕು. ಅಲ್ಲದೇ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ವಹಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಸಂಸ ತಾಲೂಕು ಅಧ್ಯಕ್ಷ ರಮೇಶ, ನರಸಿಂಹ, ಬಸವರಾಜ, ರಾಘವೇಂದ್ರ, ರಮೇಶ ಉಪ್ಪಾರ, ಸೋಮಶೇಖರ, ಶಾಂತಪ್ಪ, ಬಸವರಾಜ ನಿಲೋಗಲ್, ಶಿವಯ್ಯಸ್ವಾಮಿ, ನಾಗರಾಜ ಸೇರಿದಂತೆ ಇತರರು ಇದ್ದರು.