ಮಾಸ್ಕ್ ಧರಿಸಿ ಕರ್ನಾಟಕ ಉಳಿಸಿ ಅಭಿಯಾನ: ಬಸನಗೌಡ
Team Udayavani, May 4, 2020, 12:40 PM IST
ಗೊರೇಬಾಳ: ಮಾಸ್ಕ್ ತಯಾರಿಕೆಗೆ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಚಾಲನೆ ನೀಡಿದರು.
ಗೊರೇಬಾಳ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯಿಂದ ಮಾಸ್ಕ್ ಧರಿಸಿ ಕರ್ನಾಟಕ ಉಳಿಸಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. 20 ಲಕ್ಷ ಮಾಸ್ಕ್ ತಯಾರಿಸಿ ರಾಜ್ಯದ ಜನರಿಗೆ ಹಂಚುವ ಕೆಲಸ ಮಾಡಲಾಗುವುದು ಎಂದು ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು.
ಯುವ ಕಾಂಗ್ರೆಸ್ನಿಂದ ಹಮ್ಮಿಕೊಂಡಿರುವ 20 ಲಕ್ಷ ಮಾಸ್ಕ್ ತಯಾರಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತ ದೇಶ ಲಾಕ್ಡೌನ್ ಆದಾಗಿನಿಂದ ಸಾಕಷ್ಟು ಬಡ ಮತ್ತು ಕೂಲಿ ಕಾರ್ಮಿಕರು, ಯುವಕರು, ಟೇಲರ್ಗಳು, ಮಹಿಳೆಯರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ಆ ಕಾರಣದಿಂದಾಗಿ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವುಕುಮಾರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಚರ್ಚಿಸಿ ಯುವ ಕಾಂಗ್ರೆಸ್ನಿಂದ 20 ಲಕ್ಷ ಮಾಸ್ಕ್ ವಿತರಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಸಮರ್ಪಕ ಮಾಸ್ಕ್ ವಿತರಣೆ ರಾಜ್ಯ ಸರ್ಕಾರ ವಿಫಲವಾಗಿದೆ. ರಾಜ್ಯದ ವಿವಿಧ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹಲವು ಕಡೆಗಳಲ್ಲಿ ಮಾಸ್ಕ್ ಕೊರತೆ ಇದೆ. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್ ನಿಂದ ಮಾಸ್ಕ್ ತಯಾರಿಸಿ ವಿತರಿಸುವ ಕಾರ್ಯ ಮಾಡಲಾಗುತ್ತಿದೆ. ಇದರಲ್ಲಿ ಸ್ತ್ರೀಶಕ್ತಿ ಗುಂಪುಗಳು ಸೇರಿದಂತೆ ಅನೇಕರಿಗೆ ಉದ್ಯೋಗವಕಾಶ ಕಲ್ಪಿಸಲಾಗುತ್ತಿದೆ.
ಕೋವಿಡ್ ವೈರಸ್ನಿಂದ ತಪ್ಪಿಸಿಕೊಳ್ಳಲು ಪ್ರತಿಯೊಬ್ಬರು ಮನೆಯಲ್ಲೇ ಇರಬೇಕು. ಮಾಸ್ಕ್ ಧರಿಸಿಕೊಂಡು ಆರೋಗ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಹೇಳಿದರು. ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಖಾಜಾಹುಸೇನ್ ರೌಡಕುಂದಾ, ಮುಖಂಡರಾದ ವೆಂಕಟೇಶ ನಾಯಕ, ನಾಗರಾಜ ಕವಿತಾಳ, ವೀರಬಾಬು, ವಿರುಪಣ್ಣ ದೇವರಗುಡಿ ಇದ್ದರು.