ನಿಟ್ಟೂರ(ನಿ)ಗ್ರಾಮದಲ್ಲಿ ಬಾಲ್ಯ ವಿವಾಹ ತಡೆದ ಅಧಿಕಾರಿಗಳು
Team Udayavani, May 15, 2022, 1:26 PM IST
ಭಾಲ್ಕಿ: 1098ಗೆ ಬಂದ ಅನಾಮಧೇಯ ದೂರವಾಣಿ ಕರೆ ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳ ತಂಡ ತಾಲೂಕಿನ ನಿಟ್ಟೂರ(ಬಿ) ಗ್ರಾಮಕ್ಕೆ ಭೇಟಿ ನೀಡಿ, ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಶನಿವಾರ ತಡೆದಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಶಾಂತ ಬಿರಾದಾರ ನೇತೃತ್ವದಲ್ಲಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ ತಂಡ ಗ್ರಾಮಕ್ಕೆ ತೆರಳಿ ಅಗತ್ಯ ಮಾಹಿತಿ ಕಲೆಹಾಕಿತು. ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದ ಬಾಲಕಿ ಮನೆಗೆ ಭೇಟಿ ನೀಡಿ, ಬಾಲಕಿಯನ್ನು ರಕ್ಷಣೆ ಮಾಡಿದರು.
ತಂದೆ, ತಾಯಿ ಹತ್ತಿರ ತಮ್ಮ ಮಗಳಿಗೆ 18 ವರ್ಷ ತುಂಬುವ ವರೆಗೆ ಮದುವೆ ಮಾಡುವುದಿಲ್ಲ ಎನ್ನುವ ಮುಚ್ಚಳಿಕೆ ಬರೆಸಿಕೊಂಡು ನಡೆಯಬೇಕಿದ್ದ ಮದುವೆ ನಿಲ್ಲಿಸಿದ್ದಾರೆ. ಮಕ್ಕಳ ರಕ್ಷಣಾಧಿಕಾರಿ ಪ್ರಶಾಂತ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಒ ಸಹದೇವ.ಜಿ, ಪಿಡಿಒ ಚಂದ್ರಕಾಂತ, ಮೇಲ್ವಿಚಾರಕಿ ವಿದ್ಯಾವತಿ, ಪೊಲೀಸ್ ಸಿಬ್ಬಂದಿ ಶರಣು, ಮಕ್ಕಳ ಸಹಾಯವಾಣಿ ಉಪಕೇಂದ್ರ ಭಾಲ್ಕಿಯ ಸಂದೀಪ ದೇವಕೆ ಇದ್ದರು.