ರಾಜಕೀಯದಲ್ಲಿ ಮಹಿಳೆಯರಿಗೆ ಸಿಗಲಿ ಅವಕಾಶ: ಶೇಖ್
Team Udayavani, Feb 27, 2018, 12:59 PM IST
ಬೀದರ: ಪುರುಷ, ಸ್ತ್ರೀ ಎನ್ನುವ ತಾರತಮ್ಯ ತೆಗೆದು ಹಾಕಿ ರಾಜಕೀಯದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಸಿಗಬೇಕು. ಈ ನಿಟ್ಟಿನಲ್ಲಿಯೇ ಅಖೀಲ ಭಾರತ ಮಹಿಳಾ ಸಬಲೀಕರಣ ಪಕ್ಷ ಕಾರ್ಯ ನಿರ್ವಹಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಡಾ| ನೋಹೀರಾ ಶೇಖ್ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಪಕ್ಷದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ಸಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪಕ್ಷದ ಸಂಘಟನೆ ನಡೆಯಲಿದೆ. ದೇಶದ ಪ್ರಧಾನಿ ಪುರುಷರಾದರೆ, ಉಪ ಪ್ರಧಾನಿ ಮಹಿಳೆಯರನ್ನು ನೇಮಕ ಮಾಡಬೇಕು. ರಾಜ್ಯದ ಮುಖ್ಯಮಂತ್ರಿ ಪುರುಷರಾದರೆ, ಉಪ ಮುಖ್ಯಮಂತ್ರಿ ಮಹಿಳೆಯನ್ನು ನೇಮಿಸಬೇಕು. ಈ ನಿಯಮ ಪಾಲಿಸಿದರೆ ದೇಶದಲ್ಲಿ ಸಮಾನತೆ ತರಲು ಸಾಧ್ಯ. ಈ ತತ್ವದ ಮೇಲೆ ಪಕ್ಷ ಸಂಘಟನೆ ನಡೆಯಲಿದೆ ಎಂದರು. ದೇಶಕ್ಕೆ ಸ್ವಾಂತಂತ್ರ್ಯ ಸಿಕ್ಕು ಏಳು ದಶಕಗಳು ಕಳೆದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಬೆರಳಣಿಕೆಯಲ್ಲಿ ಮಾತ್ರ ಮಹಿಳೆಯರಿಗೆ ಅವಕಾಶ ಸಿಕ್ಕಿದೆ. ದೇಶದ ಸಂವಿಧಾನದಲ್ಲಿ ಶ್ರೀಮಂತರಿಗೆ, ಬಡವರಿಗೆ ಮತ್ತು ಮಹಿಳೆಯರಿಗೆ ಒಂದೇ ಕಾನೂನು ಮತ್ತು ಕಾಯ್ದೆಗಳು ಜಾರಿಗೆ ಮಾಡಲಾಗಿದೆ. ಆದರೆ ಮಹಿಳೆಯರನ್ನು ಮಾತ್ರ ದೇಶದ ರಾಷ್ಟ್ರೀಯ ಪಕ್ಷಗಳು ಕಡೆಗಣಿಸುತ್ತಿವೆ ಎಂದು ದೂರಿದರು.
ದೇಶದಲ್ಲಿನ ಭ್ರಷ್ಟಾಚಾರ ಮತ್ತು ಹೊರ ದೇಶಗಳಿಂದ ಕಪ್ಪು ಹಣ ತರುವ ಉದ್ದೇಶದಿಂದ ನೋಟ್ ಬ್ಯಾನ್ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ ನೋಟ್ ಬ್ಯಾನ್ ನಂತರ ಭ್ರಷ್ಟಚಾರ ಹೆಚ್ಚಳವಾಗಿದೆ. ಕಪ್ಪು ಹಣ ತರುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.
ದೇಶದಲ್ಲಿ ಅರ್ಧದಷ್ಟು ಬಡವರು, ಹಿಂದುಳಿದವರು, ದಲಿತ ಮಹಿಳೆಯುರು ಇದ್ದು, ನಮ್ಮ ಪಕ್ಷದ ಜತೆ ಕೈಜೋಡಿಸಿದ್ದಾರೆ. ಮಹಿಳೆಯರಿಗೆ ಸಂವಿಧಾನ ಬದ್ಧ ಹಕ್ಕು ಕೊಡಿಸುವುದೇ ನಮ್ಮ ಕರ್ತವ್ಯವಾಗಿದೆ ಎಂದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಹಕ್ಕನ್ನು ನೀಡಲಾಗುವುದು. ನಮ್ಮ ಪಕ್ಷದಲ್ಲಿ ಲಿಂಗ ತಾರತಮ್ಮವಿಲ್ಲ. ಸಮಾನ ಹಕ್ಕುಗಳು ಸಿಗಬೇಕು ಎನ್ನುವುದೇ ನಮ್ಮ ಏಕೈಕ ಉದ್ದೇಶವಾಗಿದೆ ಎಂದರು. ಸಮಾವೇಶದಲ್ಲಿ ಪಕ್ಷದ ಕೋರ್ ಕಮಿಟಿ ಸದಸ್ಯ ಆರ್.ಎ. ಜಾನ್ಸ್, ಜಿಲ್ಲಾಧ್ಯಕ್ಷ ಅಹ್ಮದ್ ಶಾ ಅಲಿ, ಹೈದರಾಬಾದ್ ಕರ್ನಾಟಕ ಉಸ್ತುವಾರಿ ನಾಸೀರ್ ಖಾನ್ ಇದ್ದರು.