ತೊಗರಿ ದರ ಹೆಚ್ಚಳ ನಿರೀಕ್ಷೆಗೆ “ತಣ್ಣೀರು’
ಬೆಂಬಲ ಬೆಲೆಯಲ್ಲಿ ಖರೀದಿಸಲು ಹಾಕಿದ್ದ ಷರತ್ತು ಸಡಿಲಗೊಳಿಸಿ, ಪ್ರೋತ್ಸಾಹ ಧನ ಹೆಚ್ಚಿಸದಿರಲು ನಿರ್ಣಯ ಕೈಗೊಂಡಿದೆ
Team Udayavani, Feb 12, 2021, 4:58 PM IST
ಬೀದರ: ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ತೊಗರಿಗೆ 8 ಸಾವಿರ ರೂ. ನಿಗದಿಯಾಗಬಹುದೆಂಬ ರೈತರ ನಿರೀಕ್ಷೆಗೆ ಸರ್ಕಾರ ತಣ್ಣೀರೆರಚಿದೆ. ಕೇವಲ ಬೆಳೆ ಖರೀದಿ ಅವಧಿ ಮಾತ್ರ ವಿಸ್ತರಿಸಿರುವ ಸಂಪುಟ ಉಪ ಸಮಿತಿ ಬೆಂಬಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಮಾಡದಿರುವುದು ತೊಗರಿ ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ.
ಆಹಾರ ಸಚಿವ ಉಮೇಶ ಕತ್ತಿ ಇತ್ತೀಚೆಗೆ ತೊಗರಿ ಬೆಳೆಗೆ 8 ಸಾವಿರ ರೂ.ವರೆಗೂ ಬೆಂಬಲ ಬೆಲೆ ಆಗಲಿದೆ ಎಂಬ ಹೇಳಿಕೆ ರೈತರಿಗೆ ಖುಷಿ ತಂದಿತ್ತು. ಹೀಗಾಗಿ ಸೂಕ್ತ ಬೆಂಬಲ ಲೆಗಾಗಿ ಎದುರು ನೋಡುತ್ತಿದ್ದರು. ಆದರೆ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆ ಬೆಂಬಲ ಬೆಲೆಯಲ್ಲಿ ಖರೀದಿಸಲು ಹಾಕಿದ್ದ ಷರತ್ತು ಸಡಿಲಗೊಳಿಸಿ, ಪ್ರೋತ್ಸಾಹ ಧನ ಹೆಚ್ಚಿಸದಿರಲು ನಿರ್ಣಯ ಕೈಗೊಂಡಿದೆ.
ಸರ್ಕಾರದ ಈ ನಿರ್ಧಾರ ಕೋವಿಡ್-19 ಮತ್ತು ಅತಿವೃಷ್ಟಿಯಿಂದಾಗಿ ಭಾಗಶಃ ಬೆಳೆ ಕಳೆದುಕೊಂಡು ನಷ್ಟದಲ್ಲಿದ್ದ ಅನ್ನದಾತರಿಗೆ ಮತ್ತಷ್ಟು ಬರೆ ಹಾಕಿದಂತಾಗಿದೆ.
ಪ್ರತಿ ಕ್ವಿಂಟಲ್ ತೊಗರಿಗೆ 6 ಸಾವಿರ ರೂ.ನಂತೆ ಪ್ರತಿ ಎಕರೆಗೆ 7.5 ಕ್ವಿಂಟಲ್ ಗರಿಷ್ಠ ಪ್ರಮಾಣ ತ್ತು ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಲ್ ಖರೀದಿಗೆ ಸರ್ಕಾರ ಮಿತಿ ಹಾಕಿದೆ. ಗಡಿ ಜಿಲ್ಲೆ ದರನಲ್ಲಿ ಈಗಾಗಲೇ 20 ಸಾವಿರ ರೈತರು ತೊಗರಿ ಮಾರಾಟಕ್ಕಾಗಿ ಹೆಸರು ನೋಂದಣಿ ಮಾಡಿಕೊಂಡಿದ್ದು, 2 ಲಕ್ಷ ಕ್ವಿಂಟಲ್ ತೊಗರಿ ಖರೀದಿಗೆ ಅವಕಾಶ ನೀಡಲಾಗಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ತೊಗರಿ ಧಾರಣೆಯು ಬೆಂಬಲ ಬೆಲೆಗಿಂತ ಹೆಚ್ಚಿನ ದರ 6500 ರಿಂದ 7,100 ರೂ.ವರೆಗೆ ಮಾರಾಟವಾಗುತ್ತಿದೆ. ಹೀಗಾಗಿ ಬೀದರ ಸೇರಿ 8 ಜಿಲ್ಲೆಗಳಲ್ಲಿ ರೈತರು ತೊಗರಿ ಖರೀದಿ ಕೇಂದ್ರದತ್ತ ಮುಖ ಮಾಡುತ್ತಿಲ್ಲ.
