ಪರಿಹಾರ ನಿಧಿ ಅನುದಾನ ಪಾವತಿಗೆ ಆದೇಶ
Team Udayavani, Jun 24, 2020, 8:17 AM IST
ಸಾಂದರ್ಭಿಕ ಚಿತ್ರ
ಬೀದರ: ರೈತರ ಆತ್ಮಹತ್ಯೆ, ಹಾವು ಕಡಿತ ಹಾಗೂ ಆಕಸ್ಮಿಕ ಮರಣ ಹೊಂದಿರುವುದಕ್ಕೆ ಸಂಬಂಧಿಸಿದಂತೆ ಮೃತರ ಅವಲಂಬಿತರಿಗೆ 2019-20ನೇ ಸಾಲಿನ ಪ್ರಕೃತಿ ವಿಕೋಪ ಪರಿಹಾರ ನಿಧಿ ಯೋಜನೆ ಪಿಡಿ ಖಾತೆಯಿಂದ 53 ಲಕ್ಷ ರೂ. ಅನುದಾನ ಪಾವತಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ರೈತರ ಆತ್ಮಹತ್ಯೆ, ಆಕಸ್ಮಿಕ ಮರಣ ಹಾಗೂ ಬಣವೆ ನಷ್ಟ ಪರಿಹಾರ ನೀಡುವ ಯೋಜನೆಯನ್ನು ಕೃಷಿ ಇಲಾಖೆಯಿಂದ 2019-20ನೇ ಸಾಲಿನ ವರೆಗೂ ಅನುಷ್ಠಾನಗೊಳಿಸ ಲಾಗುತ್ತಿತ್ತು. ಆದರೆ, ಕೃಷಿ ಇಲಾಖೆಯಲ್ಲಿ ಸದರಿ ಅನುದಾನ ಮೂರು ತಿಂಗಳಿಗೊಮ್ಮೆ ಬಿಡುಗಡೆಯಾಗುತ್ತಿದ್ದು, ಸಕಾಲದಲ್ಲಿ ಪರಿಹಾರ ಧನ ವಿತರಿಸಲು ಸಾಧ್ಯವಾಗುತ್ತಿಲ್ಲವೆಂದು ಸರ್ಕಾರ ಇನ್ಮುಂದೆ ಕಂದಾಯ ಇಲಾಖೆಯ ಪಿಡಿ ಖಾತೆಯಲ್ಲಿ ಹಣ ಸೆಳೆದು ಸಕಾಲದಲ್ಲಿ ರೈತರ ಆತ್ಮಹತ್ಯೆ, ಹಾವು ಕಡಿತಕ್ಕೆ, ಆಕಸ್ಮಿಕ ಮರಣ ಹಾಗೂ ಬಣವೆ ನಷ್ಟ ಪರಿಹಾರಗಳನ್ನು ಪಾವತಿಸಲು ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಿಂದ ಅವಕಾಶ ಕಲ್ಪಿಸಲಾಗಿರುವ ಪ್ರಯುಕ್ತ ಕೃಷಿ ಇಲಾಖೆಯವರು 8 ಆತ್ಮಹತ್ಯೆ, 8 ಹಾವು ಕಡಿತ ಮತ್ತು 2 ಆಕಸ್ಮಿಕ ಮರಣ ಪ್ರಕರಣಗಳ ವರದಿ ಸಲ್ಲಿಸಿದ್ದು, ಪ್ರಸ್ತುತ ಲಭ್ಯವಿರುವ ಪಿಡಿ ಖಾತೆಯಿಂದ ಪರಿಹಾರ ನೀಡಲು ಕೋರಿದೆ.
ಅಂತೆಯೇ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾದ, ಹಾವು ಕಡಿತದಿಂದ ಮೃತಪಟ್ಟ ಹಾಗೂ ಆಕಸ್ಮಿಕ ಮರಣ ಸೇರಿ ಒಟ್ಟು 18 ಪ್ರಕರಣಗಳ ಪೈಕಿ 16 ಪ್ರಕರಣಗಳಿಗೆ ಪರಿಹಾರ ಪಾವತಿಸಲು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಆದೇಶಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.