ರೈತರ ಸಮಸ್ಯೆಗೆ ಸ್ಪಂದಿಸುವ ಪ್ರಯತ್ನ
Team Udayavani, Feb 24, 2019, 8:38 AM IST
ಬೀದರ: ಕೇಂದ್ರ ಸರ್ಕಾರ ದೇಶದ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು. ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ಪ್ರಾಂಗಣದಲ್ಲಿ ಕೃಷಿ ಇಲಾಖೆ ಬೀದರ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಕಿಸಾನ್ ಮೇಳ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇದೇ ತಿಂಗಳಿಂದ ಯೋಜನೆ ಅನುಷ್ಠಾನ: ಪ್ರಧಾನಿ ಮೋದಿ ರೈತರ ಅನೇಕ ಕಷ್ಟಗಳನ್ನು ತಿಳಿದುಕೊಂಡು ವಿವಿಧ ಯೋಜನೆ ಜಾರಿ ಮಾಡಿದ್ದಾರೆ. ದೇಶದಲ್ಲಿ ಇಂದು ಯಾವುದೇ ರಾಜ್ಯದಲ್ಲಿ ಗೊಬ್ಬರದ ಸಮಸ್ಯೆ ಇಲ್ಲದಂತೆ ಮಾಡಿದ್ದಾರೆ. ಬಜೆಟ್ ಮಂಡನೆ ಸಂದರ್ಭದಲ್ಲಿ ರೈತರಿಗೆ ಪ್ರತಿ ವರ್ಷಕ್ಕೆ ಆರು ಸಾವಿರ ಹಣ ಖಾತೆಗೆ ವರ್ಗಾವಣೆ ಮಾಡುವ ಯೋಜನೆ ಘೋಷಣೆ ಮಾಡಿದ್ದು, ಇದೇ ತಿಂಗಳಿಂದ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ತಿಳಿಸಿದರು.
ರೈತರಿಗೆ ನೆರವು: ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರು ಕಂಗಾಲಾಗುತ್ತಿರುವುದುನ್ನು ತಿಳಿದುಕೊಂಡ ಪ್ರಧಾನಿ ನರೇಂದ್ರ ಮೋದಿ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ಅನುಷ್ಠಾನಗೊಳಿಸಿ ದೇಶದ ಅನೇಕ ರೈತರಿಗೆ ವಿಮಾ ಯೋಜನೆ ಲಾಭ ದೊರಕಿಸಿದ್ದಾರೆ. ರೈತರ
ಬೆಳೆಗಳಿಗೆ ಉತ್ತಮ ಬೆಲೆ ನೀಡುವ ನಿಟ್ಟಿನಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ರೈತರಿಗೆ ನೆರವು ನೀಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ವಿವಿಧ ಯೋಜನೆಗಳ ಕುರಿತು ವಿವರಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ರಾಜಕುಮಾರಸಿಂಗ್ ಹಜಾರೆ, ಡಾ| ಕೆ.ಎನ್. ಕಟ್ಟಿಮನಿ, ಡಾ| ಪ್ರಶಾಂತ ಅರ್ಮೊರಿಕರ್, ಡಾ| ಬಿ.ಎಂ. ಚಿತ್ತಾಪುರೆ, ರವಿ ದೇಶಮುಖ, ಡಾ| ಮಲ್ಲಿಕಾರ್ಜುನ ಬಾವಗೆ, ವಿದ್ಯಾನಂದ. ಸಿ ಸೇರಿದಂತೆ ಇತರೆ ಅಧಿಕಾರಿಗಳು, ರೈತರು ಭಾಗವಹಿಸಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಹಿಂದೆಂದಿಗಿಂತ ಹೆಚ್ಚಿನ ಅಭಿವೃದ್ಧಿ ಮಾಡುತ್ತಿದೆ. ಅಧಿಕಾರವಧಿಯಲ್ಲಿ ರೈತರು ಸೇರಿದಂತೆ, ಬಡವರು, ನಿರ್ಗತಿಕರು, ಅಂಗವಿಕಲರು ಹೀಗೆ ಸರ್ವರ ಏಳ್ಗೆ ಬಯಸಲು ಹಲವಾರು ಅಭಿವೃದ್ಧಿ ಯೋಜನೆ ಕೈಗೊಳ್ಳುತ್ತಿದೆ. ಈ ಮೂಲಕ ದೇಶದ ಜನಮಾನಸದಲ್ಲಿ ಕೇಂದ್ರ ಸರ್ಕಾರ ಮೆಚ್ಚುಗೆಯ ಅಚ್ಚೊತ್ತಿದೆ.
ಭಗವಂತ ಖೂಬಾ, ಸಂಸದ