ಗ್ರಾಮಾಭಿವೃದ್ಧಿ ಯೋಜನೆಗೆ ಎನ್ಟಿಪಿಸಿಯಿಂದ 30 ಕೋಟಿ
Team Udayavani, Feb 5, 2020, 5:01 PM IST
ಕೊಲ್ಹಾರ: ಎನ್ಟಿಪಿಸಿ ಉಷ್ಣ ವಿದ್ಯುತ್ ಉತ್ಪಾದನೆಯ ಲಾಭಾಂಶದಲ್ಲಿ 5 ಬಾಧಿತ ಗ್ರಾಮಾಭಿವೃದ್ಧಿ ಯೋಜನೆಗೆ ಪ್ರಸಕ್ತ ವರ್ಷ ಸಿಎಸ್ಆರ್ ಯೋಜನೆಯಡಿ 30 ಕೋಟಿ ರೂ. ಸಿಗಲಿದ್ದು ಇದರಲ್ಲಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಹೇಳಿದರು.
ತಾಲೂಕಿನ ಕೂಡಗಿ ಎನ್ಟಿಪಿಸಿಯ ಎಚ್ಆರ್ ಸಭಾಂಗಣದಲ್ಲಿ ನಡೆದ ಸ್ಥಾವರದ ಐದು ಬಾಧಿತ ಗ್ರಾಮಾಭಿವೃದ್ಧಿ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಡಿಎಸಿ ಸದಸ್ಯ ಮುರುಗೇಶ ಹೆಬ್ಟಾಳ ಮಾತನಾಡಿ, ಗ್ರಾಮಾಭಿವೃದ್ಧಿಗೆ ಎನ್ಟಿಪಿಸಿ ನೀಡುವ ಹಣ ಸಾಕಾಗದು. ಇದನ್ನು ಹೆಚ್ಚಿಸಬೇಕೆಂದು ಹೇಳಿದಾಗ ಪ್ರತಿಕ್ರಿಯಿಸಿ ಜಿಲ್ಲಾಧಿಕಾರಿಗಳು, ವಿದ್ಯುತ್ ಉತ್ಪಾದನೆ ಲಾಭಾಂಶದಲ್ಲಿ ಎನ್ಟಿಪಿಸಿ ಶೇ. 2ರಷ್ಟನ್ನು ಮಾತ್ರ ಗ್ರಾಮಾಭಿವೃದ್ಧಿಗೆ ವಿನಿಯೋಗ ಮಾಡುತ್ತದೆ. ಪ್ರಸ್ತುತ ವರ್ಷ ಅವರು 15 ಕೋಟಿ ರೂ. ಮಾತ್ರ
ನೀಡುವುದಾಗಿ ಹೇಳಿದ್ದರು. ಅದನ್ನು 30 ಕೋಟಿ ರೂ.ಗೆ ಹೆಚ್ಚಿಸಬೇಕೆಂದು ಒತ್ತಾಯಿಸಲಾಗಿದೆ ಎಂದರು.
ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಕಳೆದ ಆರ್ ಆ್ಯಂಡ್ ಆರ್ ಯೋಜನೆಯಲ್ಲಿ ಉಳಿದ ಹಣವನ್ನು ಪ್ರಸಕ್ತ ವರ್ಷ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಾತ್ರ ನೀಡಬೇಕು. ಸ್ಥಾವರ ನಿರ್ಮಾಣಕ್ಕಾಗಿ ಸಾವಿರಾರು ಎಕರೆ ಭೂಮಿ ಕಳೆದುಕೊಂಡ ಮತ್ತು ಬಾಧಿತ ಗ್ರಾಮಸ್ಥರಿಗೆ ಎನ್ಟಿಪಿಸಿಯಲ್ಲಿ ಶೇ. 50 ಉದ್ಯೋಗಾವಕಾಶದ ಮೀಸಲಾತಿ ನೀಡಬೇಕು. ವೈಯಕ್ತಿಕ ಶೌಚಗೃಹ ನಿರ್ಮಾಣಕ್ಕಾಗಿ ಎನ್ಟಿಪಿಸಿ ಘೋಷಿಸಿದ್ದ ಪ್ರತಿ ಫಲಾನುಭವಿಗೆ 25 ಸಾವಿರ ರೂ., ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಸ್ಥಾವರದ ಅಧಿಕಾರಿಗಳಿಗೆ ಸೂಚಿಸಿದರು.
