ನೀರಾವರಿ ಪ್ರದೇಶ ವೃದ್ದಿಸಲು ಆದ್ಯತೆ
Team Udayavani, Jan 25, 2022, 1:58 PM IST
ಭಾಲ್ಕಿ: ತಾಲೂಕಿನಲ್ಲಿ ನೀರಾವರಿ ಪ್ರದೇಶ ವೃದ್ಧಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಕಾರಂಜಾ ಉಪ ವಿಭಾಗದ ಕಚೇರಿ ಆವರಣದಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಉಪ ವಿಭಾಗದ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
60ರ ದಶಕದಲ್ಲಿ ಆರಂಭವಾಗಿದ್ದ ಕಾರಂಜಾ ಯೋಜನೆ ಇದುವರೆಗೂ ಪೂರ್ಣಗೊಂಡಿರಲಿಲ್ಲ. ಆದರೆ, ನಾನು ಮಂತ್ರಿ ಆಗಿದ್ದ ಸಂದರ್ಭದಲ್ಲಿ ಈ ಯೋಜನೆಗೆ ಚುರುಕು ಮುಟ್ಟಿಸಿ ಸುಮಾರು 500 ಕೋಟಿ ರೂ. ಅನುದಾನ ಒದಗಿಸಿ ಎಡದಂಡೆ ಮತ್ತು ಬಲದಂಡೆ ಕಾಲುವೆಯ 131 ಕಿ.ಮೀ. ಕಾಲುವೆ ಆಧುನೀಕರಣಗೊಳಿಸಲಾಗಿದೆ. ಇದರ ಪರಿಣಾಮ ಈಗ ಕಾಲುವೆ ಕೊನೆಯ ಅಂಚಿನ ವರೆಗೂ ನೀರು ಹರಿಯುತ್ತಿದ್ದು, 40-50 ಸಾವಿರ ಎಕರೆ ಜಮೀನು ನೀರಾವರಿ ಪ್ರದೇಶವಾಗಿ ಪರಿವರ್ತನೆ ಆಗಿದೆ. ಇದರಿಂದ ವರ್ಷದಲ್ಲಿ ಒಂದು ಬೆಳೆ ಬೆಳೆಯಲು ಹೈರಾಣ ಅನುಭವಿಸುತ್ತಿದ್ದ ರೈತರು ಈಗ ಎರಡ್ಮೂರು ಬೆಳೆ ಬೆಳೆದು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಂಡು ಸ್ವಾವಲಂಬಿ ಬದುಕು ಸಾಗಿಸುತ್ತಿದ್ದಾರೆ ಎಂದರು.
ನೀರಾವರಿ ನಿಗಮದ ಅಧೀಕ್ಷಕ ವಿಲಾಸ ಮಾಶೆಟ್ಟೆ ಅಧ್ಯಕ್ಷತೆ ವಹಿಸಿದ್ದರು. ಶಂಭುಲಿಂಗ ಕುದರೆ ಮಾತನಾಡಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ತಾಪಂ ಮಾಜಿ ಅಧ್ಯಕ್ಷ ಶಿವಕುಮಾರ ದೇಶಮುಖ, ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಹಣಮಂತರಾವ ಪಾಟೀಲ್ ಕಣಜಿ, ಚುಳಕಿನಾಲಾ ನೀರು ಬಳಕೆದಾರರ ಸಂಘದ ಅಧ್ಯಕ್ಷ ಹಣಮಂತರಾವ ಬಿರಾದಾರ್ ಕೊಟಗೇರಾ, ಮಲ್ಲಿಕಾರ್ಜುನ ಪಾಟೀಲ್, ಅಶೋಕರಾವ ಸೋನಜಿ, ರಾಜಕುಮಾರ ಕಾರಾಮುಂಗೆ, ಕಲಬುರ್ಗಿಯ ಕಾರ್ಯಪಾಲಕ ಅಭಿಯಂತರ ಅಬ್ದುಲ್ ಖುದ್ದಸ್, ಎಇಇ ಚಂದ್ರಕಾಂತ ರತ್ನಾಪೂರೆ, ಜ್ಞಾನೇಶ್ವರ ಮಂಡೆ, ಧನರಾಜ ಲದ್ದೆ, ರಾಜಕುಮಾರ ಜಲ್ಲೆ, ಸೂರ್ಯಕಾಂತ ವಾಡೆಕರ, ಎ.ಇ. ಚನ್ನಬಸವಾ ಬೋಚರೆ, ಅಮರ ಹೂಗಾರ, ಅಮರ ಮಠಪತಿ, ಚಂದ್ರಕಾಂತ ಚಂಡಕಾಪೂರೆ, ಅನಿಲಕುಮಾರ ರಂಜೇರೆ ಕಣಜಿ ಇದ್ದರು.