ಸಿಡಿ ಪ್ರಕರಣ : ಕುತಂತ್ರಕ್ಕೆ ಬಲಿಯಾಗಿ ಜೀವಕ್ಕೆ ಅಪಾಯ ತಂದುಕೊಳ್ಳುವುದು ಬೇಡ : ಎಚ್ ಡಿ ಕೆ
Team Udayavani, Mar 25, 2021, 7:05 PM IST
ಬೀದರ : ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ರಕ್ಷಣೆ ವಿಷಯದಲ್ಲಿ ಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದರೆ ಮುಖ್ಯ ನ್ಯಾಯಧೀಶರಿಂದ ಅಥವಾ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರಿಂದ ರಕ್ಷಣೆ ಪಡೆಯಲಿ. ಇಲ್ಲವೇ ಪ್ರಧಾನಿಗೆ ಪತ್ರ ಬರೆದು ನೆರವು ಕೋರಲಿ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.
ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಲೇಡಿಯನ್ನು ಕಾಂಗ್ರೆಸ್ಸಿನವರಾ ಇಲ್ಲ ಬಿಜೆಪಿಯವರಾ ಇಟ್ಟಿಕೊಂಡಿದ್ದಾರೋ ಗೊತ್ತಿಲ್ಲ. ಅವರ್ಯಾರು ಆಕೆಗೆ ರಕ್ಷಣೆಯೂ ನೀಡುವುದಿಲ್ಲ. ಯಾರದೋ ಕುತಂತ್ರಕ್ಕೆ ಬಲಿಯಾಗಿ ಜೀವಕ್ಕೆ ಅಪಾಯ ತಂದುಕೊಳ್ಳುವುದು ಬೇಡ. ಅಜ್ಞಾತ ಸ್ಥಳದಿಂದ ಯುವತಿ ಸಿಡಿಯನ್ನು ಬಿಡುಗಡೆ ಮಾಡಿದರೆ, ಆಕೆಯ ನ್ಯಾಯಯುತ ಕಳಕಳಿಗೆ ಫಲ ಸಿಗುವುದಿಲ್ಲ ಎಂದಿದ್ದಾರೆ.
ಸಿಡಿ ವಿಚಾರ ಕಾಂಗ್ರೆಸ್ ಮತ್ತು ಬಿಜೆಪಿಯವರಿಗೆ ಬಿಟ್ಟುಬಿಟ್ಟಿದ್ದೇನೆ. ನಾಡಿನ ಜನತೆ ಸಾಕಷ್ಟು ಸಂಕಷ್ಟದಲ್ಲಿದ್ದು, ಆ ಕಡೆ ಗಮನಹರಿಸುವುದನ್ನು ಬಿಟ್ಟು ಕೆಟ್ಟ ರೀತಿಯ ವಾತಾವರಣ ನಿರ್ಮಾಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿರುವುದು ವಿಷಾಧನೀಯ. ಸಿಡಿ ಪ್ರಕರಣ ವಿಷಯದಲ್ಲಿ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ನ ನಡುವಳಿಕೆಯಿಂದ ರಾಜ್ಯ ರಾಜಕಾರಣ ನಗೆಪಾಟಲಿಗೀಡಾಗಿದೆ. ಆಳುವ ಸರ್ಕಾರದ ಎಸ್ ಐ ಟಿ ದುರ್ಬಳಕೆ ಜಗಜ್ಜಾಹೀರವಾಗಿದೆ. ಹಾಗಾಗಿ ಪ್ರಕರಣವನ್ನು ಸಮಗ್ರ ಶೋಧಿಕರಿಸಿ ಕೊಳಚೆಯನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಜವಾಬ್ದಾರಿ ಸ್ಥಾನದಲ್ಲಿರುವ ಸಚಿವ ಡಾ. ಸುಧಾಕರ ಅವರ ಏಕ ಪತ್ನಿ ವ್ರತಸ್ತ ಹೇಳಿಕೆ ಖಂಡನೀಯ. ಇದು ಬಿಜೆಪಿಯವರ ನಡುವಳಿಕೆ ಎಂಥದ್ದು ಎಂಬುದನ್ನು ಜಗಜ್ಜಾಹೀರ ಮಾಡಿದ್ದಾರೆ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಪ್ರಶ್ನೆಯೊಂದಿಗೆ ಉತ್ತರಿಸಿದರು.