ಬ್ರಿಮ್ಸ್ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ: ಆರೋಪ
Team Udayavani, Jul 30, 2018, 11:11 AM IST
ಬೀದರ: ಕೆಲವು ತಿಂಗಳುಗಳಿಂದ ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧನಾ ಆಸ್ಪತ್ರೆಯಲ್ಲಿ ಅಕ್ರಮಗಳ ಕುರಿತು ಅನೇಕ ಆರೋಪಗಳು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಮಧ್ಯದಲ್ಲಿಯೇ, ಅಧಿಕಾರ ದುರುಪಯೋಗ ಪಡಿಸಿಕೊಂಡು ಬ್ರಿಮ್ಸ್ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆರೋಪಿಸಿ 8 ಜನರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯಲ್ಲಿ ಶನಿವಾರ ರಾತ್ರಿ ಪ್ರಕರಣ ದಾಖಲಾಗಿದೆ.
ಬ್ರಿಮ್ಸ್ ಮುಖ್ಯ ಆಡಳಿತಾಧಿಕಾರಿ ಆನಂದಸಾಗರ ರೆಡ್ಡಿ, ಆಡಳಿತಾಧಿಕಾರಿ ಅನಸೂಯ, ಕಚೇರಿ ಅಧೀಕ್ಷಕ ಪ್ರಕಾಶ ಮಡಿವಾಳ, ಕಚೇರಿ ಅಧಿಧೀಕ್ಷ ಬಾಬುಕೋಟೆ, ಪ್ರಥಮ ದರ್ಜೆ ಸಹಾಯಕ ಪ್ರಕಾಶ ಮಾಳಗೆ, ಪ್ರಥಮ ದರ್ಜೆ ಸಹಾಯಕಿ ವರ್ಷಾ, ನಿವೃತ್ತ ಕಚೇರಿ ಅಧೀಕ್ಷಕ ಮಾಚೆ ಕಲ್ಲಪ್ಪ, ಹೊರಗುತ್ತಿಗೆ ಸಹಾಯಕ ಶಿವಾಜಿ ಎಂಬುವವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ಕಚೇರಿಯಲ್ಲಿ ದೂರು ದಾಖಲಾಗಿದೆ. ಬ್ರಿಮ್ಸ್ ನಿರ್ದೇಶಕ ಡಾ| ಸಿ. ಚನ್ನಣ್ಣ ಹಾಗೂ ಪ್ರಭಾರಿ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ ಶೇಟ್ಕರ್ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ಇಬ್ಬರು ಹೆಸರು ಎಫ್ಐಆರ್ನಲ್ಲಿ ದಾಖಲಿಸಿಲ್ಲ. ತಡೆಯಾಜ್ಞೆ ತೆರವುಗೊಂಡ ನಂತರ ಆ ಇಬ್ಬರ ಹೆಸರಗಳು ಕೂಡ ಸೇರ್ಪಡೆಗೊಳ್ಳಲಿವೆ ಎಂದು ಎಸಿಬಿ ಮೂಲಗಳು ತಿಳಿಸಿವೆ.
ಎರಡು ವರ್ಷಗಳಲ್ಲಿ ಟೆಂಡರ್ ಪ್ರಕ್ರಿಯೆ, ಸಿ ಮತ್ತು ಡಿ ದರ್ಜೆಯ ನೌಕರರ ನೇಮಕಾತಿ, ಔಷಧ ಖರೀದಿ, ಪೀಠೊಪಕರಣ ಖರೀದಿ ಸೇರಿದಂತೆ ವಿವಿಧ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 20 ಕೋಟಿಗೂ ಅಧಿಕ ಹಣ ದುರ್ಬಳಕೆಯಾಗಿರುವ ಆರೋಪಗಳಿದ್ದು, ವಿವಿಧ ಪೀಠೊಪಕರಣಗಳನ್ನು ಮಾರುಕಟ್ಟೆ ದರಕ್ಕಿಂತ ಎರಡೂ¾ರು ಪಟ್ಟು ಹೆಚ್ಚು ಬೆಲೆಯಲ್ಲಿ ಟೆಂಡರ್ ಕರೆದು ಖರೀದಿಸಿರುವ ಕುರಿತು ಕೂಡ ಗಂಭೀರ ಆರೋಪಗಳನ್ನು ಅಧಿಕಾರಿಗಳ ಮೇಲೆ ಮಾಡಲಾಗುತ್ತಿದೆ.
