ಗಡಿನಾಡಲ್ಲಿ ಬಾಲ್ಯ ವಿವಾಹ ಅವ್ಯಾಹತ!
Team Udayavani, Sep 23, 2020, 5:35 PM IST
ಸಾಂದರ್ಭಿಕ ಚಿತ್ರ
ಬೀದರ: ಆ ಬಾಲಕಿಯ ವಯಸ್ಸು ಆಗಿನ್ನು ಕೇವಲ 13 ವರ್ಷ. ರಾಜಸ್ಥಾನ ಮೂಲದ 45 ವರ್ಷದ ವ್ಯಕ್ತಿಯ ಜತೆಗೆ ಮದುವೆ ನಿಶ್ಚಯವಾಗಿತ್ತು. ಆದರೆ, ಬಾಲಕಿಯ ಸ್ನೇಹಿತೆಯ ಒಂದು ದೂರವಾಣಿ ಕರೆಯಿಂದ ಚಿಕ್ಕ ವಯಸ್ಸಿನಲ್ಲೇ ಮದುವೆಯೆಂಬ ಕೂಪಕ್ಕೆ ಸಿಲುಕುವುದು ತಪ್ಪಿತ್ತು. ಆಶ್ಚರ್ಯಕರ ಸಂಗತಿ ಎಂದರೆ, ಆ ವ್ಯಕ್ತಿಗೆ ಇದು 2ನೇ ಮದುವೆ ಎಂಬ ವಿಷಯ ಬಾಲಕಿಗೆ ತಿಳಿದಿದ್ದು ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ನಡೆಸಿದಾಗಲೇ.
ಇದು ಬೀದರ ಸಮೀಪದ ಹೊನ್ನಡಿ ಎಂಬ ಪುಟ್ಟ ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನೈಜ ಘಟನೆ. ಪುಟ್ಟ ಬಾಲಕಿಯ ಮದುವೆಗಾಗಿ ಗ್ರಾಮಸ್ಥರೆಲ್ಲರೂ ಸೇರಿದ್ದರು. ಕೆಲವೇ ಕ್ಷಣಗಳಲ್ಲಿ ಮದುವೆ ನಡೆಯಬೇಕಿತ್ತು. ಆದರೆ, ಗೆಳತಿಯ ಸಾಮಾಜಿಕ ಪ್ರಜ್ಞೆಯಿಂದ ಬಾಲ್ಯ ವಿವಾಹ ನಿಂತಿತ್ತು. ಇಂಥ ಪುಟ್ಟ ಗೌರಿಗಳ ಮದುವೆ ಗಡಿ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಲೇ ಇವೆ. ಎಳೆ ಕಂದಮ್ಮಗಳ ಹಕ್ಕು ಕಸಿದುಕೊಳ್ಳುವುದಷ್ಟೇ ಅಲ್ಲ, ಅವರ ಬದುಕನ್ನೇ ಮಂಕಾಗಿಸುತ್ತಿದೆ. ಇದಕ್ಕೆ ಕಳೆದ 8 ವರ್ಷದಲ್ಲಿ 309 ವಿವಾಹಕ್ಕೆ ಬ್ರೇಕ್ ಬಿದ್ದಿರುವುದೇ ಸಾಕ್ಷಿ.
5 ತಿಂಗಳಲ್ಲಿ 42 ಬಾಲ್ಯ ವಿವಾಹ ತಡೆ: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂಬುದು ತಿಳಿದಿದ್ದರೂ ಗಡಿನಾಡು ಬೀದರನಲ್ಲಿ ಇಂದಿಗೂ ಅಪ್ರಾಪ್ತ ಮಕ್ಕಳ ವಿವಾಹ ಜೀವಂತವಾಗಿವೆ. ಕಳೆದ ಐದು ತಿಂಗಳ ಕೊರೊನಾ ಸಂದಿಗ್ಧ ಸ್ಥಿತಿಯಲ್ಲೂ 42 ಬಾಲ್ಯ ವಿವಾಹಗಳನ್ನು ತಡೆಹಿಡಿಯಲಾಗಿದೆ. ಕೋವಿಡ್ ಲಾಕ್ಡೌನ್ ನಿರ್ಬಂಧಗಳಿಂದ ಉಂಟಾದ ಸ್ತಬ್ಧತೆಯ ಲಾಭ ಪಡೆದು ಪಾಲಕರು ತಮ್ಮ ಹಲವು ಹೆಣ್ಣುಮಕ್ಕಳಿಗೆ ಬಾಲ್ಯ ವಿವಾಹ ಮಾಡಿಸಿದ್ದಾರೆ. ಜಿಲ್ಲೆಯಲ್ಲಿ ಏಪ್ರಿಲ್ನಿಂದ ಆಗಸ್ಟ್ ವರೆಗೆ 100ಕ್ಕೂ ಅಧಿಕ ಬಾಲ್ಯ ವಿವಾಹಗಳೂ ನಡೆದಿದ್ದು, ಖಚಿತ ಮಾಹಿತಿ, ದೂರುಗಳು ಬಂದ ಕೆಲವು ಮದುವೆಗಳಿಗೆ ಮಾತ್ರ ಬ್ರೇಕ್ ಬಿದ್ದಿದೆ. ಈವರೆಗೆ ಮೂರು ಎಫ್ಐಆರ್ ಸಹ ದಾಖಲಾಗಿವೆ.
