ಶಾಲೆಯಲ್ಲಿ ವಿವಾದಾತ್ಮಕ ನಾಟಕ ಪ್ರದರ್ಶನ ವಿರೋಧಿಸಿ ಪ್ರತಿಭಟನೆ
Team Udayavani, Jan 28, 2020, 12:22 PM IST
ಬೀದರ: ನಗರದ ಶಾಹಿನ್ ಶಿಕ್ಷಣ ಸಂಸ್ಥೆಯ ಶಾಲೆಯ ವಾರ್ಷಿಕೋತ್ಸವದಲ್ಲಿ ವಿವಾದಾತ್ಮಕ ಕಿರುನಾಟಕ ಪ್ರದರ್ಶನ ಮಾಡಲಾಗಿದೆ ಎಂದು ಆರೋಪಿಸಿ ನಗರದಲ್ಲಿ ಸೋಮವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನೆ ನಡೆಸಿ, ಗೃಹ ಸಚಿವರು ಮತ್ತು ಶಿಕ್ಷಣ ಸಚಿವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಶಾಲೆಯ ವಾರ್ಷಿಕೋತ್ಸವದ ವೇಳೆ ಮಕ್ಕಳಿಂದ ಸಿಎಎ, ಎನ್ಆರ್ಸಿಯನ್ನು ವಿರೋಧಿಸುವ ನಾಟಕ ಪ್ರದರ್ಶನ ಮಾಡಲಾಗಿದೆ. ಜತೆಗೆ ಪ್ರಧಾನಿಯನ್ನು ನಿಂದಿಸಲಾಗಿದೆ. ಕೊಮು ಸಂಘರ್ಷಕ್ಕೆ ಎಡೆಮಾಡಿಕೊಡುವ ಘಟನೆ ಇದಾಗಿದ್ದು, ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ. ಇದಕ್ಕೆ ಶಾಲಾ ಶಿಕ್ಷಕರ ಹಾಗೂ ಆಡಳಿತ ಮಂಡಳಿಯ ಕುಮ್ಮಕ್ಕು ಕಾರಣ. ಈ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ್ ಮಾತನಾಡಿದರು. ಪ್ರಮುಖರಾದ ಚನ್ನಬಸವ ಬಿರಾದರ, ಅನಿಲ ಚೌಧರಿ, ವಿಕಾಸ ಚೋರಮಲ್ಲೆ, ಅರವಿಂದ ಸುಂದಳಕರ, ಅನಂಧ ಡೋಬಾಳೆ, ಅಮರ ಸುಲ್ತಾನಪೂರೆ, ಅಂಕುಶ, ಸುಧಾಕರ, ವಿಶಾಲ ಮತ್ತಿತರರು ಇದ್ದರು.