ಕೃಷಿಕ ತಂದೆ ವಿಶ್ವಾಸ ಉಳಿಸಿದ ಚಿನ್ನದಂಥ ಮಗ!
ಬೀದರ್ ಪಶು ವಿವಿ ಘಟಿಕೋತ್ಸವದಲ್ಲಿ ವಿಶ್ವಾಸ್ಗೆ 10 ಚಿನ್ನದ ಪದಕ ಭವಿಷ್ಯದಲ್ಲಿ ಪ್ರಾಣಿಗಳ ಸೇವೆ ಮಾಡುವಾಸೆ
Team Udayavani, Jan 18, 2020, 1:08 PM IST
ಬೀದರ: ಅಪ್ಪಟ ಗ್ರಾಮೀಣ ಪ್ರತಿಭೆ, ಕೃಷಿಯನ್ನೇ ನಂಬಿಕೊಂಡು ಬದುಕು ಸಾಗಿಸುತ್ತಿರುವ ರೇಷ್ಮೆ ಕೃಷಿಕನ ಮಗ ಚಿನ್ನದಂಥ ಬೆಳೆ ತೆಗೆದಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಕೊತ್ನೂರಿನ ವಿಶ್ವಾಸ್ ಕೆ.ಎಂ. ಈ ಬಾರಿಯ ಪಶು ವೈದ್ಯಕೀಯ ವಿಜ್ಞಾನಗಳ ವಿವಿ ಘಟಿಕೋತ್ಸವದಲ್ಲಿ ಗರಿಷ್ಠ ಚಿನ್ನದ ಪದಕ ಬಾಚಿಕೊಂಡಿದ್ದಾನೆ.
ಬಡತನದ ಮಧ್ಯೆಯೂ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಅಭ್ಯಸಿಸುವ ಮೂಲಕ ಗ್ರಾಮೀಣ ಪ್ರತಿಭೆ ವಿಶ್ವಾಸ್ ಮಹತ್ವದ ಸಾಧನೆ ಮಾಡಿದ್ದಾರೆ. ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ವಿಜ್ಞಾನ (ಬಿವಿಎಸ್ಸಿ-ಎಎಚ್) ಸ್ನಾತಕ ಪದವಿ (2017-18)ಯಲ್ಲಿ ಒಟ್ಟಾರೆ 8.89 ಅಂಕಗಳೊಂದಿಗೆ 10 ಪದಕಗಳನ್ನು ತನ್ನದಾಗಿಸಿಕೊಂಡು ಯುವ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಮೂಕ ಪ್ರಾಣಿಗಳ ಸೇವೆ ಮಾಡಬೇಕೆಂಬ ತಮ್ಮ ಕನಸಿಗೆ ಹೊಸ ಸ್ಫೂರ್ತಿ ಪಡೆದಿದ್ದಾರೆ.
ಕೊತ್ನೂರಿನ ಕೃಷಿ ದಂಪತಿ ಮುನಿರೆಡ್ಡಿ ಮತ್ತು ರತ್ನಮ್ಮ ಅವರ ಹಿರಿಯ ಮಗ ವಿಶ್ವಾಸ್ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಚಿಂತಾಮಣಿಯಲ್ಲಿ ಮುಗಿಸಿದ್ದಾರೆ. ಎಸ್ಎಸ್ ಎಲ್ಸಿಯಲ್ಲಿ ಶೇ. 95 ಮತ್ತು ಪಿಯುಸಿಯಲ್ಲಿ ಶೇ. 97ರಷ್ಟು ಅಂಕ ಗಳಿಸಿದ್ದರು. ಎಂಜಿನಿಯರಿಂಗ್ ಓದಬೇಕೆಂಬ ಕನಸು ಕಟ್ಟಿಕೊಂಡಿದ್ದರು. ಆದರೆ ಪಶು ವೈದ್ಯ ಶಿಕ್ಷಣ ಪಡೆದು ಕೃಷಿಕರಾಗಿರುವ ತಂದೆಯ ಕನಸು ನನಸಾಗಿಸುತ್ತಿದ್ದಾರೆ. ಬೆಂಗಳೂರಿನ ಪಶುವೈದ್ಯ ಕಾಲೇಜಿನಲ್ಲಿ ಬಿವಿಎಸ್ಸಿ ಪದವಿ ಮುಗಿಸಿರುವ ವಿಶ್ವಾಸ್, ಸದ್ಯ ಇದೇ ಕಾಲೇಜಿನಲ್ಲಿ ಕುಕ್ಕುಟ ವಿಜ್ಞಾನ (ಪೌಲ್ಟ್ರಿ ಸೈನ್ಸ್) ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.
ಕೃಷಿ ಕುಟುಂಬದಿಂದ ಬಂದ ಕಾರಣ ಪಶು ಸೇವೆ ಮಾಡಲು ಈ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದೇನೆ. ಅಂದಿನ ಪಾಠವನ್ನು ಅಂದೇ
ಓದುತ್ತಿದ್ದೆ. ಶ್ರದ್ಧೆ, ಆಸಕ್ತಿಯಿಂದ ಪರಿಶ್ರಮಪಟ್ಟರೆ ಪ್ರತಿಯೊಬ್ಬರೂ ಸಾಧನೆ ಮಾಡಬಹುದು. ಚಿನ್ನದ ಪದಕಗಳು ಬರಬಹುದೆಂದು ನಿರೀಕ್ಷೆ ಇತ್ತು. 10 ಚಿನ್ನದ ಪದಕ ನನ್ನ ಪಾಲಿಗೆ ಅನಿರೀಕ್ಷಿತ. ಇದನ್ನು ಹೆತ್ತವರಿಗೆ ಅರ್ಪಿಸುತ್ತೇನೆ. ಮುಂದೆ ಪಶು ಅಧಿಕಾರಿಯಾಗಿ ಜಾನುವಾರುಗಳ ಸೇವೆ ಸಲ್ಲಿಸುವ ಮೂಲಕ ರೈತರಿಗೆ ನೆರವಾಗುತ್ತೇನೆ.
ವಿಶ್ವಾಸ್,
10 ಚಿನ್ನದ ಪದಕ ಪಡೆದ ವಿದ್ಯಾರ್ಥಿ
ಶಶಿಕಾಂತ ಬಂಬುಳಗೆ