ಇಸ್ಪೀಟ್ ಅಡ್ಡೆ ಮೇಲೆ ದಾಳಿ; 4.25 ಲಕ್ಷ ರೂ. ನಗದು ವಶ
Team Udayavani, Apr 20, 2022, 5:31 PM IST
ಮುದಗಲ್ಲ: ಪಟ್ಟಣದ ಪೊಲೀಸ್ ಇಲಾಖೆಯ ಪಿಎಸೈ ಪ್ರಕಾಶ ಡಂಬಳ ನೇತೃತ್ವದಲ್ಲಿ ಬ್ಯಾಲಿಹಾಳ ಹಳ್ಳದಲ್ಲಿ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿ ನಾಲ್ವರು ಜೂಜುಕೋರರನ್ನು ಬಂಧಿಸಲಾಗಿದೆ.
ಬಂಧಿತರಿಂದ 4.25 ಲಕ್ಷ ರೂ. ನಗದು ಸೇರಿದಂತೆ 28.28 ಲಕ್ಷಕ್ಕೂ ಅಧಿಕ ಮೊತ್ತದ ವಾಹನ, ಪರಿಕರ ವಶಪಡಿಸಿಕೊಳ್ಳುವ ಮೂಲಕ ಭರ್ಜರಿ ಬೇಟೆಯನ್ನಾಡಿದ್ದಾರೆ.
ಠಾಣೆ ವ್ಯಾಪ್ತಿಯ ಹಾಗೂ ತಾಲೂಕು ಗಡಿ ಭಾಗವಾದ ಬ್ಯಾಲಿಹಾಳ ಹಳ್ಳದಲ್ಲಿ ಇಸ್ಪೀಟ್ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಲಿಂಗಸುಗೂರು ಮತ್ತು ಸಿಪಿಐ ಮಸ್ಕಿ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದೆ.
ಬಸವರಾಜ ಬಸಪ್ಪ ಕ್ಯಾಡಿಗಿ ಸಾ| ನಾಲತವಾಡ, ಶರಣಬಸವ ಬಸನಗೌಡ ಸಾ| ಕುರಡಗಿ ಜಿ| ಬಳ್ಳಾರಿ, ಬಸವರಾಜ ಯತಮನಪ್ಪ ತೊಡಗೇರ ಸಾ| ಹುಲಿಹೈದರ್, ಬಳ್ಳಾರಿಯ ದೇವಕುಮಾರ ಮುನಿಲಾರಾಯ್ ಎಂಬವರನ್ನು ಬಂಧಿಸಲಾಗಿದ್ದು, ಬಂಧಿತರಿಂದ ನಗದು 4,15,770 ರೂ. ನಗದು, ನಾಲ್ಕು ಕಾರು, ನಾಲ್ಕು ಮೊಬೈಲ್ ಹಾಗೂ 28.28 ಲಕ್ಷ ರೂ. ಮೌಲ್ಯದ ಮಾಲನ್ನು ಜಪ್ತಿ ಮಾಡಿದ್ದಾರೆ. ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮಂಜುನಾಥ, ಕೃಷ್ಣ, ಅಡಿವೆಪ್ಪ, ಅಮರೇಶ, ಹನುಮಂತ ಇದ್ದರು.