ಭಗವಾನ್ಗೆ ಮಸಿ; ತಲೆ ತಗ್ಗಿಸುವ ಘಟನೆ
Team Udayavani, Feb 6, 2021, 2:37 PM IST
ಬೀದರ: ವಿಚಾರವಾದಿ ಪ್ರೊ| ಕೆ.ಎಸ್ ಭಗವಾನ್ ಅವರ ಮುಖಕ್ಕೆ ಮಸಿ ಬಳಿದು ಅವಮಾನ ಮಾಡಿರುವ ನ್ಯಾಯವಾದಿ ಮೀರಾ ರಾಘವೇಂದ್ರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಕನ್ನಡಿಗರ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ.
ಸಂಸ್ಥೆ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ನೇತೃತ್ವದಲ್ಲಿ ಸಂಘಟನೆಗಳ ಪ್ರಮುಖರು ಅಪರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ರಾಜ್ಯಪಾಲರು, ಸಿಎಂ ಮತ್ತು ಗೃಹ ಸಚಿವರಿಗೆ ಬರೆದ ಮನವಿ ಸಲ್ಲಿಸಿದರು.
ನ್ಯಾಯವಾದಿ ಮೀರಾ ರಾಘವೇಂದ್ರ ಇವರು ಪ್ರೊ| ಭಗವಾನ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 2ನೇ ಎಂಸಿಎಂ ನ್ಯಾಯಾಲಯಕ್ಕೆ ಹಾಜರಾಗಿ ಹೊರಬರುವ ಸಂದರ್ಭದಲ್ಲಿ ಭಗವಾನ್ರ ಮುಖಕ್ಕೆ ಮಸಿ ಬಳಿದಿರುತ್ತಾರೆ. ಈ ಘಟನೆ ಮಾನವ ಕುಲ ತಲೆ ತಗ್ಗಿಸುವಂತಹದಾಗಿದೆ. ಈ ಘಟನೆಗೆ ಕಾರಣ ಕರ್ತರಾದವರು ಯಾರೆ ಇದ್ದರು ಅವರನ್ನು ಕಠಿಣ ಶಿಕ್ಷಗೆ ಗುರಿ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕರ್ನಾಟಕ ಪ್ರಜಾಶಕ್ತಿ ಸಮಿತಿ, ಬಹುಜನ ಜಾಗೃತಿ ವೇದಿಕೆ, ಕರ್ನಾಟಕ ಕೂಲಿ ಕಾರ್ಮಿಕರ ಸಂಘದ ಪ್ರಮುಖರಾದ ಸಾಯಿ ಸಿಮಧೆ, ಮುಕೇಶ ಶಾಹಗಂಜ್, ಅಶೋಕ ವಗ್ಗೆ, ರಮೇಶ ಪಾಸ್ವಾನ್, ಮಹೇಶಂದ್ರಕುಮಾರ ಹೊಸಮನಿ, ನಿತೀಶ ಮತ್ತು ಮಲ್ಲಿಕಾರ್ಜುನ ಇದ್ದರು.
ಇದನ್ನೂ ಓದಿ:ಎಸ್ಸಿ ಪ್ರಮಾಣ ಪತ್ರ ನೀಡದಿರಿ
ವಕೀಲ ವೃತ್ತಿಗೆ ಕಪ್ಪುಚುಕ್ಕೆ: ಸಾಹಿತಿ ಪ್ರೊ|. ಭಗವಾನ ಅವರ ಮುಖಕ್ಕೆ ಮಸಿ ಹಚ್ಚಿರುವ ಘಟನೆಯನ್ನು ವಿವಿಧ ಸಂಘಟನೆಗಳು ಖಂಡಿಸಿವೆ. ಈ ಕುರಿತು ಸತ್ಯಶೋಧಕ ಸಮಾಜದ ಅಧ್ಯಕ್ಷ ವೀರಶೆಟ್ಟಿ ದೀನೆ, ಅಖೀಲ ಭಾರತ ತಂಜೀಮೆ ಇನ್ಸಾಫ್ ಅಧ್ಯಕ್ಷ ಅಲಿ ಅಹ್ಮದ್ ಖಾನ್, ಭಾರತೀಯ ಭೀಮಸೇನಾಅಧ್ಯಕ್ಷ ಮಾಣಿಕ ಖಾನಾಪೂರ, ಪ್ರಗತಿಶೀಲ ಲೇಖಕಕರ ಸಂಘದ ಬಾಬುರಾವ ಹೊನ್ನಾ ಮತ್ತು ಶಿವರಾಜ ಧುಪತಮಹಾಗಾಂವಕರ್ ಪ್ರಕಟಣೆ ಹೊರಡಿಸಿದ್ದಾರೆ.
ವಕೀಲೆ ತನ್ನ ಸಿದ್ಧಾಂತದ ಪ್ರಚಾರವನ್ನು ಪ್ರಜಾಪ್ರಭುತ್ವದಡಿ ಮಾಡಬೇಕು. ಆದರೆ, ವೈಜ್ಞಾನಿಕ ಮನೋಭಾವದ ವ್ಯಕ್ತಿಯಾಗಿರುವಭಗವಾನರ ಮುಖಕ್ಕೆ ಕಪ್ಪು ಮಸಿ ಹಚ್ಚುವ ಮೂಲಕ ಅವಳೊಬ್ಬ ಸಂವಿಧಾನ ಮತ್ತು ರಾಷ್ಟ್ರ ವಿರೋಧಿ ಎಂಬುದು ಸಾಬಿತುಪಡಿಸಿದ್ದು, ಕೂಡಲೇ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.