ಈ ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ ಅವರು ಬ್ರಿಮ್ಸ್ ಬೋಧನಾ ಆಸ್ಪತ್ರೆ ಕುರಿತು ಹೆಚ್ಚು ಮುತ್ತುವರ್ಜಿ ವಹಿಸಿ ಅನೇಕ ಬಾರಿ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸುವ ಕೆಲಸ ಮಾಡಿದ್ದರು. ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿ ಸರ್ಕಾರಿ ಸಂಬಳ ಪಡೆಯುತ್ತಿದ್ದ ವೈದ್ಯರನ್ನು ಗುರುತಿಸಿ ನೋಟಿಸ್ ಜಾರಿಮಾಡಿದ್ದರು. ಅಲ್ಲದೇ ಮುಚ್ಚಳಿಗೆ
ಪತ್ರ ಬರೆಸಿಕೊಂಡು ಕರ್ತವ್ಯ ಲೋಪ ಎಸಗುವ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ಕೂಡ ನೀಡಿದ್ದರು. ವಿವಿಧ ಆರೋಪಗಳನ್ನು ಹೊತ್ತಿದ್ದ ನಿರ್ದೇಶಕರ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿ ಎತ್ತಂಗಡಿ ಮಾಡಿದ ಘಟನೆ ಕೂಡ ನಡೆದಿತ್ತು. ನಂತರ ಈ ಕುರಿತು ನ್ಯಾಯಾಲಯದ ಮೋರೆ ಹೋಗಿದ್ದ ನಿರ್ದೇಶಕ ಮರಳಿ ಅದೇ ಹುದ್ದೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಕೆಲವು ದಿನಗಳ ಹಿಂದೆ ಬ್ರಿಮ್ಸ್ ನಿರ್ದೇಶಕರ ಕಚೇರಿಯಲ್ಲಿ ಬೆಂಕಿ ಕಾಣಿಸಿಕೊಂಡು ವಿವಿಧ ದಾಖಲೆ ಪತ್ರಗಳು, ಕಂಪ್ಯೂಟರ್ ಸೇರಿದಂತೆ ವಿವಿಧ ವಸ್ತುಗಳು ಬೆಂಕಿಗೆ ಆಹುತ್ತಿ ಆಗಿದ್ದವು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಬ್ರಿಮ್ಸ್ ಬೋಧನಾ ಆಸ್ಪತ್ರೆ ಮೇಲ್ಛಾವಣಿಯ ಸೋಲಾರ್ ಪ್ಲೇಟ್ಗಳಲ್ಲಿನ ತಂತಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದನ್ನು ಇಲ್ಲಿ
ಸ್ಮರಿಸಬಹುದಾಗಿದೆ. ಪ್ರಕರಣ ದಾಖಲಿಸಿಕೊಂಡ ಎಸಿಬಿ ಅ ಧಿಕಾರಿಗಳು ಶೀಘ್ರದಲ್ಲಿಯೆ ತನಿಖೆ ಶುರು ಮಾಡುವ ಸಾಧ್ಯತೆಗಳು ಇವೆ.
ಬ್ರಿಮ್ಸ್ ಅಕ್ರಮಗಳ ಕುರಿತು ಜಿಲ್ಲಾ ಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ದೆಹಲಿಯಿಂದ ಅ ಧಿಕಾರಿಗಳ ತಂಡ ಬಂದ ಸಂದರ್ಭದಲ್ಲಿ ಇಲ್ಲಿನ ವೈದ್ಯರು ಹಾಜರಾಗದ ಕಾರಣ 19 ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಬ್ರಿಮ್ಸ್ ಅವ್ಯವಸ್ಥೆ ಕುರಿತು ಸಚಿವ ಡಿ.ಕೆ. ಶಿವಕುಮಾರ ಅವರೊಂದಿಗೆ ಮಾತನಾಡುತ್ತೇನೆ. ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಜು.30ರಂದು ಅಧಿಕಾರಿಗಳ ಸಭೆ ಕರೆದಿದ್ದು, ಈ ಕುರಿತು ಸಭೆಯಲ್ಲಿ ಚರ್ಚೆ ನಡೆಸಿ ಮಾಹಿತಿ ನೀಡಲಾಗುವುದು.
ರಾಜಶೇಖರ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜುರಾಯಿ ಸಚಿವ
ದುರ್ಯೋಧನ ಹೂಗಾರ