ನಿಯಮಿತವಾಗಿ ಪಡಿತರ ವಿತರಿಸಿ
Team Udayavani, Jan 29, 2018, 1:40 PM IST
ಬೀದರ: ನ್ಯಾಯ ಬೆಲೆ ಅಂಗಡಿಗಳ ವಿತರಕರು ಪ್ರತಿ ತಿಂಗಳು ಸಾರ್ವಜನಿಕರಿಗೆ ನಿಯಮಿತವಾಗಿ ಪಡಿತರ ವಿತರಿಸಬೇಕು ಎಂದು ಶಾಸಕರು ಹಾಗೂ ರಾಜ್ಯ ಉಗ್ರಾಣಗಳ ನಿಗಮದ ಅಧ್ಯಕ್ಷ ರಹೀಮ ಖಾನ್ ಹೇಳಿದರು.
ನಗರದ ಗಾಂಧಿ ಗಂಜ್ ರೈತ ಭವನದಲ್ಲಿ ನಡೆದ ಬೀದರ ಕ್ಷೇತ್ರ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳ ವಿತರಕರ ಸಭೆಯಲ್ಲಿ ಅವರು ಮಾತನಾಡಿದರು.
ಪಡಿತರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಮಸ್ಯೆಗಳು ಎದುರಾದಲ್ಲಿ ನ್ಯಾಯಬೆಲೆ ಅಂಗಡಿಯವರು
ನೇರವಾಗಿ ತಮನ್ನು ಅಥವಾ ಆಹಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗಬಾರದು ಎಂದ ಅವರು, ಪಡಿತರ
ವಿತರಣೆಯಲ್ಲಿ ಅಕ್ರಮ ನಡೆಯುವುದು ಕಂಡು ಬಂದಲ್ಲಿ ತಕ್ಷಣ ಅಂತಹ ವಿತರಕರ ಪರವಾನಗಿ ರದ್ದುಪಡಿಸುವಂತೆ ಆಹಾರ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.
ಪಡಿತರವನ್ನು ಆನ್ಲೈನ್ ಮೂಲಕ ವಿತರಿಸುವಂತೆ ಆದೇಶಿಸಲಾಗಿದೆ. ಕಂಪ್ಯೂಟರ್ ಮತ್ತು ಬಯೋಮೆಟ್ರಿಕ್ ಯಂತ್ರಗಳ ನಿರ್ವಹಣೆಯಲ್ಲಿ ಸಮಸ್ಯೆಗಳಿವೆ ಎಂದು ಪಡಿತರ ವಿತರಕರು ಮಾಹಿತಿ ನೀಡಿದರು. ಇದಕ್ಕೆ ಶಾಸಕರು ಪ್ರತಿಕ್ರಿಯಿಸಿ, ಪಡಿತರ ವಿತರಣೆಯಲ್ಲಿ ನಡೆಯುವ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಆನ್ಲೈನ್ ಮೂಲಕ ಪಡಿತರ ವಿತರಿಸಲು ಮುಂದಾಗಿದೆ. ಸರ್ಕಾರದ ಆದೇಶದಂತೆ ಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಡ್ಡಾಯ ಬಯೋಮೆಟ್ರಿಕ್ ಯಂತ್ರ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹೊಸ ಪಡಿತರ ಚೀಟಿ ವಿತರಣೆ ಕುರಿತು ಮಾಹಿತಿ ಕೇಳಿದಾಗ, ಆಹಾರ ಇಲಾಖೆ ಉಪನಿರ್ದೇಶಕ ಬಸವರಾಜ ಮಾತನಾಡಿ, ಈವರೆಗೆ ಸಲ್ಲಿಕೆಯಾಗಿರುವ ಎಲ್ಲಾ ಅರ್ಹರಿಗೆ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಪಡಿತರ ಚೀಟಿಗಳನ್ನು ಅಂಚೆ ಮೂಲಕ ಫಲಾನುಭವಿಗಳ ಮನೆಗೆ ತಲುಪಿಸಲಾಗುತ್ತಿದೆ ಎಂದು ಹೇಳಿದರು. ಎಪಿಎಂಸಿ ಅಧ್ಯಕ್ಷ
ಭೀಮಾಶಂಕರ ಪಾಟೀಲ, ನಗರಸಭೆ ಸದಸ್ಯ ನಾಗರಾಜ ಹಂಗರಗಿ, ನ್ಯಾಯಬೆಲೆ ಅಂಗಡಿಗಳ ವಿತರಕರು ಹಾಗೂ ಇತರರು ಇದ್ದರು.