ಭಾಲ್ಕಿ ತರಕಾರಿ ಮಾರುಕಟ್ಟೆ ಸೀಲ್ಡೌನ್
Team Udayavani, Jul 5, 2020, 11:22 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾಲ್ಕಿ: ಪಟ್ಟಣದ ಮೂವರಲ್ಲಿ ಶುಕ್ರವಾರ ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ನೇತೃತ್ವದ ಅಧಿಕಾರಿಗಳ ತಂಡ ಜ್ಯೋತಿಬಾ ಫುಲೆ ವೃತ್ತದ ಬಳಿಯ ತರಕಾರಿ ಮಾರುಕಟ್ಟೆಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿ ಸೀಲ್ಡೌನ್ ಮಾಡಿದ್ದಾರೆ.
ತಾಲೂಕಿನ ನಾವದಗಿ ಗ್ರಾಮದ 21 ವರ್ಷದ ಯುವಕ, ಗೋರ ಚಿಂಚೋಳಿ ಗ್ರಾಮದ 54 ವರ್ಷದ ಪುರುಷ, ಪಟ್ಟಣದ ಲೆಕ್ಚರ್ ಕಾಲೋನಿ ರಸ್ತೆಯ 42 ವರ್ಷದ ಪುರುಷ, ಸರ್ಕಾರಿ ಆಸ್ಪತ್ರೆಯ ವಸತಿಗೃಹದ 32 ವರ್ಷದ ಸ್ಟಾಫ್ ನರ್ಸ್, ಲೋಖಂಡೆ ಗಲ್ಲಿಯ 19 ವರ್ಷದ ಯುವತಿ, ಈಚೆಗೆ ಹೈದರಾಬಾದ್ನಲ್ಲಿ ಸಾವನ್ನಪ್ಪಿದ ಕನಕದಾಸ ಓಣಿಯ ವ್ಯಕ್ತಿ ಒಳಗೊಂಡಂತೆ ಒಟ್ಟು 6 ಜನರಲ್ಲಿ ಕೋವಿಡ್-19 ಖಚಿತವಾಗಿದೆ. ಇವರಲ್ಲಿ ನಾವದಗಿ ಗ್ರಾಮದ ಶಂಕಿತ ಮಾತ್ರ ಬೆಂಗಳೂರಿಗೆ ಪ್ರಯಾಣಿಸಿದ ಹಿನ್ನೆಲೆ ಹೊಂದಿದ್ದಾನೆ. ಉಳಿದವರಿಗೆ ಹೇಗೆ ಸೋಂಕು ತಗುಲಿದೆ ಎನ್ನುವುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರು ಸುರಕ್ಷತೆಗಾಗಿ ತಪ್ಪದೇ ಮುಖಗವಸು ಧರಿಸಬೇಕು. ಎಲ್ಲೇ ಹೋದರೂ ಕಡ್ಡಾಯವಾಗಿ ಪರಸ್ಪರ ಅಂತರ ಕಾಪಾಡಬೇಕು. ಮೇಲಿಂದ ಮೇಲೆ ಕೈಗಳನ್ನು ಚೆನ್ನಾಗಿ ತೊಳೆಯಬೇಕು ಎಂದು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ ಸಲಹೆ ನೀಡಿದ್ದಾರೆ. ತಾಲೂಕು ಆರೋಗ್ಯ ಅಧಿಕಾರಿ ಡಾ| ಜ್ಞಾನೇಶ್ವರ ನಿರಗುಡೆ, ಡಿವೈಎಸ್ಪಿ ದೇವರಾಜ ಬಿ. ಇದ್ದರು.