ಇದರಿಂದ ಆಡುತ್ತ, ನಲಿಯುತ್ತಾ, ಕಲಿಯುತ್ತಾ ಬಾಲ್ಯ ಜೀವನದ ಸವಿಯನ್ನು ಅನುಭವಿಸಬೇಕಾದ ಮಕ್ಕಳು ಮದುವೆಯೆಂಬ ಕೂಪಕ್ಕೆ ತಳ್ಳಲ್ಪಡುತ್ತಿದ್ದಾರೆ. ಈ ಅಪರಾಧಕ್ಕೆ ಹೆಚ್ಚಾಗಿ ತುತ್ತಾಗುತ್ತಿರುವುದು ಹೆಣ್ಣು ಮಕ್ಕಳು. ಈ ಪಿಡುಗು ನಿರ್ಮೂಲನೆಗಾಗಿ ಸರ್ಕಾರ ಸಾಕಷ್ಟು ಕಾರ್ಯಕ್ರಮ ರೂಪಿಸುತ್ತಿದ್ದರೂ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಪೋಷಕರು ತಮ್ಮ “ಭಾರ’ವನ್ನು ಕಳೆದುಕೊಳ್ಳಲು ಮಕ್ಕಳ ಬದುಕನ್ನೇ ಬಲಿ ಕೊಡುತ್ತಿರುವುದು ವಿಪರ್ಯಾಸ.
8 ವರ್ಷದಲ್ಲಿ 309 ವಿವಾಹಕ್ಕೆ ಬ್ರೇಕ್: ಆದರೆ, ಕಾಯ್ದೆ ಎಚ್ಚರಿಕೆ ನಡುವೆಯೂ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ಮಾತ್ರ ನಿಂತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸ್ಥಾಪಿಸಿರುವ ಮಕ್ಕಳ ರಕ್ಷಣಾ ಘಟಕ 2012ರಿಂದ ಈವರೆಗೆ 309 ಬಾಲ್ಯ ವಿವಾಹಗಳನ್ನು ತಡೆಗಟ್ಟಿದೆ. 2012-13ರಲ್ಲಿ 7, 2014-15ರಲ್ಲಿ 16, 2015-16ರಲ್ಲಿ 35, 2016-17ರಲ್ಲಿ 33, 2017-18ರಲ್ಲಿ 46, 2018-19ರಲ್ಲಿ 44, 2019-20ರಲ್ಲಿ 86 ಹಾಗೂ ಪ್ರಸಕ್ತ ಸಾಲಿನ ಏಪ್ರಿಲ್ನಿಂದ ಆಗಸ್ಟ್ವರೆಗೆ 42 ಬಾಲ್ಯ ವಿವಾಹ ತಡೆಯಲಾಗಿದೆ.
ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಹಯೋಗದಲ್ಲಿ ರೂಪಿಸಿರುವ “ಶಾಲೆ ಕಡೆ ನನ್ನ ನಡೆ’ ಜಾಗೃತಿ ಆಂದೋಲನ ಪರಿಣಾಮ ಬಾಲ್ಯ ವಿವಾಹಗಳು ಬೆಳಕಿಗೆ ಬರುತ್ತಿವೆ. ತಮ್ಮ ಬಾಲ್ಯ ವಿವಾಹ ಮಾಡಲಾಗುತ್ತಿದೆ ಎಂದು ಖುದ್ದು ಬಾಲಕಿಯರು ಮತ್ತು ಗ್ರಾಮದ ಶಿಕ್ಷಿತ ಯುವಕರಿಂದಲೇ (1098) ದೂರು ಬರುತ್ತಿವೆ. ಮಕ್ಕಳ ಸಹಾಯವಾಣಿ ಸಹಕಾರದೊಂದಿಗೆ ಘಟಕ ಅಪ್ರಾಪ್ತರನ್ನು ರಕ್ಷಣೆ ಮಾಡಿ ಮುಚ್ಚಳಿಕೆ ಬರೆಸಿಕೊಳ್ಳುತ್ತಿದೆ. ಬಾಲ್ಯ ವಿವಾಹದ ಬಗ್ಗೆ ದೂರು ನೀಡಿದವರ ಮಾಹಿತಿಯನ್ನೂ ಗೌಪ್ಯವಾಗಿ ಇಡಲಾಗುತ್ತಿದೆ.