ಖರೀದಿ ಕೇಂದ್ರವೇ ಅಪ್ರಯೋಜಕ: ಮಾರುಕಟ್ಟೆ ಗಿಂತ ಹೆಚ್ಚಿನ ಬೆಲೆ 8 ಸಾವಿರ ರೂ.ವರೆಗೆ ತೊಗರಿ ಖರೀದಿಸಬೇಕೆಂಬುದು ರೈತರ ಬೇಡಿಕೆ ಆಗಿತ್ತು. ಇದಕ್ಕೆ ಸಚಿವ ಕತ್ತಿ ಪೂರಕ ಹೇಳಿಕೆಯಿಂದ ಸ್ಪಂದನೆಯೂ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ, ಮಾರುಕಟ್ಟೆಯಲ್ಲಿ ಅ ಧಿಕ ದರ ಇರುವುದನ್ನು ನೆಪ ಮಾಡಿಕೊಂಡ ಸರ್ಕಾರ ಬೆಂಬಲ ಬೆಲೆಯಡಿ ಖರೀದಿ ಕೇಂದ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತೊಗರಿಗೆ ಯಾವುದೇ ಪ್ರೋತ್ಸಾಹಧನ ಘೋಷಿಸುವ ಅವಶ್ಯಕತೆ ಇಲ್ಲ ಎಂದು ಸಮಿತಿ ಪರಿಗಣಿಸಿದೆ. ಸರ್ಕಾರದ ಈ ತೀರ್ಮಾನದಿಂದ ಸದ್ಯ ತೊಗರಿ ಖರೀದಿ ಕೇಂದ್ರವೇ ರೈತರಿಗೆ ಅಪ್ರಯೋಜಕವಾಗಿದೆ. ಬೆಂಬಲ ಬೆಲೆ
ಯೋಜನೆಯಡಿ ತೊಗರಿ ಖರೀದಿ ಕಾಲಾವಧಿ ವಿಸ್ತರಿಸಲು ಅನುಮೋದನೆ ನೀಡಲಾಗಿದೆ.
ಈ ಹಿಂದೆ ತೊಗರಿ ಖರೀದಿ ನೋಂದಣಿಗಾಗಿ ಜ.30 ಮತ್ತು ಮಾರಾಟಕ್ಕಾಗಿ ಫೆ.28 ಅಂತಿಮ ದಿನವಾಗಿತ್ತು. ಈಗ ಉಪ ಸಮಿತಿ ನೋಂದಣಿ ಅವ ಧಿಯನ್ನು ಫೆ.28ರವರೆಗೆ ಹಾಗೂ ಖರೀದಿ ಅವಧಿ ಮಾ.14ರವರೆಗೆ ವಿಸ್ತರಿಸಲಾಗಿದೆ.
ಬೀದರ ಜಿಲ್ಲೆಯಲ್ಲಿ 125 ಕಡೆ ಬೆಂಬಲ ಬೆಲೆಯಡಿ ತೊಗರಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ಜ.12ರಿಂದ ಚಾಲನೆ ನೀಡಲಾಗಿದೆ. 20 ಸಾವಿರಕ್ಕೂ ಅಧಿ ಕ ರೈತರು ನೋಂದಣಿ ಮಾಡಿಸಿದ್ದಾರೆ. ಆದರೆ, ತೊಗರಿಗೆ ಮಾರುಕಟ್ಟೆಯಲ್ಲೇ ಬೆಂಬಲ ಬೆಲೆಗಿಂತ ಹೆಚ್ಚಿನ ದರ ಇರುವುದರಿಂದ ಒಬ್ಬ ರೈತರೂ ಸಹ ಬೆಂಬಲ ಬೆಲೆಯಡಿ ತೊಗರಿ ಮಾರಾಟ ಮಾಡಿಲ್ಲ.ತೊಗರಿ ನೋಂದಣಿ, ಖರೀ ದಿ ಕಾಲಾವಧಿ ವಿಸ್ತರಿಸಲಾಗಿದೆ.
ಭಗವಂತರಾಯ್, ವ್ಯವಸ್ಥಾಪಕರು, ರಾಜ್ಯ ಸಹಕಾರ ಮಾರಾಟ ಮಹಾಮಂಡಳ
ಅತಿವೃಷ್ಟಿಯಿಂದಾಗಿ ತೊಗರಿ ಬಹುತೇಕ ಹಾಳಾಗಿದ್ದು, ಶೇ.10ರಿಂದ 15 ಬೆಳೆ ಚೆನ್ನಾಗಿದೆ. ಮಾರುಕಟ್ಟೆಯಲ್ಲಿ 7 ಸಾವಿರಕ್ಕೂ ಅಧಿ ಕ ದರ ಹಿನ್ನೆಲೆಯಲ್ಲಿ ಕ್ವಿಂಟಲ್ಗೆ 8 ಸಾವಿರ ರೂ. ಬೆಲೆ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಆದರೆ, ಖರೀದಿ ಕೇಂದ್ರಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ಸಿಗದ್ದರಿಂದ ಪ್ರೋತ್ಸಾಹ ಧನ ಘೋಷಿಸುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ನಿರ್ಣಯಿಸಿರುವುದು ರೈತರನ್ನು ಮೂರ್ಖರನ್ನಾಗಿಸುತ್ತಿದೆ. ಕೂಡಲೇ ಬೆಳೆಗಾರರಿಗೆ ಅನುಕೂಲ ಆಗುವಂತೆ ದರ ಘೋಷಿಸಬೇಕು. ಇಲ್ಲವಾದರೆ ಆರ್ಥಿಕ ಸಂಕಷ್ಟದಲ್ಲಿರುವ ರೈತರು ಹೋರಾಟಕ್ಕಾಗಿ ಬೀದಿಗಿಳಿಯಬೇಕಾಗುತ್ತದೆ.
ಮಲ್ಲಿಕಾರ್ಜುನ ಸ್ವಾಮಿ, ಅಧ್ಯಕ್ಷ, ಜಿಲ್ಲಾ ರೈತ ಸಂಘ, ಬೀದರ
ಮಾರುಕಟ್ಟೆಯಲ್ಲಿ 6500 ರಿಂದ
7,100 ದರ!
ಬೆಳೆ ಖರೀದಿ ಅವಧಿ ಮಾತ್ರ ವಿಸ್ತರಣೆ
ಖರೀದಿ ಕೇಂದ್ರಗಳೇ ಅಪ್ರಯೋಜಕ
*ಶಶಿಕಾಂತ್ ಬಂಬುಳಗೆ