ಬೇಡಿಕೆಗಳ ಮಹಾಪೂರ: ಕೂಡಗಿ, ಮಸೂತಿ, ತೆಲಗಿ, ಗೊಳಸಂಗಿ ಮತ್ತು ಮುತ್ತಗಿ ಐದು ಬಾಧಿ ತ ಗ್ರಾಮಸ್ಥರಿಂದ ವಿಡಿಎಸಿ ಸಭೆಯಲ್ಲಿ ಬೇಡಿಕೆಯ ಮಹಾಪೂರವೇ ಹರಿದು ಬಂದಿತು. ಸ್ಥಾವರದ ಕೆರೆ ನಿರ್ಮಾಣದಿಂದ ಅಕ್ಕ ಪಕ್ಕದ ರೈತರ ಜಮೀನಿಗೆ ಸವಳು ನೀರು ಹೊಕ್ಕಿದ್ದು ಇದುವರೆಗೂ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ. ಭೂಮಿ ಕಳೆದುಕೊಂಡ ರೈತರಿಗೆ 5 ಹಂತದಲ್ಲಿ ವಿತರಣೆ ಮಾಡಲಾದ ಪರಿಹಾರ ಹಣದಲ್ಲಿ ಆರಂಭಿಕ 2 ಹಂತದ ರೈತರಿಗೆ ಕಡಿಮೆ ಮೊತ್ತ ಲಭಿಸಿದೆ. ಅದನ್ನು ಸರಿಪಡಿಸಬೇಕು. ತ್ಯಾಜ್ಯ ವಸ್ತು ಸಂಗ್ರಹಣೆಗೆ ದಾಸ್ತಾನು ಘಟಕ ನಿರ್ಮಿಸಬೇಕು. ಹೆಚ್ಚಿನ ಅನುದಾನ ಸಿಗದ ಮುತ್ತಗಿ ಗ್ರಾಮಕ್ಕೆ ಸಿಎಸ್ ಆರ್ ಯೋಜನೆಯಡಿ ಹೆಚ್ಚಿನ ಹಣ ನೀಡಬೇಕೆಂದು ವಿಡಿಎಸಿ ಸದಸ್ಯರಾದ ಪ್ರೇಮಕುಮಾರ ಮ್ಯಾಗೇರಿ, ಸಿ.ಎಂ. ಹಂಡಗಿ, ಈಶ್ವರ ಜಾಧವ, ಎಸ್.ಎಸ್. ಗರಸಂಗಿ, ಸಿ.ಪಿ. ಪಾಟೀಲ ಮತ್ತಿತರರು ಆಗ್ರಹಿಸಿದರು.
ಎನ್ಟಿಪಿಸಿ ಕಾರ್ಯಕಾರಿ ನಿರ್ದೇಶಕ ರಾಜ್ಕುಮಾರ, ಬಸವನಬಾಗೇವಾಡಿ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ, ಎನ್ಟಿಪಿಸಿ ಎಚ್ಆರ್ ವಿಭಾಗದ ವಿ.ಜಯನಾರಾಯಣನ್, ಆರ್ ಆ್ಯಂಡ್ ಆರ್ ಸೀನಿಯರ್ ಮ್ಯಾನೇಜರ್ ಎಂ.ಎಚ್. ಮಂಜುನಾಥ, ಎಸ್.ಗೋಪಿ, ತಾಪಂ ಇಒ ಭಾರತಿ ಚಲುವಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ, 5 ಗ್ರಾಮದ ತಾಪಂ ಸದಸ್ಯರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಪಿಡಿಒ, ವಿವಿಧ ಇಲಾಖೆ ಅಧಿ ಕಾರಿಗಳು ವಿಡಿಎಸಿ ಸಭೆಯಲ್ಲಿ ಭಾಗಿಯಾಗಿದ್ದರು. ಜಿಲ್ಲಾಧಿಕಾರಿ ಮತ್ತು ಶಾಸಕರು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಹೇಳುತ್ತೀರಿ. ಆದರೆ, ಸ್ಥಾವರ ಆರಂಭಗೊಂಡು 8 ವರ್ಷ ಗತಿಸಿದ್ದರೂ ಗೊಳಸಂಗಿ ಮಾದರಿ ಬಡಾವಣೆ ಶಾಲಾ ಕಟ್ಟಡಕ್ಕೆ ನಯಾಪೈಸೆ ಅನುದಾನ ಸಿಕ್ಕಿಲ್ಲ.
ಬರಿ ಬಿಸ್ಕಿಟ್ಟು, ಚಾಕೊಲೇಟ್, ನೋಟ್ ಬುಕ್ಗಳನ್ನು ಮಾತ್ರ ನೀಡಿದ್ದಾರೆ. ನಮ್ಮ ಮಕ್ಕಳಿಗೆ ಇದನ್ನು ಕೊಡಲು ಆಗುವುದಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ ಎಸ್ಡಿಎಂಸಿ ಅಧ್ಯಕ್ಷ ಡಿ.ಬಿ. ಕುಪ್ಪಸ್ತ (ಡಿಬಿಕೆಜಿ), ಎರಡು ವರ್ಷದ ಹಿಂದೆ ಅಲ್ಲಿನ ವಿದ್ಯಾರ್ಥಿಗಳು ನಮ್ಮ ಶಾಲಾ ಕಟ್ಟಡಕ್ಕೆ ಅನುದಾನ ನೀಡಿ. ನಮಗೆ ನಿಮ್ಮ ಚಾಕೊಲೇಟ್ ಬೇಡ ಎಂದು ನಿರಾಕರಿಸಿದ್ದನ್ನು ಸಭೆಯಲ್ಲಿ ಜ್ಞಾಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