ಸಕಲ ಸಾಧನೆಗಳಿಗೆ ಸಂಗೀತ ಸ್ಫೂರ್ತಿ
Team Udayavani, Jan 29, 2018, 12:58 PM IST
ಬೀದರ: ಸಂಗೀತವು ದೇಹ, ಬುದ್ಧಿ ಮತ್ತು ಮಾನಸಿಕ ಶಕ್ತಿ ವೃದ್ಧಿಸುತ್ತದೆ. ದಣಿದು ಬಂದ ವ್ಯಕ್ತಿ ದೇಶಿ ಸಂಗೀತ ಆಲಿಸಿದರೆ ಕ್ಷಣಾರ್ಧದಲ್ಲಿ ದಣಿವು ಕಳೆಯುತ್ತದೆ. ಸಂಗೀತ ಸಕಲ ಸಾಧನೆಗೂ ಸ್ಪೂರ್ತಿದಾಯಕವಾಗಿದ್ದು, ಅದನ್ನು ಅನುಭವಿಸುವ, ಆನಂದಿಸುವ ಸ್ವಭಾವ ನಮ್ಮದಾಗಬೇಕು ಎಂದು ಡಯಟ್ ಹಿರಿಯ ಉಪನ್ಯಾಸಕ ಶಿವಕುಮಾರ ಸ್ವಾಮಿ ಹೇಳಿದರು.
ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದಿಂದ ನಗರದ ಸಿದ್ಧಾರೂಢ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಶಾಲೆಗೊಂದು ಸಂಗೀತ ಕಾರ್ಯಕ್ರಮ’ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಹೆಚ್ಚು ಸಂಗೀತ ಆಲಿಸಬೇಕು. ಕೇವಲ ಫಲಿತಾಂಶ ತೆಗೆಯುವ ಯಂತ್ರವಾಗದೆ ಸಹಪಠ್ಯ ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಬೆಳಗುವ
ಜ್ಯೋತಿಯಾಗಬೇಕು. ಮಕ್ಕಳಲ್ಲಿ ಸಂಗೀತ ಕಲೆ ಇದ್ದರೆ ಪಾಲಕರು ಅದನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ
ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಪ್ರೊ| ಎಸ್.ವಿ. ಕಲ್ಮಠ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳನ್ನು ಸಂಗೀತದೆಡೆಗೆ ಕೊಂಡೊಯ್ದು ಮಕ್ಕಳಲ್ಲಿನ ಹಠ, ಕೋಪ ಮುಂತಾದ ಕೆಟ್ಟ ಗುಣಗಳನ್ನು ಹೋಗಲಾಡಿಸುವ ಪ್ರಯತ್ನ
ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಸಂಗೀತಮಯ ವಾತಾವರಣ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಪ್ರೊ| ದೇವೇಂದ್ರ ಕಮಲ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಚಾರ್ಯ ಮಲ್ಲಿನಾಥ ಮಠಪತಿ ಸ್ವಾಗತಿಸಿದರು. ಮಹಾರುದ್ರ ಡಾಕುಳಗಿ ನಿರೂಪಿಸಿದರು. ಶಿವಾನಂದ ಮಲ್ಲಾ ವಂದಿಸಿದರು. ವಿಶ್ವೇಶ್ವರ ಹಿರೇಮಠ, ಶಾಂಭವಿ ಕೋನಗುತ್ತಿ, ಮಡಿವಾಳಯ್ಯ ಸಾಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಬಿ.ಎಸ್. ಬಿರಾದಾರ, ನಿರಂಜನ ಸ್ವಾಮಿ, ಸುರೇಶ ಚಿಟಗುಪ್ಪಕರ್, ರಾಮರಾವ್ ಮಾನಕರ, ಶಿವಶಂಕರ ಪಾಟೀಲ, ನೂತನ್ ಎಡ್ವರ್ಡ್,
ಗುಂಡಪ್ಪ ಸಂಗೀತ ಮತ್ತಿತರರು ಇದ್ದರು.