ಸಿರಕಟನಳ್ಳಿಯಲ್ಲಿ ಭೂಕಂಪನ ಅನುಭವ: ಜನರಲ್ಲಿ ಧೈರ್ಯ ತುಂಬಿದ ಬೆಲ್ದಾಳೆ
Team Udayavani, Jan 3, 2022, 1:18 PM IST
ಬೀದರ: ಬೀದರ ದಕ್ಷಿಣ ಕ್ಷೇತ್ರದ ಸಿರಕಟನಳ್ಳಿ ಗ್ರಾಮದಲ್ಲಿ ಭೂ ಕಂಪನ ಅನುಭವವಾದ ಹಿನ್ನಲೆ ರವಿವಾರ ಕೆಎಸ್ ಐಐಡಿಸಿ ಅಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಧೈರ್ಯ ತುಂಬಿದರು.
ಗ್ರಾಮದಲ್ಲಿ ಕಳೆದೆರಡು ದಿನಗಳಿಂದ ಭೂಕಂಪನದ ಅನುಭವ ಮತ್ತು ಆತಂಕದ ಬಗ್ಗೆ ಗ್ರಾಮಸ್ಥರು ಅಳಲು ತೋಡಿಕೊಂಡರು. ಈ ವೇಳೆ ಡಾ| ಬೆಲ್ದಾಳೆ ಅವರು ರಾಜ್ಯ ಭೂ ವಿಜ್ಞಾನ ತಜ್ಞ ಅಭಿನಯ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದರು.
ರಿಕ್ಟರ್ ಮಾಪನದಲ್ಲಿ 2.7ರಷ್ಟು ತೀವ್ರತೆ ದಾಖಲಾಗಿದ್ದು, ಹೈಡ್ರೋ ಸಿಸ್ಟೊಸ್ಟಿಟಿಯಿಂದ ಭೂ ಗರ್ಭದಲ್ಲಿ ನೀರಿನಾಂಶ ಹೆಚ್ಚಾಗಿ ತೇವವಾದ ಒಳ ಭೂಪದರ ಸಡಿಲಿಸುವಿಕೆಯಿಂದ ಈ ಘಟನೆ ಸಂಭವಿಸಿದೆ. ಇದರಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ತಜ್ಞರಿಂದ ಮಾಹಿತಿ ಪಡೆದು ಗ್ರಾಮಸ್ಥರಿಗೆ ಅಭಯ ನೀಡಿದರು.
ಸ್ಥಳದಲ್ಲಿದ್ದ ತಹಶೀಲ್ದಾರ್, ಕಂದಾಯ ಅಧಿಕಾರಿಗಳೊಂದಿಗೆ ಚರ್ಚಿಸಿದರಲ್ಲದೇ ಗ್ರಾಮಗಳಲ್ಲಿ ಒಂದು ದಿನದ ವಾಸ್ತವ ಮಾಡಿ ಜನರಲ್ಲಿ ಭಯ ಅಳಿಸಬೇಕು ಎಂದು ಸೂಚಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಹಾಬಾದ್, ಘಾಳೆಪ್ಪಾ ಚಟ್ನಳ್ಳಿ, ಜಗನ್ನಾಥ ಪಾಟೀಲ ಸೇರಿದಂತೆ ಅಧಿ ಕಾರಿಗಳು ಇದ್ದರು.