ನೀರಿನ ಸಮಸ್ಯೆಯಾದಂತೆ ನೋಡಿಕೊಳ್ಳಿ
Team Udayavani, Apr 15, 2020, 4:11 PM IST
ಮಾನ್ವಿ: ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಟಾಸ್ಕ್ಫೋರ್ಸ್ ಸಭೆಯಲ್ಲಿ ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿದರು.
ಮಾನ್ವಿ: ಮಾನ್ವಿ ಮತ್ತು ಸಿರವಾರ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ತೊಂದರೆ ಆಗದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಶಾಸಕ ರಾಜಾವೆಂಕಟಪ್ಪ ನಾಯಕ ಎಚ್ಚರಿಸಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮಗಳಿಗೆ ಸಂಬಂಧಿಸಿದ ಗ್ರಾಪಂ ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬೇಸಿಗೆಯಲ್ಲಿ ಕುಡಿವ ನೀರಿನ ತೊಂದರೆ ಬಗ್ಗೆ ಪರಿಶೀಲಿಸಬೇಕು. ಅವಶ್ಯಕತೆಯಿದ್ದರೆ ಹೊಸ ಬೋರ್ವೆಲ್ ಆಳವಡಿಕೆ ಹಾಗೂ ಬೋರ್ ವೆಲ್ಗಳ ದುರಸ್ತಿ, ಪೈಪ್ಲೈನ್ ಜೋಡಣೆ ಕಾಮಗಾರಿ ಕೈಗೊಳ್ಳಬೇಕು. ದುರಸ್ತಿಗೊಂಡ ಶುದ್ಧೀಕರಣ ಘಟಕ ಪ್ರಾರಂಭಿಸಬೇಕು. ಕಾಲುವೆ ನೀರಿನಿಂದ ಕೆರೆಗಳಿಗೆ ನೀರು ಹರಿಸಬೇಕು. ಇದಕ್ಕಾಗಿ ಟಾಸ್ಕ್ಫೋರ್ಸ್ನಿಂದ ಒಂದು ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಇದುವರೆಗೂ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 300 ಬೋರ್ವೇಲ್ ಕೊರೆಸಲಾಗಿದ್ದು, 180 ಯಶಸ್ವಿಯಾಗಿದೆ. ಪಟ್ಟಣದಲ್ಲಿ ವಿವಿಧ ವಾರ್ಡ್ಗಳಲ್ಲಿ ಬೋರ್ ವೆಲ್ ಕೊರೆಸಲಾಗಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ ಕಟ್ಟುನಿಟ್ಟಾಗಿ ಕೈಗೊಳ್ಳಬೇಕು. ಜಾಗೃತಿ-ಸ್ವತ್ಛತೆ ಮಾಡಬೇಕು. ಈ ಕೆಲಸಗಳಿಗೆ ಮೇಲಾಧಿಕಾರಿಗಳ ಸಲಹೆ ಮೇರೆಗೆ ಗ್ರಾಪಂ 14ನೇ ಹಣಕಾಸು ಯೋಜನೆ ಅನುದಾನ ಬಳಸಿಕೊಳ್ಳಿ ಎಂದರು. ತಾಪಂ ಇಒ ಉಮೇಶ, ಗ್ರಾಮೀಣ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಶಶಿಕಾಂತ ವಂದಾಲಿ ಸೇರಿದಂತೆ ಪಿಡಿಒಗಳು, ಅಭಿಯಂತರರು ಇದ್ದರು.