ಐವರ ಅವಿರೋಧ ಆಯ್ಕೆ ಐತಿಹಾಸಿಕ ತೀರ್ಪು: ಪಾಟೀಲ
Team Udayavani, May 21, 2019, 7:59 AM IST
ಹುಮನಾಬಾದ: ಅವಿರೋಧ ಆಯ್ಕೆಗೊಂಡ ಪುರಸಭೆ ಕಾಂಗ್ರೆಸ್ ಸದಸ್ಯರನ್ನು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ ಸನ್ಮಾನಿಸಿದರು.
ಹುಮನಾಬಾದ: ಪಟ್ಟಣದ ಜನತೆಗೆ ಕಾಂಗ್ರೆಸ್ ಪಕ್ಷದ ಮೇಲೆ ಇರುವ ವಿಶ್ವಾಸಕ್ಕೆ ಪುರಸಭೆಗೆ ಐವರು ಅಭ್ಯರ್ಥಿಗಳನ್ನು ಅವಿರೋಧ ಆಯ್ಕೆ ಮಾಡಿದ್ದೆ ಸಾಕ್ಷಿ ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಅವಿರೋಧ ಆಯ್ಕೆ ಬಳಿಕ ತಮ್ಮ ಭೇಟಿಗೆ ಬಂದ ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
1995ರಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಅವಿರೋಧ ಆಯ್ಕೆಗೊಂಡಿದ್ದರು. ಆದರೆ ಈ ಬಾರಿ ನಾನು ಸಚಿವನಾದ ಬಳಿಕ ಐವರು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ನಿವಾಸಿಗಳು ಐತಿಹಾಸಿಕ ತೀರ್ಪು ನೀಡಿದ್ದಾರೆ. ವಿಶ್ವಾಸ ಇಟ್ಟು ಆಯ್ಕೆ ಮಾಡಿದ ಜನರ ಋಣ ತೀರಿಸಲು ಸದಸ್ಯರು ಹಗಲಿರುಳು ಶ್ರಮಿಸಬೇಕು ಎಂದರು.
ಅನ್ಯರಿಗೆ ಅಭ್ಯರ್ಥಿಗಳು ಸಿಕ್ಕಿಲ್ಲ: ಅನ್ಯ ಪಕ್ಷಗಳಿಗೆ ನಗರದ ಎಷ್ಟೋ ವಾರ್ಡ್ಗಳಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಸಿಕ್ಕಿಲ್ಲ. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಒಂದೊಂದು ವಾರ್ಡ್ನಿಂದ 5ರಿಂದ 10ಅರ್ಜಿ ಬಂದಿದ್ದವು. ವಾರ್ಡ್ 1 ಅರ್ಜಿ 10 ಆದರೆ ದೇವರಿಂದಲೂ ತೀರ್ಪು ಕೊಡಿಸುವುದು ಕಷ್ಟಸಾಧ್ಯ. ಇದ್ದದ್ದರಲ್ಲೇ ಎಲ್ಲರನ್ನೂ ಸಮಾಧಾನ ಮಾಡಲು ಶಕ್ತಿಮೀರಿ ಯತ್ನಿಸಲಾಗಿದೆ. ಟಿಕೆಟ್ ಆಕಾಂಕ್ಷಿಗಳೆಲ್ಲರೂ ಪಕ್ಷಕ್ಕಾಗಿ ಅವಿರತ ಶ್ರಮಿಸಿದ್ದಾರೆ. ಭವಿಷ್ಯದಲ್ಲಿ ಸೂಕ್ತ ಸ್ಥಾನಮಾನ ನೀಡುವ ಮೂಲಕ ಯಾರೊಬ್ಬರಿಗೂ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ನೂತನ ಸದಸ್ಯರಾದ ಅಪ್ಸರಮಿಯ್ಯ, ಪಾರ್ವತಿಬಾಯಿ ಶೇರಿಕಾರ, ಕಸ್ತೂರಿಬಾಯಿ ನರಸಿಂಗ್ ಪರ್ಸಾನೋರ್, ಸುನೀಲ(ಕಾಳಪ್ಪ) ಪಾಟೀಲ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು.