ಯೋಗಿ ಸರ್ಕಾರ ವಜಾಕ್ಕೆ ಕೈ ಆಗ್ರಹ
Team Udayavani, Oct 7, 2020, 4:35 PM IST
ಬೀದರ: ಜನಧ್ವನಿ ದಮನ ಮಾಡುತ್ತಿರುವ ಉತ್ತರ ಪ್ರದೇಶ ಸರ್ಕಾರ ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಮತ್ತು ರಾಜ್ಯ- ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ಕೈಬಿಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಈಶ್ವರ ಖಂಡ್ರೆ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರ ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಹತ್ರಾಸ್ನ ಯುವತಿ ಮೇಲಿನ ಬಲಾತ್ಕಾರದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವವರೆಗೆ, ಜನ ವಿರೋಧಿ ಸರ್ಕಾರ ಕಿತ್ತು ಹಾಕುವವರೆಗೆ ನಮ್ಮ ಹೋರಾಟ ನಿರಂತರ ನಡೆಯಲಿದೆ. ನ್ಯಾಯ ಸಿಗುವವರೆಗೆ ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಸಲುವಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಉತ್ತರಪ್ರದೇಶದ ಹತ್ರಾಸ್ನಲ್ಲಿ 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು ಆಕೆಕೊಲೆಗೀಡಾಗಿದ್ದಾಳೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಹಾಗೂ ಸಂತ್ರಸ್ತೆ ಕುಟುಂಬಕ್ಕೆ ರಕ್ಷಣೆ ನೀಡುವುದುಬಿಟ್ಟು, ಅಲ್ಲಿನ ಯೋಗಿ ಸರ್ಕಾರ ಆರೋಪಿಗಳಿಗೆ ರಕ್ಷಣೆ ನೀಡಿ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿದೆ. ಯುವತಿ ಮೃತಪಟ್ಟ ಬಳಿಕವೂಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸದೇ ಸರ್ಕಾರ ಅನ್ಯಾಯ ಮಾಡಿದೆ. ಸಂತ್ರಸ್ತೆ ಕುಟುಂಬಕ್ಕೆ ಸಾಂತ್ವನ ಹೇಳಲು ಹೋದ ಕಾಂಗ್ರೆಸ್ ವರಿಷ್ಠರಾದ ರಾಹುಲ್ ಮತ್ತು ಪ್ರಿಯಾಂಕಾ ವಿರುದ್ಧ ಕೇಸ್ ಹಾಕಿ ದೌರ್ಜನ್ಯ ನಡೆಸಲಾಗಿದೆ. ಇದೊಂದು ರೀತಿಗುಂಡಾರಾಜ್ಯ, ಹಿಟ್ಲರ್ ಆಡಳಿತ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರೈತ- ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ತಂದು ದುಡಿಯುವ ವರ್ಗಕ್ಕೆ ಸಂಕಷ್ಟ ತಂದೊಡ್ಡಿದೆ. ಉಳ್ಳವರಿಗೆ ಸಹಾಯ ಮಾಡಲು, ರೈತರಿಗೆ ಮರಣ ಶಾಸನವನ್ನು ಸುಗ್ರೀವಾಜ್ಞೆಮೂಲಕ ತರಲಾಗಿದೆ. ರೈತರ ಒಳಿತಿಗಾಗಿ ಮಸೂದೆ ಜಾರಿಗೊಳಿಸಿಲ್ಲ. ಬದಲಾಗಿ ಬಹು ರಾಷ್ಟ್ರೀಯ ಕಂಪನಿಗಳ ಒಳಿತಿಗೆ ಮಸೂದೆ ಜಾರಿಗೊಳಿಸಲಾಗಿದೆ ಎಂದು ಆರೋಪಿಸಿದರು.
ಶಾಸಕ ರಹೀಮ್ ಖಾನ್ ಮಾತನಾಡಿ, ಹತ್ರಾಸ್ ಅತ್ಯಾಚಾರ ಪ್ರಕರಣ ದೇಶವೇ ತಲೆ ತಗ್ಗಿಸುವಂಥದ್ದು. ಅಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳು ಸಂತ್ರಸ್ತರ ಬೆನ್ನಿಗೆ ನಿಲ್ಲುವ ಬದಲು ಆರೋಪಿಗಳೊಂದಿಗೆ ನಿಂತಿದ್ದಾರೆ. ರಾತ್ರೋರಾತ್ರಿ ಶವ ಸುಟ್ಟು ಹಾಕಿದ್ದಾರೆ. ತೆಲಂಗಾಣದಲ್ಲಿ ಅತ್ಯಾಚಾರ ಆರೋಪಿಗಳಿಗೆ ಶೂಟೌಟ್ ಮಾಡಿದಂತೆ ಅಲ್ಲೂ ಮಾಡಬೇಕಿತ್ತು. ದೇಶದಲ್ಲಿ ಎಲ್ಲೂ ಇನ್ನೂ ಒಳ್ಳೆಯ ದಿನಗಳೇ ಬಂದಿಲ್ಲ, ಹೀಗಾಗಿ, ನಮಗೆ ಹಳೆಯ ದಿನಗಳೇ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಎಂಎಲ್ಸಿ ಕೆ. ಪುಂಡಲೀಕರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಅಮೃತರಾವ್ ಚಿಮಕೋಡೆ ಇತರರು ಇದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ರಾಜ್ಯದಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಹತ್ತಿಕ್ಕಲು ಮತ್ತು ಕಷ್ಟ ಕೊಡಲು ಬಿಜೆಪಿ ಸರ್ಕಾರ ಸಿಬಿಐ ದಾಳಿ ಮೂಲಕ ಷಡ್ಯಂತ್ರ ನಡೆಸಿದೆ. ತನಿಖೆ ನೆಪದಲ್ಲಿ ವಿರೋಧ ಪಕ್ಷಗಳ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದೆ. ಆದರೆ ಇಂಥ ಹೆದರಿಕೆಗೆ ಕಾಂಗ್ರೆಸ್ ಬಗ್ಗಲ್ಲ. ಕಾಂಗ್ರೆಸ್ ರಾಜಕೀಯ ಪಕ್ಷವಲ್ಲ; ಇದೊಂದು ಆಂದೋಲನ. ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿದ್ದು, ಒಂದು ಪಕ್ಷದ ಏಜೆಂಟರಂತೆ ವರ್ತಿಸಿದರೆ ಕಪ್ಪು ಚುಕ್ಕೆ ಅಂಟಿಕೊಳ್ಳಲಿದೆ. ಸಿಬಿಐ ನ್ಯಾಯಯುತ ತನಿಖೆ ನಡೆಸಲಿ. ನೆಲದ ಕಾನೂನು ಮೇಲೆ ಯಾರೂ ಇಲ್ಲ. ಇಲ್ಲವಾದರೆ ಜನಾಂದೋಲನ ಆರಂಭವಾಗುತ್ತದೆ. –ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