ಮಾಸ್ಕ್ ಧರಿಸದವರಿಗೆ ದಂಡ
Team Udayavani, Nov 10, 2020, 5:45 PM IST
ಬೀದರ: ಹೆಮ್ಮಾರಿ ಕೋವಿಡ್ ಸೋಂಕು ಹಿನ್ನೆಲೆ ಸೋಮವಾರ ನಗರದಲ್ಲಿ ಮಾಸ್ಕ ಧರಿಸದೇ ಇರುವವರಿಗೆ ಜಿಲ್ಲಾಡಳಿತದಿಂದ ತಿಳಿವಳಿಕೆ ಮೂಡಿಸುವ ಮತ್ತು ದಂಡವಿಧಿಸುವ ಕಾರ್ಯಾಚರಣೆ ನಡೆಯಿತು. ಸ್ಥಳದಲ್ಲೇ ನಿರ್ಲಕ್ಷಿತ ಜನರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಲಾಯಿತು.
ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹಾಗೂ ಎಸ್ಪಿ ನಾಗೇಶ ಡಿ.ಎಲ್ ನೇತೃತ್ವದಲ್ಲಿ ನಗರಸಭೆ, ಪೊಲೀಸ್ ಅಧಿಕಾರಿಗಳು ನಗರದ ಹಲವೆಡೆ ದಿಢೀರ್ ಕಾರ್ಯಾಚರಣೆ ನಡೆಸಿ ಮಾಸ್ಕ ಇಲ್ಲದವರಿಗೆ ಮಾಸ್ಕ್ ನೀಡಿ, ಮಾಸ್ಕ್ ಧರಿಸದೇ ಸುತ್ತುತ್ತಿರುವವರಿಗೆ ದಂಡವಿಧಿಸಿ ಎಚ್ಚರಿಕೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಮುಂದಿನ ರಸ್ತೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ನಿಂತು ಕಾರ್ಯಾಚರಣೆಯಲ್ಲಿ ಭಾಗಿಯಾದರು. ಮಾಸ್ಕ ಧರಿಸದೇ ಬೈಕ್ ಹಾಗೂ ಆಟೋ ಏರಿ ಬರುತ್ತಿದ್ದವರನ್ನುನೋಡುತ್ತಿದ್ದ ಡಿಸಿ ಹಾಗೂ ಎಸ್ಪಿ ಅವರು, ತಾವೇ ಕೈ ತೋರಿಸಿ ನಿಲ್ಲಿಸಿ ದಂಡ ಹಾಕಲು ಸೂಚನೆ ನೀಡಿದರು.
ನಂತರ ಜಿಲ್ಲಾ ನ್ಯಾಯಾಲಯ ಮತ್ತು ತಹಶೀಲ್ ಕಚೇರಿಯಮುಂದಿನ ರಸ್ತೆಯಲ್ಲಿ ಸಂಚರಿಸಿ ಕಾರ್ಯಾಚರಣೆ ನಡೆಸಿದರು. ಮಾಸ್ಕ ಇಲ್ಲದೇ ಅಡ್ಡಾಡುತ್ತಿರುವುದಕ್ಕೆ ಕ್ಷಮಿಸಿ ಸರ್. ನಮ್ಮ ಬಳಿ ಹಣವಿಲ್ಲ. ನಮಗೆ ದಂಡ ವಿಧಿಸಬೇಡಿ, ನಾವು ಇನ್ಮುಂದೆ ತಪ್ಪದೇ ಮಾಸ್ಕ ಧರಿಸುತ್ತೇವೆ ಎಂದು ಕೆಲವರು ಡಿಸಿ ಮತ್ತು ಎಸ್ಪಿ ಅವರಿಗೆ ಮಾತು ಕೊಟ್ಟು, ಮಾಸ್ಕ್ ಧರಿಸಿ ಮುಂದೆ ಹೋಗುತ್ತಿರುವುದು ಸಾಮಾನ್ಯವಾಗಿತ್ತು. ಬಸ್ ಏರಿ ತಿಳಿ ಹೇಳಿದರು.
ಗುಂಪಾ, ಮೈಲೂರ ಮತ್ತು ಮನ್ನಾ ಹಳ್ಳಿಯಿಂದ ಜನರನ್ನು ಹೊತ್ತುಕೊಂಡು ಬಂದ ಮೂರ್ನಾಲ್ಕು ಬಸ್ಗಳನ್ನು ನಿಲ್ಲಿಸಿ, ಬಸ್ ಏರಿದ ಡಿಸಿ ಮತ್ತು ಎಸ್ಪಿ ಅವರು ಮಾಸ್ಕ್ ಇಲ್ಲದವರಿಗೆ ಎಚ್ಚರಿಕೆ ನೀಡಿ, ಮಾಸ್ಕ್ ವಿತರಿಸಿ ಧರಿಸಲು ತಿಳಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಆರೋಗ್ಯ ಕಾಪಾಡಿಕೊಳ್ಳಲುಸಾರ್ವಜನಿಕರು ಒತ್ತು ನೀಡಬೇಕು. ಹೊರಗಡೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು.
ಎಸ್ಪಿ ನಾಗೇಶ ಡಿ.ಎಲ್. ಮಾತನಾಡಿ, ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣದಲ್ಲಿದೆ. ಈ ವೈರಸ್ ಲಸಿಕೆ ಸಿಗುವವರೆಗೆ ಜನ ಜಾಗೃತಿಯಿಂದರಬೇಕಿದೆ. ಕೋವಿಡ್ನ್ನು ನಿರ್ಮೂಲನೆ ಮಾಡುವವರೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಆದ್ದರಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಕೋರಿದರು.
ಕೋವಿಡ್-19 ಹಿನ್ನೆಲೆಯಲ್ಲಿ ನಗರಸಭೆಯಿಂದ ಕೆಲವು ಕಾರ್ಯಾಚರಣೆಗಳನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಆರಂಭಿಸುತ್ತಿದ್ದು, ನಿಷೇಧಿತ ಪ್ಲಾಸ್ಟಿಕ್ ಬಳಕೆ ಕಂಡುಬಂದರೆ ಅಂತವರ ಮೇಲೆ ದಾಳಿ ನಡೆಸಿ ಕ್ರಮ ವಹಿಸಲಾಗುವುದು ಎಂದು ಇದೆ ವೇಳೆ ನಗರಸಭೆ ಪೌರಾಯುಕ್ತ ಅಂಗಡಿ ಎಚ್ಚರಿಕೆ ನೀಡಿದರು. ನಗರಸಭೆಯ ಅಭಿಯಂತರರು, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