ಮುಂಬೈನಿಂದ ಕಾಲ್ನಡಿಗೆಯಲ್ಲೇ ಬಂದ ತಾಂಡಾ ಜನ
Team Udayavani, May 11, 2020, 4:30 PM IST
ಮುದ್ದೇಬಿಹಾಳ: 530 ಕಿ.ಮೀ. ದೂರದ ಮುಂಬೈನಿಂದ ಕಾಲ್ನಡಿಗೆ ಮೂಲಕ ಬಂದ ಎರಡು ಕುಟುಂಬಗಳ ಮಕ್ಕಳು, ಮಹಿಳೆಯರು ಸೇರಿ 17 ಜನರನ್ನು ಇಲ್ಲಿನ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದರು.
ಮುಂಬೈನಿಂದ ಕಾಲ್ನಡಿಗೆಯಲ್ಲೇ ಬಂದ ಈ ಕಾರ್ಮಿಕರು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೊರೇಬಾಳ ತಾಂಡಾದವರು ಎನ್ನಲಾಗಿದೆ. ಲಾಕ್ ಡೌನ್ದಿಂದಾಗಿ ಕೆಲಸವಿಲ್ಲದೇ ಕೈಯಲ್ಲಿನ ಹಣ, ಆಹಾರ ಸಾಮಗ್ರಿ ಖಾಲಿ ಆಗುತ್ತ ಬಂದಿದ್ದರಿಂದ ಮಕ್ಕಳು, ಲಗೇಜ್ನೊಂದಿಗೆ ಈ ಎರಡು ಕುಟುಂಬಗಳು ನಡೆದುಕೊಂಡೇ ತಮ್ಮ ಸ್ವಗ್ರಾಮ ಲಿಂಗಸುಗೂರು ತಾಲೂಕಿನ ಗೊರೇಬಾಳಕ್ಕೆ ಹೊರಟಿದ್ದರು. ಇಲ್ಲಿನ ಬಸ್ ನಿಲ್ದಾಣದಲ್ಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಊಟದ ವ್ಯವಸ್ಥೆ ಮಾಡಿದ್ದನ್ನು ತಿಳಿದು ಆಗಮಿಸಿದ್ದರು.
ಆರೋಗ್ಯ ಮೇಲ್ವಿಚಾರಕರು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರ ನೇತೃತ್ವದಲ್ಲಿ ವಲಸೆ ಬಂದ ಕಾರ್ಮಿಕರ ಮಾಹಿತಿ ಸಂಗ್ರಹಿಸಿದರು. ಅವರ ಆರೋಗ್ಯ ತಪಾಸಣೆ ನಡೆಸಿ, ಊಟ, ನೀರು ಕೊಟ್ಟರು. ನಂತರ ಅವರಿಗೆ ಸ್ವಗ್ರಾಮಕ್ಕೆ ತೆರಳಲು ಖಾಸಗಿ ವಾಹನದ ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದರು.