ಗೋ ಸಾಕಣೆಗೆ ಯುವಕರು ಮುಂದೆ ಬರಲಿ; ಸ್ವಾಮಿ ಜ್ಯೋತಿರ್ಮಯಾನಂದ
ವ್ಯವಹಾರದ ದೃಷ್ಟಿಯಿಂದ ಗೋ ಶಾಲೆ ಆರಂಭಿಸಿಲ್ಲ. ದೇಶಿ ತಳಿಗಳ ಸಂರಕ್ಷಣೆಗಾಗಿ ಮಾಡಲಾಗಿದೆ.
Team Udayavani, Jan 25, 2021, 4:09 PM IST
ಬೀದರ: ವಿವೇಕಾನಂದರ ಆಶಯದಂತೆ ಕಳೆದೊಂದು ವರ್ಷದಿಂದ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಗೋ ಸೇವೆ ಆರಂಭಿಸಲಾಗಿದೆ. 2 ಹಸುಗಳಿಂದ ಆರಂಭವಾದ ಗೋ ಶಾಲೆಯಲ್ಲಿ ಇದೀಗ 100 ಹಸುಗಳಿವೆ. ಗೋ ಸಾಕಣೆ ವಿಷಯದಲ್ಲಿ ಆಶ್ರಮ ಮಾದರಿಯಾಗಿ, ಸ್ಥಳೀಯ ನೂರಾರು ಯುವಕರನ್ನೂ ಈ ಕಾರ್ಯದಲ್ಲಿ ಜೋಡಿಸಿಕೊಳ್ಳಬೇಕು ಎನ್ನುವುದೇ ನಮ್ಮ ಸದುದ್ದೇಶ ಎಂದು ಆಶ್ರಮದ ಸ್ವಾಮಿ ಜ್ಯೋತಿರ್ಮಯಾನಂದ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಗೋ ತಳಿ ಸಂತತಿ ಕುಸಿಯುತ್ತಿವೆ. ಈ ಹಿಂದೆ 108 ತಳಿಗಳು ಇದ್ದವು. ಆದರೆ, ಇಂದು 15 ರಿಂದ 20 ತಳಿಗಳು ಮಾತ್ರ ಉಳಿದಿರುವುದು ಬೇಸರದ ಸಂಗತಿ. ಆಶ್ರಮದಲ್ಲಿ ದೇಶೀಯ, ಭಾರತೀಯ ತಳಿಗಳ ಹಸು ಸಾಕಲಾಗುತ್ತಿದೆ.
ಗುಜರಾತ್ನ ಗೀರ್, ಕಾಂಕ್ರಿಜ್, ದೇವಣಿ ತಳಿ ಹಸು ಸಾಕಲಾಗಿದೆ. 100 ಶಾಲೆ, ಆಸ್ಪತ್ರೆ ನಡೆಸಬಹುದು. ಆದರೆ, ಗೋ ಶಾಲೆ ನಡೆಸುವುದು ಕಷ್ಟಕರ. ಹಸುಗಳನ್ನು ನಾವು ನೋಡಿಕೊಳ್ಳಬೇಕಿಲ್ಲ. ಎಲ್ಲವೂ ಚೆನ್ನಾಗಿದ್ದರೆ, ಹಸುಗಳೇ ನಮ್ಮನ್ನು ನೋಡಿಕೊಳ್ಳುತ್ತವೆ ಎಂದರು.
ಗೋ ಸೇವೆಯಿಂದ ಥೈರಾಯಿಡ್, ಬಿಪಿ ಕಾಯಿಲೆಗಳು ಗುಣಮುಖವಾದ ಉದಾಹರಣೆಗಳು ನಮ್ಮಲ್ಲಿವೆ. ಗೋ ಸಾಕಣೆ ಮಹತ್ವ ಅರಿಯಲಾದರೂ ಯುವಕರು ಗೋ ಸಾಕಣೆಗೆ ಮುಂದೆ ಬರಬೇಕು.
ಮುಂದಿನ ದಿನಗಳಲ್ಲಿ ಆಶ್ರಮದಲ್ಲೇ ಯುವಕರಿಗೆ ದೇಶೀಯ ಗೋ ಸಾಕಣೆ ಕುರಿತು ವಸತಿಯುತ ತರಬೇತಿ ನೀಡಲು ನಿರ್ಧರಿಸಲಾಗಿದೆ. ಜತೆಗೆ ಸರ್ಕಾರ 50 ಎಕರೆ ಜಾಗ ನೀಡಿದರೆ ಮಾದರಿ ಗೋ ಶಾಲೆ ನಿರ್ಮಿಸಲಾಗುವುದು. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
26ಕ್ಕೆ ಗೋ ಶಾಲೆ ವಾರ್ಷಿಕೋತ್ಸವ:
ವ್ಯವಹಾರದ ದೃಷ್ಟಿಯಿಂದ ಗೋ ಶಾಲೆ ಆರಂಭಿಸಿಲ್ಲ. ದೇಶಿ ತಳಿಗಳ ಸಂರಕ್ಷಣೆಗಾಗಿ ಮಾಡಲಾಗಿದೆ. ಲಕ್ಷಾಂತರ ರೂ. ಬ್ಯಾಂಕ್ ನಿಂದ ಸಾಲ ಪಡೆದು, ದಾನಿಗಳಿಂದ ಗೋ ಸಾಕಣೆ ಮಾಡಲಾಗುತ್ತಿದೆ. ಜ.26ರಂದು ಬೆಳಗ್ಗ 11ಕ್ಕೆ ಗೋ ಶಾಲೆ ವಾರ್ಷಿಕೋತ್ಸವ ಆಚರಣೆ ಮತ್ತು ಗೋವುಗಳಿಗೆ ಮೇವು ಸಾಗಣೆ ಇತರ ಕಾರ್ಯಗಳಿಗಾಗಿ ಗೋ ರಥವನ್ನು ಸಮರ್ಪಣೆ ಮಾಡಲಾಗುತ್ತಿದೆ.
ನೂತನ ಶೆಡ್ನ ಉದ್ಘಾಟನೆಯೂ ಜರುಗಲಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು
ಎಂದು ಮನವಿ ಮಾಡಿದರು.