ಶಾಲಾ-ಕಾಲೇಜಿನಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ
Team Udayavani, Feb 6, 2022, 11:57 AM IST
ಬೀದರ: ಬದಲಾದ ಸಂದರ್ಭದಲ್ಲಿ ಕಂಪ್ಯೂಟರ್ ಶಿಕ್ಷಣದ ಮಹತ್ವ ಹೆಚ್ಚಿದೆ. ಎಲ್ಲ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆಯಾಗುತ್ತಿದೆ. ಕಂಪ್ಯೂಟರ್ ಜ್ಞಾನ ಇಲ್ಲದಿದ್ದಲ್ಲಿ ಅನಕ್ಷರಸ್ಥರೆಂದು ಪರಿಗಣಿಸುವ ಕಾಲ ಬರಬಹುದು ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ಪನ್ನಾಲಾಲ್ ಹೀರಾಲಾಲ್ ಕಾಲೇಜು ಮತ್ತು ಪ್ರೌಢಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದ ಅವರು, ಕಂಪ್ಯೂಟರ್ ಲ್ಯಾಬ್ ಆರಂಭಿಸಿರುವುದು ಹರ್ಷದ ಸಂಗತಿ. ಇದರಿಂದ ಮಕ್ಕಳ ಕಲಿಕೆಯ ವೇಗ ಹೆಚ್ಚಲಿದೆ. ವಿದ್ಯಾರ್ಥಿಗಳು ಕಂಪ್ಯೂಟರ್ ಸೌಲಭ್ಯ ಬಳಸಿಕೊಂಡು, ಹೊಸ-ಹೊಸ ಸವಾಲು, ಸ್ಪರ್ಧೆ ಎದುರಿಸಲು ಸಜ್ಜಾಗಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಅಧ್ಯಕ್ಷ ರಾಜಕುಮಾರ ಅಗರವಾಲ್ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಂಪ್ಯೂಟರ್ ಲ್ಯಾಬ್ ಆರಂಭಿಸ ಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯ ಬಳಸಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ನುರಿತ, ಅನುಭವಿ ಅಧ್ಯಾಪಕರಿದ್ದು, ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಉಜ್ವಲಗೊಳಿಸಲು ಶ್ರಮಿಸಲಾಗುತ್ತಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಬ್ರಿಜ್ ಕಿಶೋರ ಮಲಾನಿ, ಪ್ರಮುಖರಾದ ನಂದಕಿಶೋರ ವರ್ಮಾ, ಧನಶಾಂ ಗೊಯಲ್, ರಾಜೇಂದ್ರಸಿಂಗ್ ಪವರ್, ಸತ್ಯನಾರಾಯಣ ಬಲ್ಗವ್, ಹನುಮಾನ್, ಪ್ರಾಚಾರ್ಯ ಬಸವರಾಜ ಬಳ್ಳೂರೆ, ಕಲ್ಲಪ್ಪ ದಾನ ಇನ್ನಿತರರಿದ್ದರು.