ಜಾನಪದ ಗಾಯನದಿಂದ ಮುನ್ನೆಚ್ಚರಿಕೆ ಜಾಗೃತಿ
Team Udayavani, Mar 18, 2020, 3:55 PM IST
ಬೀದರ: ಜಾನಪದ ಕಲಾವಿದರ ಬಳಗದ ವತಿಯಿಂದ ಮಂಗಳವಾರ ಕೇಂದ್ರ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಕರೋನಾ ವೈರಸ್ ಮುನ್ನೆಚ್ಚರಿಕೆ ಕುರಿತು ಜಾನಪದ ಗಾಯನ ಮೂಲಕ ಜಾಗೃತಿ ಮೂಡಿಸಲಾಯಿತು.
ರೋಗ ಬಂದಾದೋ ಜೋಪಾನಾ, ಓ ರಂಗಣ್ಣ, ಓ ಮಲ್ಲಣ್ಣಾ, ಓ ಕಲ್ಲಣ್ಣ ಎಂದು ಜಾನಪದ ಶೈಲಿಯಲ್ಲಿ ನೃತ್ಯ ಮಾಡುತ್ತಾ ಜನರಲ್ಲಿ ಕೈ ಮುಗಿದು ಅರಿವು ಮೂಡಿಸಲಾಯಿತು. ಈ ವೇಳೆ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಕೊರೊನಾ ಲಕ್ಷಣಗಳು ಕಾಣಿಸಿಕೊಂಡಲ್ಲಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮನೆಯಲ್ಲಿಯೇ ತಯಾರಿಸಿದ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಸಲಹೆ ನೀಡಿದರು.
ನಟ-ನಿರ್ದೇಶಕ ಮಹೇಶ ಪಾಟೀಲ ಮಾತನಾಡಿ, ಕೊರೊನಾ ಸೋಂಕು ವಿಶ್ವದಾದ್ಯಂತ ಹರಡಿದ್ದು, ಮುನ್ನೆಚ್ಚರಿಕೆಯೇ ಅದಕ್ಕಿರುವ ಔಷಧ. ಆಗಾಗ ಸಾಬೂನಿಂದ ಚನ್ನಾಗಿ ಕೈ ತೊಳೆದುಕೊಳ್ಳಬೇಕು. ಸಾಧ್ಯವಾದಷ್ಟು ಪೌಷ್ಠಿಕ ಆಹಾರ ಸೇವಿಸಬೇಕು. ಮತ್ತು ಇನ್ನೊಬ್ಬರನ್ನು ಭೇಟಿಯಾದಾಗ ಕೈ ಮಿಲಾಯಿಸುವ ಬದಲು ಭಾರತಿಯ ಸಂಸ್ಕೃತಿಯಂತೆ ನಮಸ್ಕಾರ ಮಾಡಬೇಕು ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಟ್ರಸ್ಟ್ನ ಅಧ್ಯಕ್ಷ ಸುನೀಲ ಭಾವಿಕಟ್ಟಿ, ರಂಗ ತರಂಗ ಟ್ರಸ್ಟ್ನ ಅಧ್ಯಕ್ಷ ಎಂ.ಪಿ.ಮುದಾಳೆ, ಚಂದ್ರಕಾಂತ ಹಳ್ಳಿಖೇಡಕರ್, ಜಾನಪದ ಕಲಾವಿದರಾದ ಯೇಸುದಾಸ ಅಲಿಯಂಬರ್, ರಮೇಶ ದೊಡ್ಡಿ, ಶಿವಕುಮಾರ ಅಂಬಿಗಾರ, ಮಹೇಶ ಕೋಲಿ ಇತರರು ಇದ್ದರು.