ಅವಸರದಲ್ಲಿ ವಾಹನ ಚಲಾಯಿಸಿದರೆ ಅನಾಹುತ ಖಚಿತ
Team Udayavani, Apr 30, 2018, 3:59 PM IST
ಬೀದರ: ವಾಹನ ಚಾಲನೆ ಮಾಡುವಾಗ ಅವಸರ ಮಾಡಿದಲ್ಲಿ ಅನಾಹುತ ಎದುರಿಸಬೇಕಾಗುತ್ತದೆ ಎಂದು ಡಿವೈಎಸ್ಪಿ ಎಸ್.ವೈ. ಹುಣಸಿಕಟ್ಟಿ ಹೇಳಿದರು. ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಂಚಾರ ಪೊಲೀಸ್ ಠಾಣೆ ಹಾಗೂ ಭಾಗ್ಯವಂತಿ ಮೋಟಾರ್ ಡ್ರೈವಿಂಗ್ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ನಡೆದ “ರಸ್ತೆ ಸುರಕ್ಷತೆ ಜೀವ ರಕ್ಷೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಚಾಲಕನ ಜೀವನ ಮುಳ್ಳಿನ ಹಾಗೆ ಇರತ್ತದೆ. ಹಾಗಾಗಿ ರಸ್ತೆಯ ಮೇಲೆ ವಾಹನವನ್ನು ಪ್ರಜ್ಞೆಯಿಂದ ಚಲಾಯಿಸಬೇಕು.
ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮನೆಯಿಂದ ಹೊರಡುವಾಗ ಹತ್ತು ನಿಮಿಷ ಮುಂಚಿತವಾಗಿ ಬಿಡಬೇಕು. ಆಟೋದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ನಿಗದಿತ ಮಿತಿ ದಾಟದಂತೆ ಎಚ್ಚರ ವಹಿಸಬೇಕು. ರಸ್ತೆ ಮೇಲೆ ಹೋಗುವಾಗ ಅಥವಾ ದಾಟುವ ಸಂದರ್ಭದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಶಿವನಾಂದ ಮಗದುಮ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಠ್ಯ ಚಟುವಟಿಕೆಯೊಂದಿಗೆ ರಸ್ತೆಯ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳಬೇಕು. ವಾಹನ ಚಾಲನೆ ಮಾಡುವ ಮುನ್ನ ತಪ್ಪದೇ ಚಾಲನಾ ಪರವಾನಗಿ ಪತ್ರ ಪಡೆಯಬೇಕು. ವಾಹನಗಳನ್ನು ಸೇವೆಯ ಹೊರತು ಶೋಕಿಗಾಗಿ ಬಳಸಬಾರದು ಎಂದು ಸಲಹೆ ನೀಡಿದ ಅವರು, ರಸ್ತೆ ನಿಯಮಗಳನ್ನು ಪಾಲಿಸುವುದರಿಂದ ರಸ್ತೆ ಅಪಘಾತಗಳನ್ನು ತಗ್ಗಿಸಬಹುದು ಎಂದು ಹೇಳಿದರು.
ಪೊಲೀಸ್ ನಿರೀಕ್ಷಕ ಶ್ರೀಕಾಂತ ಅಲ್ಲಾಪುರೆ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ನಿಂದ ಕೂದಲು ಹಾಳಾಗುತ್ತವೆ ಎನ್ನುವ ತಪ್ಪು ಮನೋಭಾವದಿಂದ ಹೊರಬರಬೇಕು ಎಂದು ಹೇಳಿದರು.
ಕಾಲೇಜು ಪ್ರಾಶುಂಪಾಲ ಡಾ| ಎಂ.ಡಿ ಫಾರೂಕ್ ಅಧ್ಯಕ್ಷತೆ ವಹಿಸಿದ್ದರು. ಡ್ರೈವಿಂಗ್ ಶಾಲೆಯ ಪ್ರಾಂಶುಪಾಲ ಶಿವರಾಜ ಜಮಾದರ್ ಖಾಜಾಪುರ, ಡಾ| ತಿಪಣ್ಣಾ, ಶಶಿಧರ ಚವ್ಹಾಣ್, ರವಿಕಾಂತ ಕಾಮಶೆಟಿ, ಜನಾರ್ಧನ್ ಮೋವಿನ್, ಮಹಾದೇವ ಮಾಶೆಟ್ಟಿ, ಶಿವರಾಜ ಏಕಲಾರ್, ಎನ್ಎಸ್ಎಸ್ ಅಧಿಕಾರಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಇದ್ದರು. ದಮ್ಮದೀಪ ಅವರು ಕಾರ್ಯಕ್ರಮ ನಿರೂಪಿಸಿದರು.
ರಸ್ತೆ ಸುರಕ್ಷತೆ ಜಾಗೃತಿ ಜಾಥಾ: 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಗರದಲ್ಲಿ ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜಾಗೃತಿ ಜಾಥಾ ನಡೆಯಿತು. ಬಸವೇಶ್ವರ ವೃತ್ತದಲ್ಲಿ ಡಿವೈಎಸ್ಪಿ ಎಸ್.ವೈ.ಹುಣಸೆಕಟ್ಟಿ ಅವರು ಪುಷ್ಪಾರ್ಚನೆ ಮೂಲಕ ಜಾಥಾಗೆ ಚಾಲನೆ ನೀಡಿದರು. ಮೆರವಣಿಗೆಯು ಮಹಾವೀರ ವೃತ್ತ, ಭಗತ್ಸಿಂಗ್ ವೃತ್ತ, ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ತೆರಳಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಧೂಮಪಾನ ಮಾಡಿ ವಾಹನ ಚಲಾಯಿಸಬೇಡಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ನಾಲ್ಕು ಚಕ್ರದ ವಾಹನ ಚಾಲಕರು ಕಡ್ಡಾಯ ಸೀಟ್ ಬೆಲ್ಟ್ ಧರಿಸಬೇಕು, ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು, ದ್ವಿ ಚಕ್ರ ವಾಹನ, ಕಾರು, ಜೀಪು ಮತ್ತಿತರ ವಾಹನಗಳಿಗೆ ಇರುವ ಹಿನ್ನೋಟ ಕನ್ನಡಿ ಬಳಕೆ ಮಾಡಬೇಕು. ಇದು ಚಾಲಕನ ಮೂರನೇ ಕಣ್ಣಿದ್ದಂತೆ ಎನ್ನುವ ಕುರಿತು ಜನರಲ್ಲಿ ಅರಿವು ಮೂಡಿಸಿದರು.
ಸಿಪಿಐ ಶ್ರೀಕಾಂತ ಅಲ್ಲಾಪುರ, ಪಿಎಸ್ಐ ವಿಜಯಕುಮಾರ, ಶಿವರಾಜ ಜಮಾದಾರ, ಮನೋಹರ್, ಪೀರಪ್ಪ, ಜನಾರ್ಧನ್ ಬೋವಿನ್, ಶಿವರಾಜ ಏಕಲಾರ್, ರವಿಕುಮಾರ ಕಾಮಶೆಟ್ಟಿ ಪ್ರಕಾಶ ಮಠಪತಿ ಹಾಗೂ ವಿದ್ಯಾರ್ಥಿಗಳು ಇದ್ದರು.