ದೈಹಿಕ ಶಿಕ್ಷಣ ಶಿಕ್ಷಕರಿಂದ ಮಕ್ಕಳಲ್ಲಿ ಮೌಲ್ಯ ವೃದ್ಧಿ
Team Udayavani, Jul 7, 2017, 9:36 AM IST
ಭಾಲ್ಕಿ: ಶಿಕ್ಷಣದ ಸರ್ವತೋಮುಖ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿದೆ ಎಂದು ತಾಪಂ ಅಧ್ಯಕ್ಷೆ
ರೇಖಾ ವಿಲಾಸ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದೈಹಿಕ ಶಿಕ್ಷಕರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು,
ಶಾಲೆಯಲ್ಲಿನ ವಿದ್ಯಾರ್ಥಿಗಳ ಶಿಸ್ತು ಮತ್ತು ಮೌಲ್ಯಗಳ ಬೆಳವಣಿಗೆಗೆ ಶ್ರಮಿಸುವವರೆ ದೈಹಿಕ ಶಿಕ್ಷಣ ಶಿಕ್ಷಕರು. ಹೀಗಾಗಿ ಶೈಕ್ಷಣಿಕ
ಸರ್ವತೋಮುಖ ಬೆಳವಣಿಗೆಯಲ್ಲಿ ದೈಹಿಕ ಶಿಕ್ಷಕರ ಪಾತ್ರ ಬಹುಮುಖ್ಯವಾದದ್ದು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ನಾಗರಾಜ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಇಲಾಖೆ ವತಿಯಿಂದ ಆಯೋಜಿಸಲಾಗುವ
ಕ್ರೀಡಾಕೂಟಗಳನ್ನು, ಶಿಸ್ತಿನಿಂದ ಅಚ್ಚುಕಟ್ಟಾಗಿ ಆಯೋಜಿಸಬೇಕೆಂದು ದೈಹಿಕ ಶಿಕ್ಷಣ ಶಿಕ್ಷಕರಿಗೆ ಸಲಹೆ ನೀಡಿದರು. ಅಲ್ಲದೇ ಇಲಾಖೆಯಿಂದ ಆಯೋಜಿಸಲಾಗುವ ಎಲ್ಲಾ ಕಾರ್ಯಕ್ರಮಗಳಿಗೆ ಸಹಕರಿಸುವ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯಚಟುವಟಿಕೆ ಶ್ಲಾಘನೀಯ ಎಂದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಕಾಶಿನಾಥ ಪಾಟೀಲರು ಇಲಾಖೆಯ ಹೊಸ ಸುತ್ತೋಲೆಗಳ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಿದರು. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಣಮಂತ ಕಾರಾಮುಂಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕು ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ಚನ್ನವೀರ ಚಕ್ರಸಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇವೇಳೆ ಮಹಾತ್ಮಗಾಂಧಿ ಪ್ರೌಢಶಾಲೆ ಕಲವಾಡಿಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಧನರಾಜ ಕುಂಬಾರ ಹಾಗೂ ಸಿದ್ಧಾರೂಢ
ಪ್ರೌಢಶಾಲೆ ಚಳಕಾಪುರದ ದೈಹಿಕ ಶಿಕ್ಷಣ ಶಿಕ್ಷಕ ಎಂ.ಎಸ್. ಮಠಪತಿ ಅವರನ್ನು ಇಲಾಖೆ ಹಾಗೂ ಸಂಘದಿಂದ ಸನ್ಮಾನಿಸಿ ಬೀಳ್ಕೊಡಲಾಯಿತು. ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಾದ ಕ್ರಾಂತಿ ವೀರಕಪಾಳೆ, ಪ್ರತೀಕ್ಷಾ ಶಿವಕಾಂತ ಬಾಪುರ್ಸೆ, ಅಶೋಕ ಸಿಂಧೆ ಅವರನ್ನು ಸನ್ಮಾನಿಸಲಾಯಿತು.
ಅಲ್ಲದೇ ದೈಹಿಕ ಶಿಕ್ಷಕರ ಜಿಲ್ಲಾ ಸಂಘಕ್ಕೆ ತಾಲೂಕಿನಿಂದ ದೀಪಕ ಸೂರ್ಯವಂಶಿ, ಸಂಜೀವ, ನರಸಿಂಗ ಇಂಗಳೆ, ಅಶೋಕ ಸಿಂಧೆ,
ಸುಜಾತಾ ಪಾಟೀಲ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಬಸವರಾಜ ಮಠಪತಿ, ಪ್ರೌಢಶಾಲಾ ಮುಖ್ಯಗುರು ಶಿವಕುಮಾರ ಮೆಹತ್ರೆ, ಮಾರುತಿ ಸಗರ, ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು. ಚನ್ನವೀರ ಚಕ್ರಸಾಲಿ ಸ್ವಾಗತಿಸಿದರು. ಸೋಮನಾಥ ಹೊಸಾಳೆ ನಿರೂಪಿಸಿದರು. ಗೀತಾಮಣಿ ವಂದಿಸಿದರು.