ಸುಂಟರ ಗಾಳಿಗೆ ಹಾರಿ ಹೋದ ಚೆಕ್ಪೋಸ್ಟ್ ಶೆಡ್
Team Udayavani, Apr 29, 2020, 1:25 PM IST
ಕಮಲನಗರ: ಪಟ್ಟಣದ ಗಡಿ ಭಾಗದಲ್ಲಿರುವ ಚೆಕ್ ಪೋಸ್ಟ್ ಬಳಿಯಿದ್ದ ಶೆಡ್ ಗಾಳಿಗೆ ಹಾರಿ ಹೋಗಿದೆ.
ಕಮಲನಗರ(ಬೀದರ): ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡ ಕಮಲನಗರ ಗಡಿ ಭಾಗದಲ್ಲಿ ನಿರ್ಮಿಸಿರುವ ಚೆಕ್ಪೋಸ್ಟ್ನ ಶೆಡ್ ಸುಂಟರ ಗಾಳಿಗೆ ಹಾರಿ ಹೋಗಿದ್ದು, ಕೋವಿಡ್ ಯೋಧರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದ ಘಟನೆ ಮಂಗಳವಾರ ಜರುಗಿದೆ.
ಕಳೆದ ಕೆಲ ದಿನಗಳ ಹಿಂದೆಯೇ ಭಾರಿ ಗುಡುಗು ಮಿಂಚು ಸಹಿತ ಮಳೆಯಿಂದ ಇದೇ ಚೆಕ್ಪೋಸ್ಟ್ನಲ್ಲಿ ಸಿಬ್ಬಂದಿಗೆ ಅಗತ್ಯ ಸೌಲಭ್ಯಗಳಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಎಚ್ಚೆತ್ತುಕೊಳ್ಳದ ತಾಲೂಕು ಆಡಳಿತ ಮತ್ತು ಗ್ರಾಪಂ ನಿಷ್ಕಾಳಜಿಯಿಂದ ಇಂತದೊಂದು ಅನಾಹುತ ನಡೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಏ.13 ರಂದು ಬೀದರನ ಹೆಚ್ಚುವರಿ ಪೊಲೀಸ್ ಅಧಿಧೀಕ್ಷಕ ಡಾ|ಗೋಪಾಲ ಚೆಕ್ ಪೋಸ್ಟ್ಗೆ ಭೇಟಿ ನೀಡಿದ್ದಾಗ ಸಿಬ್ಬಂದಿಗೆ ಕುಳಿತುಕೊಳ್ಳಲು ಶೆಡ್ ನಿರ್ಮಿಸಲು ಸೂಚಿಸಿದ್ದರು. ಅವರ ಆದೇಶದಂತೆ ತಹಶೀಲ್ದಾರ್ ಶೆಡ್ ನಿರ್ಮಿಸಿದ್ದರು. ಸರಿಯಾಗಿ ಕಾಮಗಾರಿ ನಿರ್ವಹಿಸದಿದ್ದರಿಂದ ಇಂಥ ದುರ್ಘಟನೆ ನಡೆದಿದೆ.