ಧಾರ್ಮಿಕ ಉತ್ಸವಗಳಿಂದ ಭಾವೈಕ್ಯತೆ: ಖಂಡ್ರೆ
Team Udayavani, Jan 4, 2019, 8:33 AM IST
ಭಾಲ್ಕಿ: ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ನಡೆಯುವ ಧಾರ್ಮಿಕ ಉತ್ಸವಗಳು ಜನರಲ್ಲಿ ಭಾವೈಕ್ಯತೆ ಮೂಡಿಸುತ್ತವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಹೇಳಿದರು. ಹಲಬರ್ಗಾ ಗ್ರಾಮದಲ್ಲಿ ಶ್ರೀ ಗುರು ರಾಚೋಟೇಶ್ವರ ವಿರಕ್ತ ಮಠದಲ್ಲಿ ನಡೆದ ಶ್ರೀ ಸಿದ್ಧರಾಮೇಶ್ವರ ನಮ್ಮೂರ 6ನೇ ಜಾತ್ರಾಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಇಂದು ಭೌತಿಕವಾಗಿ ಬಹಳ ಬೆಳೆಯುತ್ತಿದ್ದಾನೆ. ಆದರೆ ಹೃದಯವಂತಿಕೆಯಲ್ಲಿ ಕ್ಷುಬ್ಜನಾಗುತ್ತಿದ್ದಾನೆ. ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಜನ ಸಾಮಾನ್ಯರಲ್ಲಿ ಪ್ರೀತಿ, ಗೌರವ ಭಾವ ಮೂಡಿಸಲು ಇಂತಹ ಧಾರ್ಮಿಕ ಕಾರ್ಯಕ್ರಗಳು ಅಗತ್ಯವಾಗಿ ಬೇಕು ಎಂದರು.
ಶ್ರೀ ಮಠದ ಕಲ್ಯಾಣ ಮಂಟಪ, ಸಮುದಾಯ ಭವನ ಹಾಗೂ ನಾನಾ ಕಾಮಗಾರಿಗಳಿಗಾಗಿ ಸುಮಾರು 25 ಲಕ್ಷ
ರೂ. ಅನುದಾನ ನೀಡಿದ್ದು, ಕಾಮಗಾರಿ ಪೂರ್ಣಗೊಳಿಸಲು ಇನ್ನೂ ಹೆಚ್ಚು ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಸನ್ನಿಧಾನ ವಹಿದ್ದ ಶ್ರೀ ಹಾವಗಿಲಿಂಗೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಎಲ್ಲ ಸಂಸ್ಕಾರಗಳಲ್ಲಿ ಧಾರ್ಮಿಕ ಸಂಸ್ಕಾರ ಮಾನವನಿಗೆ ಅತಿಮುಖ್ಯವಾಗಿ ಬೇಕು. ಭೌತಿಕ ಸಂಪತ್ತಿಗಿಂತ ಆಧ್ಯಾತ್ಮಿಕ ಸಂಪತ್ತು ಶ್ರೇಷ್ಠವಾಗಿದೆ. ಶ್ರೀ ಮಠದ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಶಾಸಕ ಈಶ್ವರ ಖಂಡ್ರೆ ಅವರು ಸಾಕಷ್ಟು ಸಹಕಾರ ನೀಡುತ್ತಿದ್ದಾರೆ ಎಂದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುತ್ಯಾನ ಬಬಲಾದ ಶ್ರೀ ಗುರುಪಾದಲಿಂಗ ಸ್ವಾಮೀಜಿ, ಭೀಮರಾಯನ ಗುಡಿ ಜ್ಞಾನೇಶ್ವರಿ, ಹಲಬರ್ಗಾದ ಈಶ್ವರಿ ವಿಶ್ವವಿದ್ಯಾಲಯದ ವಾಣಿ ಸಹೋದರಿ, ಶಿವಾಜಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಮಾತನಾಡಿದರು. ಅಖೀಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ರಿಕ್ಕೆ, ಯುವ ಘಟಕದ ತಾಲೂಕು ಅಧ್ಯಕ್ಷ ಮಹಾದೇವ ಕಾಸಿಸ್ವಾಮಿ, ಹಣಮಂತರಾವ್ ಚವ್ಹಾಣ, ಸಂತೋಷ ಬಿಜಿ ಪಾಟೀಲ, ಗೋರಖ, ಪಪ್ಪು ಪಾಟೀಲ ಖಾನಾಪೂರ, ಚಂದ್ರಕಾಂತ ರಿಕ್ಕೆ ಹಾಗೂ ಜ್ಯಾಂತಿ, ಧನ್ನೂರಾ ಗ್ರಾಮದ ಭಕ್ತರು ಇದ್ದರು. ಸಂಗೀತ ಕಲಾವಿದ ಚದಾನಂದ, ವಿಶ್ವನಾಥ ಐನೋಳಿ ವಚನ ಗಾಯನ ನಡೆಸಿ ಕೊಟ್ಟರು.