ಅರ್ಥ ವ್ಯವಸ್ಥೆ ಸದೃಢಕ್ಕೆ ಪಿಕೆಪಿಎಸ್ ಪೂರಕ
Team Udayavani, Jan 23, 2021, 3:50 PM IST
ಬೀದರ: ಸಹಕಾರ ಕ್ಷೇತ್ರದಲ್ಲಿರುವ ಪಿಕೆಪಿಎಸ್ಗಳು ರೈತರಿಗೆ ಸಾಲ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ದೇಶದ ಅರ್ಥ ವ್ಯವಸ್ಥೆ ಸದೃಢಗೊಳಿಸುವಲ್ಲಿ ತನ್ನದೇಯಾದ ಸಹಾಯ ಮಾಡುತ್ತಿವೆ. ಸಮಾಜದಲ್ಲಿ ಆರ್ಥಿಕ ಸಮಾನತೆ ತರುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ ಎಂದು ನಬಾರ್ಡ್ ಬೆಂಗಳೂರಿನ ಸಹಾಯಕ ಮಹಾಪ್ರಬಂಧಕ ರೋನಿ ರಾಜು ಹೇಳಿದರು.
ನಗರದ ಸಹಾರ್ದ ಸಂಸ್ಥೆಯಲ್ಲಿ ಚಿಕ್ಕಮಗಳೂರು, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಪ್ಯಾಕ್ಸ್ಗಳ ಸಿಇಒಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ 96540 ಪಿಕೆಪಿಎಸ್ಗಳಿದ್ದು, 14 ಕೋಟಿ ಸದಸ್ಯರ ಬಂಡವಾಳದೊಂದಿಗೆ ಗ್ರಾಮೀಣ ರೈತರಿಗೆ ಬ್ಯಾಂಕಿಂಗ್ ಸವಲತ್ತುಗಳನ್ನು ಒದಗಿಸುತ್ತಿದೆ. ಬದಲಾದ ಪರಿಸ್ಥಿತಿಗಳಿಗೆ ತಕ್ಕಂತೆ ಸುಧಾರಣೆ ಕಾಣುತ್ತಿವೆ. ಪ್ರಧಾನಿ ಆಶಯದಂತೆ ಆತ್ಮನಿರ್ಭರ ಭಾರತದ ನಿರ್ಮಾಣಕ್ಕೆ ಮತ್ತು ಸ್ಥಳೀಯ ಆರ್ಥಿಕತೆಗೆ ಬಲ ತುಂಬುವತ್ತ ಕಾರ್ಯ ನಡೆಸುತ್ತವೆ. ಪಿಕೆಪಿಎಸ್ಗಳ ಸುಧಾರಣೆಗಾಗಿ ನಬಾರ್ಡ್ ಕೂಡಾ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.
ಸಹಕಾರ ಸಂಘಗಳು ರೈತರಿಗೆ ಬೆಳೆ ಸಾಲ, ಮಧ್ಯಮ ಸಾಲ, ಫಸಲ ಭಿಮಾ ಯೋಜನೆ ಹಾಗೂ ಆರೋಗ್ಯ ಮತ್ತು ಅಪಘಾತ ವಿಮಾ ಸೌಲಭ್ಯಗಳು ಮೊದಲಾದ ವ್ಯವಹಾರಗಳನ್ನು ನಡೆಸುವುದರ ಜೊತೆಗೆ ಉತ್ಪನ್ನ ಖರೀದಿ ಮಾರಾಟ ಮಾರುಕಟ್ಟೆ ವಿಸ್ತರಣೆಗಳನ್ನು ಮೈಗೂಡಿಸಿಕೊಂಡು ಸಶಕ್ತರಾಗಿ ಬೆಳೆಯಬೇಕು. ಸಿಬ್ಬಂದಿ ತಮ್ಮ ವೃತ್ತಿ ಕೌಶಲ್ಯ ಹೆಚ್ಚಿಸಿಕೊಂಡು ಇದಕ್ಕೆ ತಯಾರಾಗಬೇಕು ಎಂದರು.
ಡಿಸಿಸಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ವಿಠಲರೆಡ್ಡಿ ಯಡಮಲ್ಲೆ ಮಾತನಾಡಿದರು. ಡಿಸಿಸಿ ಬ್ಯಾಂಕ್ ಸಿಇಒ ಮಹಾಜನಮಲ್ಲಿಕಾರ್ಜು ನಬಾರ್ಡ್ ಅಧಿಕಾರಿ ಮನೀಶಕುಮಾರ ಇದ್ದರು. ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿದರು. ಮಹಾಲಿಂಗ ನಿರೂಪಿಸಿದರು. ಅನಿಲ ಪರೇಶ್ಯಾನೆ ವಂದಿಸಿದರು.