ಬಾಲಕಿಯರ ಮಾರಾಟ ಶಂಕೆ : ಬಾಲ್ಯ ವಿವಾಹಕ್ಕೆ ಬಡತನ ಮತ್ತು ಅನಕ್ಷರತೆ ಪ್ರಮುಖ ಕಾರಣ. ಕಡಿಮೆ ಖರ್ಚಿನಲ್ಲಿ ಮದುವೆ ಮಾಡಿ ಕೈತೊಳೆದುಕೊಳ್ಳುವ ಮನೋಭಾವ ಪಾಲಕರಲ್ಲಿ ಹೆಚ್ಚುತ್ತಿರುವುದರಿಂದ ಲಿಂಗಾನುಪಾತ ಕಡಿಮೆ ಇರುವ ರಾಜಸ್ಥಾನ ಮತ್ತು ಗುಜರಾತನ ವ್ಯಕ್ತಿಗಳು ಜಿಲ್ಲೆಗೆ ಬಂದು ಇಲ್ಲಿನ ಬಾಲಕಿಯರ ಜತೆ ಮದುವೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಮದುವೆಗಳಮೂಲಕ ಬಾಲಕಿಯರ ಮಾರಾಟದ ಶಂಕೆ ವ್ಯಕ್ತವಾಗುತ್ತಿದೆಯಾದರೂ ಅಧಿಕೃತವಾಗಿ ಬೆಳಕಿಗೆ ಬಂದಿಲ್ಲ. ಮತ್ತೂಂದೆಡೆ ಆಸ್ತಿ ಆಸೆಗಾಗಿ ಸಂಬಂಧಗಳಲ್ಲೇ ವಿವಾಹ, ಚಿಕ್ಕ ವಯಸ್ಸಿನಲ್ಲೇ ಪ್ರೀತಿಯ ಜಾಲದಿಂದ ಮೋಸಕ್ಕೆ ಸಿಲುಕುವುದು, ಹಿರಿಯರ ಸಾಂಪ್ರದಾಯಿಕ ಆಲೋಚನೆಗಳೂ ಸಹ ಈ ಪಿಡುಗು ಹೆಚ್ಚಲು ಕಾರಣವಾಗುತ್ತಿದೆ. ಈ ಅನಿಷ್ಠ ಪದ್ದತಿ ಎಳೆ ಕಂದಮ್ಮಗಳಹಕ್ಕು ಕಸಿದುಕೊಳ್ಳುವುದಷ್ಟೇ ಅಲ್ಲ, ಅವರ ಬದುಕನ್ನೇ ಮಂಕಾಗಿಸುತ್ತಿದೆ.
ಹೆಣ್ಣು ಮಕ್ಕಳ ಬಗೆಗಿನ ತಪ್ಪು ಕಲ್ಪನೆಗಳೇ ಬಾಲ್ಯ ವಿವಾಹ ಹೆಚ್ಚಲು ಕಾರಣ. ಬೀದರ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ತಿಂಗಳಲ್ಲೇ 42 ಮಕ್ಕಳ ಮದುವೆ ತಡೆಯಲಾಗಿದೆ. ಮಕ್ಕಳಿಂದಲೇ ಈಗ ದೂರುಗಳು ಬರುತ್ತಿವೆ. ಮಾಹಿತಿ ತಿಳಿದಾಕ್ಷಣ ಅ ಧಿಕಾರಿಗಳ ತಂಡ ಮದುವೆ ನಿಲ್ಲಿಸಿ ಪಾಲಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗುತ್ತಿದೆ ಮತ್ತು ಬಾಲ್ಯ ವಿವಾಹದಿಂದ ಆಗುವ ಅನಾಹುತ, ಕಾನೂನು ಶಿಕ್ಷೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಈವರೆಗೆ ಮದುಮಗ ಮತ್ತು ಪಾಲಕರ ವಿರುದ್ಧ ಮೂರು ಎಫ್ಐಆರ್ ಸಹ ದಾಖಲಾಗಿವೆ.- ಶಂಭುಲಿಂಗ ಹಿರೇಮಠ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೀದರ
-ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lokayukta; ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆಗಿಳಿದ ಲೋಕಾಯುಕ್ತ
Bidar: 9 ಲಕ್ಷ ರೂ. ಮೌಲ್ಯದ ಕಚ್ಚಾ ಪಾನ್ ಮಸಾಲಾ, 3 ಲಕ್ಷ ರೂ. ಮೌಲ್ಯ ಸೀರೆ ಜಪ್ತಿ
ಹಾಲ್ ಟಿಕೆಟನ್ನೇ ತಿಂದು ಹಾಕಿದ ಕುರಿ… ನೊಂದು ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
Bidar; ಖೂಬಾ ಪರ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
Loksabha: ಬೀದರ್ ಕ್ಷೇತ್ರಕ್ಕೆ ಸಾಗರ ಖಂಡ್ರೆ ಹೆಸರು ಅಂತಿಮ; ಸಿಎಂ ಭೇಟಿಯಾದ ಈಶ್ವರ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